ಗುಜರಾತ್ನಲ್ಲಿ ಹೂಡಿಕೆ ಮಾಡದಂತೆ ವಿದೇಶಿ ಹೂಡಿಕೆದಾರರಿಗೆ ಬೆದರಿಕೆ: ಪ್ರಧಾನಿ ಮೋದಿ ಗಂಭೀರ ಆರೋಪ
ಅಹ್ಮದಾಬಾದ್, ಸೆಪ್ಟೆಂಬರ್ 27: ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ಶೃಂಗಸಭೆಯ 20 ವರ್ಷಗಳ ಪ್ರಯಾಣವನ್ನು ಮೋದಿ ನೆನಪಿಸಿಕೊಂಡರು. ಇದೇ ವೇಳೆ, ಅಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆ ಸಮಯದಲ್ಲಿ ಕೇಂದ್ರ ಸರ್ಕಾರ ಯಾವುದೇ ಸಹಕಾರವನ್ನು ನೀಡಲಿಲ್ಲ ಎಂದು ಹೇಳಿದರು.
ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಲು ಅಂದಿನ ಕೇಂದ್ರ ಸಚಿವರು ನಿರಾಕರಿಸಿದರು. ಗುಜರಾತ್ನಲ್ಲಿ ಬಂಡವಾಳ ಹೂಡಿಕೆ ಮಾಡಬಾರದು ಎಂದು ವಿದೇಶಿ ಹೂಡಿಕೆದಾರರಿಗೆ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಿದರು.

ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾದರೂ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲವೆಂದು ಮೋದಿ ಹೇಳಿದರು.
ಉತ್ತಮ ಹಾಗೂ ನ್ಯಾಯಯುತ ಆಡಳಿತ ನೀಡುವ ಪಾರದರ್ಶಕ ಸರ್ಕಾರದಿಂದ ಮಾತ್ರ ಬಂಡವಾಳವನ್ನು ಆಕರ್ಷಿಸಲು ಸಾಧ್ಯವೆಂದು ಪ್ರಧಾನಿ ಮೋದಿ ತಿಳಿಸಿದರು. ಹಿಂದಿನ ಕೇಂದ್ರ ಸರ್ಕಾರವು ರಾಜಕೀಯದ ಕನ್ನಡಕದ ಮೂಲಕ ಗುಜರಾತ್ನ ಪ್ರಗತಿಯನ್ನು ನೋಡುತ್ತಿತ್ತು ಎಂದು ಆರೋಪಿಸಿದರು.
'ಕೇಂದ್ರ ಸಚಿವರು ಖಂಡಿತ ಬರುತ್ತೇವೆ ಎಂಬುದಾಗಿ ಹೇಳುತ್ತಿದ್ದರು. ಆದರೆ, ಅವರಿಗೆ ಹೋಗಬೇಡಿ ಎಂದು ಹಿಂದಿನಿಂದ ಯಾರೋ ಬೆದರಿಕೆವೊಡ್ಡುತ್ತಿದ್ದರು. ಅವರು ಎಂದಿಗೂ ಸಹಕರಿಸಲಿಲ್ಲ. ಅವರು ರಸ್ತೆ ತಡೆಗಳನ್ನು ಸೃಷ್ಟಿಸಿದರು' ಎಂದು ಪ್ರಧಾನಿ ಮೋದಿ ಹೇಳಿದರು.

'2009 ರಲ್ಲಿ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿತ್ತು. ಆದರೆ, ವೈಬ್ರಂಟ್ ಗುಜರಾತ್ ಮಾತ್ರ ಮುನ್ನಡೆಯುತ್ತಿತ್ತು. ಇದೇ ಹೇಗೆ ಸಾಧ್ಯವೆಂದು ಎಲ್ಲರೂ ನನ್ನನ್ನು ಕೇಳಿದ್ದು ನೆನಪಿದೆ ಎಂದು ಅವರು ತಿಳಿಸಿದರು.
ವೈಬ್ರಂಟ್ ಗುಜರಾತ್ ಎಂದಿಗೂ ಗುಜರಾತ್ಗೆ ಸೀಮಿತವಾಗಿಲ್ಲ. ಇದಕ್ಕೆ ಎಲ್ಲಾ ರಾಜ್ಯಗಳನ್ನು ಆಹ್ವಾನಿಸಲಾಗಿದೆ. ಗುಜರಾತ್ ಅನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
'ಗುಜರಾತ್ ಯಾವಾಗಲೂ ವ್ಯಾಪಾರಿಗಳ ರಾಜ್ಯ ಎಂದು ಕರೆಯಲಾಗುತ್ತಿತ್ತು. ಆದರೆ 21 ನೇ ಶತಮಾನದಲ್ಲಿ, ರಾಜ್ಯದಲ್ಲಿ ವ್ಯಾಪಾರದ ಜೊತೆಜೊತೆಗೆ ಕೃಷಿ, ಹಣಕಾಸು, ಕೈಗಾರಿಕಾ ಮತ್ತು ಉತ್ಪಾದನೆಯಲ್ಲಿಯೂ ಗುಜರಾತ್ ಬೆಳವಣಿಗೆ ಸಾಧಿಸಿತು' ಎಂದು ಅವರು ತಿಳಿಸಿದರು.

ಭಾರತ ಶೀಘ್ರದಲ್ಲೇ ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ. ಕೆಲವೇ ವರ್ಷಗಳಲ್ಲಿ ಭಾರತವು ಅಗ್ರ 3 ಆರ್ಥಿಕತೆಗಳಲ್ಲಿ ಸ್ಥಾನ ಪಡೆಯುವುದು ನನ್ನ ಭರವಸೆಯಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟರು.
ವೈಬ್ರಂಟ್ ಗುಜರಾತ್ ಹೂಡಿಕೆದಾರರ ಶೃಂಗಸಭೆಯನ್ನು 2003 ರಲ್ಲಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು. ಅವರು ಆಗ ಮುಖ್ಯಮಂತ್ರಿಯಾಗಿದ್ದರು.












Click it and Unblock the Notifications