ಈ ಮೀಸಲಾತಿ ಇನ್ನೂ ಎಷ್ಟು ತಲೆಮಾರುಗಳವರೆಗೆ ಇರುತ್ತದೆ?: ಸುಪ್ರೀಂಕೋರ್ಟ್ ಪ್ರಶ್ನೆ
ನವದೆಹಲಿ, ಮಾರ್ಚ್ 20: ಇನ್ನೂ ಎಷ್ಟು ಪೀಳಿಗೆಗಳವರೆಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿನ ಮೀಸಲಾತಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮರಾಠಾ ಕೋಟಾ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆ ಎತ್ತಿದೆ. ಒಟ್ಟಾರೆ ಶೇ 50ರಷ್ಟು ಮೀಸಲಾತಿಯನ್ನು ತೆಗೆದುಹಾಕಿದರೆ ಉದ್ಭವಿಸುವ ಅಸಮಾನತೆಯ ಪರಿಣಾಮದ ಬಗ್ಗೆ ಕೂಡ ಅದು ಕಳವಳ ವ್ಯಕ್ತಪಡಿಸಿದೆ.
ಬದಲಾದ ಸನ್ನಿವೇಶದಲ್ಲಿ ಕೋಟಾದ ಕುರಿತಾದ ಮಂಡಲ್ ತೀರ್ಪಿನ ಬಗ್ಗೆ ಮರು ಪರಿಶೀಲನೆ ನಡೆಯಬೇಕಾದ ಅಗತ್ಯವಿದೆ ಎಂದು ಮಹಾರಾಷ್ಟ್ರ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ತಿಳಿಸಿದರು.
ಮಂಡಲ್ ತೀರ್ಪು 1931ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನೀಡಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಮೀಸಲಾತಿ ಕೋಟಾಗಳನ್ನು ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳು ಬಿಟ್ಟುಕೊಡಬೇಕು ಎಂದು ಅವರು ಮನವಿ ಮಾಡಿದರು. ಮುಂದೆ ಓದಿ.

ಕೇಂದ್ರದ ಮಿಸಲಾತಿ ನೀತಿ ಉಲ್ಲಂಘನೆ
ಮರಾಠರಿಗೆ ಕೋಟಾ ನೀಡುವ ಮಹಾರಾಷ್ಟ್ರ ಕಾನೂನಿನ ಪರ ವಾದ ಮಂಡಿಸಿದ ರೋಹಟಗಿ, ಇಂದ್ರಾ ಸಾಹ್ನಿ ಪ್ರಕರಣ ಎಂದೂ ಹೆಸರಾಗಿರುವ ಮಂಡಲ್ ತೀರ್ಪಿನ ವಿವಿಧ ಆಯಾಮಗಳು ಮಂಡಿಸಿದರು. ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳ ಜನರಿಗೆ ಶೇ 10ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರ ಕೂಡ ಶೇ 50ರ ಮೀಸಲಾತಿ ಮಿತಿಯನ್ನು ಉಲ್ಲಂಘಿಸಿದೆ ಎಂದು ಹೇಳಿದರು.

ಎಷ್ಟು ತಲೆಮಾರಿಗೆ ಮೀಸಲಾತಿ?
'ನೀವು ಸಲಹೆ ನೀಡುತ್ತಿರುವಂತೆ ಒಂದು ವೇಳೆ ಶೇ 50ರಷ್ಟು ಅಥವಾ ಮಿತಿಯೇ ಇಲ್ಲ ಎಂದಾದರೆ, ಸಮಾನತೆ ಪರಿಕಲ್ಪನೆಯ ಪ್ರಯೋಜನವೇನು? ನಾವು ಅಂತಿಮವಾಗಿ ಅದರೊಂದಿಗೆ ವ್ಯವಹರಿಸಬೇಕಾಗುತ್ತದೆ. ಅದರ ಕುರಿತು ನಿಮ್ಮ ಅಭಿಪ್ರಾಯ ಏನು? ಪರಿಣಾಮಕ ಅಸಮಾನತೆ ಬಗ್ಗೆ ಏನು? ಎಷ್ಟು ತಲೆಮಾರುಗಳವರೆಗೆ ನೀವು ಇದನ್ನು ಮುಂದುವರಿಸುತ್ತೀರಿ?' ಎಂದು ಪೀಠ ಪ್ರಶ್ನಿಸಿತು.
ಮಂಡಲ್ ತೀರ್ಪು 1931ರ ಜನಗಣತಿಯನ್ನು ಆಧಾರಿಸಿರುವುದರಿಂದ ಅದರ ಬಗ್ಗೆ ಮರು ಪರಿಶೀಲನೆ ನಡೆಸಲು ಅನೇಕ ಕಾರಣಗಳಿವೆ. ಮುಖ್ಯವಾಗಿ ಜನಸಂಖ್ಯೆಯು ಈಗ ಹಲವು ಪಟ್ಟು ಹೆಚ್ಚಾಗಿದ್ದು, 135 ಕೋಟಿ ತಲುಪಿದೆ ಎಂದು ರೋಹಟಗಿ ಹೇಳಿದರು.

ಯಾರೂ ಮುಂದುವರಿದಿಲ್ಲವೇ?
'ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಸರ್ಕಾರಗಳು ಅನೇಕ ಪ್ರಯೋಜನಾಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ ಯಾವ ಅಭಿವೃದ್ಧಿಯೂ ನಡೆದಿಲ್ಲ ಮತ್ತು ಯಾವ ಹಿಂದುಳಿದ ಜಾತಿಯೂ ಮುಂದುವರಿದಿಲ್ಲ ಎಂದು ನಾವು ಒಪ್ಪಿಕೊಳ್ಳಬಹುದೇ?' ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಶ್ನಿಸಿತು.

ಮುಂದುವರಿದಿದ್ದೇವೆ, ಆದರೆ...
'ಹೌದು ನಾವು ಮುಂದುವರಿದಿದ್ದೇವೆ. ಆದರೆ ಹಿಂದುಳಿದ ವರ್ಗಗಳು ಶೇ 50 ರಿಂದ ಶೇ 20ಕ್ಕೆ ಕುಸಿದಿಲ್ಲ. ಈ ದೇಶದಲ್ಲಿ ಇಂದಿಗೂ ಹಸಿವಿನಿಂದ ಸಾವಿನ ಪ್ರಕರಣಗಳು ನಡೆಯುತ್ತಿವೆ. ಇಂದ್ರಾ ಸಾಹ್ನಿ ಸಂಪೂರ್ಣವಾಗಿ ತಪ್ಪು, ಅದನ್ನು ಕಸದ ಬುಟ್ಟಿಗೆ ಹಾಕಿ ಎಂದು ನಾನು ಇಲ್ಲಿ ಹೇಳಲು ಪ್ರಯತ್ನಿಸುತ್ತಿಲ್ಲ. ನಾನು ಹೇಳುತ್ತಿರುವುದು, 30 ವರ್ಷ ದಾಟಿ ಹೋಗಿದೆ. ಕಾನೂನು ಬದಲಾಗಿದೆ. ಜನಸಂಖ್ಯೆ ಹೆಚ್ಚಾಗಿದೆ. ಹಿಂದುಳಿದ ಜನರ ಸಂಖ್ಯೆಯೂ ಹೆಚ್ಚಾಗಿವೆ' ಎಂದು ರೋಹಟಗಿ ತಿಳಿಸಿದರು.

ಇದು ಸಂಸತ್ಗೆ ತಿಳಿದಿರಬೇಕಾದ ಸಂಗತಿ
'ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಸಂಸತ್ತಿಗೆ ತಿಳಿದಿರಬೇಕಾದ ಸಂಗತಿ. ಇದು ಶೇ 50ಕ್ಕಿಂತ ಹೆಚ್ಚಿದೆ ಎಂದು ಸಂಸತ್ಗೆ ತಿಳಿದಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ನೀಡಿದ್ದರೆ, ಇದು ಶೇ 50ಕ್ಕಿಂತ ಹೆಚ್ಚು ಇರಬಬಾರದು ಎಂದು ನ್ಯಾಯಾಲಯ ಹೇಳಲು ಸಾಧ್ಯವಿಲ್ಲ. ರಾಜ್ಯಗಳು ಹೊಂದಿರುವ ಮೀಸಲಾತಿ ಶೇ 50 ಅನ್ನು ಮೀರಿದರೆ, ಈ ಸನ್ನಿವೇಶದಲ್ಲಿ ಇದು ಗಂಭೀರ ಸಂಗತಿಯಲ್ಲ ಎಂದು ಹೇಳಲಾಗದು. ಮತ್ತು 30 ವರ್ಷಗಳ ನಂತರ ಮರು ಪರಿಶೀಲಿಸುವ ಅಗತ್ಯ ಬೀಳುವುದಿಲ್ಲ ಎಂದು ವಾದಿಸಿದರು. ಪ್ರಕರಣದ ವಾದ-ವಿವಾದವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.












Click it and Unblock the Notifications