#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು
ಬೆಂಗಳೂರು, ಅಕ್ಟೋಬರ್ 15 : ಯುದ್ಧಭೂಮಿಯಲ್ಲಿ ಇಳಿದ ಮೇಲೆ, ಶಸ್ತ್ರಾಸ್ತ್ರ ಕೈಯಲ್ಲಿ ಎತ್ತಿಕೊಂಡ ಮೇಲೆ ಎದುರಾಳಿಗೆ ಹೆದರಿ ಓಡಿಹೋಗುವ ಪ್ರಶ್ನೆಯೇ ಇಲ್ಲ ಎಂಬಂತೆ, ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಪತ್ರಕರ್ತೆಯರು ಮಾಜಿ ಪತ್ರಕರ್ತ ಮೊಬಶಾರ್ ಜಾವೇದ್ ಅಕ್ಬರ್ ವಿರುದ್ಧ ತಿರುಗಿ ನಿಂತಿದ್ದಾರೆ.
ತಮ್ಮ ಮೇಲೆ ಮಾಡಲಾಗಿರುವ ಲೈಂಗಿಕ ಕಿರುಕುಳದ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಎಂಜೆ ಅಕ್ಬರ್ (67) ಅವರು, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿರುವ ಎಲ್ಲಾ ಪತ್ರಕರ್ತೆಯರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಸಿದ್ದಾರೆ.
ನಾವು ಈ ಎಲ್ಲ ತಲೆಬುಡವಿಲ್ಲದ ಆರೋಪಗಳನ್ನು ಅಧ್ಯಯನ ಮಾಡಿ ಮುಂದಿನ ಕಾನೂನು ಕ್ರಮದ ಬಗ್ಗೆ ಚಿಂತಿಸಲಿದ್ದೇವೆ ಎಂದು ಎಂಜೆ ಅಕ್ಬರ್ ಅವರ ವಕೀಲರು ಹೇಳಿದ್ದಾರೆ. ರಾಜೀನಾಮೆಗೆ ಎಲ್ಲೆಡೆಯಿಂದ ಒತ್ತಡ ಬರುತ್ತಿದ್ದರೂ ರಾಜೀನಾಮೆ ನೀಡಲು ನಿರಾಕರಿಸಿರುವ ಅಕ್ಬರ್ ಅವರು, ತಮ್ಮ ಮಾನವನ್ನು ಹರಾಜು ಹಾಕಿರುವ ಪತ್ರಕರ್ತೆಯರನ್ನು ಬಿಡುವುದಿಲ್ಲ, ಮೊಕದ್ದಮೆ ಹೂಡುವುದಾಗಿ ಹೇಳಿಕೆ ನೀಡಿದ್ದಾರೆ.
ನಾನು ಇಂಥ ಬೆದರಿಕೆಗಳಿಗೆಲ್ಲ ಬಗ್ಗುವುದಿಲ್ಲ. ನನ್ನ ಹೇಳಿಕೆಗೆ (ಆರೋಪಗಳಿಗೆ) ಕಟಿಬದ್ಧಳಾಗಿದ್ದೇನೆ. ಅವರು ನನ್ನ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯವನ್ನು ಹಲವಾರು ಮಹಿಳೆಯರ ಮೇಲೆ ಎಸಗಿದ್ದಾರೆ. ಇದು ಬೇಗ ಮುಗಿಯುವ ಕಾನೂನು ಹೋರಾಟವಲ್ಲ. ಇನ್ನೂ ಹಲವಾರು ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ಏಷ್ಯನ್ ಏಜ್ ಪತ್ರಿಕೆಯ ಸ್ಥಾನಿಕ ಸಂಪಾದಕಿಯಾಗಿರುವ ಸುಪರ್ಣಾ ಶರ್ಮಾ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ್ದಾರೆ.

ಸ್ತನಗಳನ್ನೇ ದಿಟ್ಟಿಸಿ ನೋಡುತ್ತಿದ್ದರು
ಸುಪರ್ಣಾ ಶರ್ಮಾ ಅವರು ಆರೋಪ ಮಾಡಿರುವಂತೆ, ಅವರು ಡೆಸ್ಕ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂದಿಂದ ಬಂದ ಅಕ್ಬರ್ ಅವರ ಕಂಚುಕದ ಕೊಂಡಿಯನ್ನು ಕಳಚಿ ಲೈಂಗಿಕ ಕಿರುಕುಳ ನೀಡಿದ್ದರು. ಇದನ್ನು ವಿರೋಧಿಸಿದರೂ ಸುಮ್ಮನಿರಲಿಲ್ಲ ಮತ್ತು ಮೀಟಿಂಗ್ ಗಳಲ್ಲಿ ತಮ್ಮ ಸ್ತನಗಳನ್ನೇ ದಿಟ್ಟಿಸಿ ನೋಡಿ ತೀವ್ರ ಮುಜುಗರ ಉಂಟು ಮಾಡಿದ್ದರು. ಇಂತಹ ಕೃತ್ಯಗಳನ್ನು ತಮ್ಮ ಜೊತೆ ಮಾತ್ರವಲ್ಲ ಇನ್ನೂ ಹಲವಾರು ಮಹಿಳಾ ಪತ್ರಕರ್ತರ ಜೊತೆ ಅಕ್ಬರ್ ಮಾಡಿದ್ದಾರೆ. ಮೀಟಿಂಗ್ ಗಳಲ್ಲಿ ನನಗೆ ಅವರ ಹೇಳಿಕೆಯಿಂದ ನಿರಾಶೆಯಾದರೂ ಅಚ್ಚರಿ ಆಗೇ ಇಲ್ಲ. ಸುದೀರ್ಘ ಕಾನೂನು ಹೋರಾಟಕ್ಕೆ ನಾನು ಸಿದ್ಧಳಿದ್ದೇನೆ ಎಂದು ಅಕ್ಬರ್ ಅವರಿಗೆ ಸುಪರ್ಣಾ ಶರ್ಮಾ ಅವರು ರಣವೀಳ್ಯ ನೀಡಿದ್ದಾರೆ.

ಅಕ್ಬರ್ ವಿರುದ್ಧ ರಾಜಕೀಯ ಹುನ್ನಾರ ಇಲ್ಲ
ಮತ್ತೊಬ್ಬ ಪತ್ರಕರ್ತೆ, ಅಮೆರಿಕದಲ್ಲಿರುವ ಮಜಲಿ ಡೇ ಪುಯ್ ಕಂಪ್ (30) ಅವರು, ಮಹಿಳೆಯರ ಆರೋಪದ ಹಿಂದೆ ರಾಜಕೀಯ ಹುನ್ನಾರವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ನಾನು ಭಾರತೀಯ ನಾಗರಿಕಳಲ್ಲ, ನನಗೆ ಮತ ಹಾಕುವ ಹಕ್ಕಿಲ್ಲ. ಹೀಗಿದ್ದ ಮೇಲೆ ರಾಜಕೀಯ ಹುನ್ನಾರ ಹೇಗಾಗಲಿದೆ? ಎಂದು ಪ್ರಶ್ನಿಸಿದ್ದು, ನನ್ನ ಬಳಿ ನಾನು ಮಾಡಿದ ಆರೋಪಕ್ಕೆ ಅಕ್ಬರ್ ಅವರು ಈಮೇಲ್ ನಲ್ಲಿ ಉತ್ತರ ಬರೆದ ಸಾಕ್ಷ್ಯವಿದೆ. ನಾನು ಮಾಡಿರುವ ಆರೋಪದ ಬಗ್ಗೆ ನನಗೆ ಸ್ಪಷ್ಟತೆಯಿದೆ ಎಂದಿದ್ದಾರೆ. ಅವರು ಇಂಟರ್ನ್ಶಿಪ್ ಮಾಡುತ್ತಿದ್ದಾಗ ಕಡೆಯ ದಿನ, ಧನ್ಯವಾದ ತಿಳಿಸುವ ಉದ್ದೇಶದಿಂದ ಹಸ್ತಲಾಘವ ಮಾಡಲು ಬಂದಾಗ ಅವರ ಭುಜ ಹಿಡಿದೆಳೆದು, ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ಬಲವಂತವಾಗಿ ಅಕ್ಬರ್ ಅವರು ಮುತ್ತಿಟ್ಟಿದ್ದರು ಮತ್ತು ತಮ್ಮ ಗಂಟಲೊಳಗೆ ನಾಲಗೆಯನ್ನು ತುರುಕಿ ಅಸಹ್ಯವಾಗಿ ವರ್ತಿಸಿದ್ದರು ಎಂದು ಮಜಲಿ ಅವರು ಆರೋಪಿಸಿದ್ದಾರೆ.

ಸತ್ಯವೇ ನಮ್ಮ ಬಲವಾದ ರಕ್ಷಣಾ ಅಸ್ತ್ರ
ಅಕ್ಬರ್ ವಿರುದ್ಧ ಮೊದಲ ಬಾರಿ ದನಿಯೆತ್ತಿದ್ದ ಪ್ರಿಯಾ ರಮಣಿ ಅವರು, ಅಕ್ಬರ್ ವಿರುದ್ಧ ನಾವು ಯಾರೂ ಷಡ್ಯಂತ್ರ ಮಾಡಿಲ್ಲ, ಅವರಂತೆ ನಮಗ್ಯಾರಿಗೂ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ. ನಾವು ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಪಣಕ್ಕಿಟ್ಟು ಅವರು ಎಸಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದೇವೆ. ಯಾವುದೇ ಮಾನನಷ್ಟ ಮೊಕದ್ದಮೆಯಾಗಲಿ ಸತ್ಯವೇ ನಮ್ಮ ಬಲವಾದ ರಕ್ಷಣಾ ಅಸ್ತ್ರ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರು ಒಂದು ವರ್ಷದ ಹಿಂದೆಯೇ ಎಂಜೆ ಅಕ್ಬರ್ ಅವರ ಹೆಸರನ್ನು ಪ್ರಸ್ತಾಪಿಸದೆ ವೋಗ್ ಮ್ಯಾಗಜೀನ್ ನಲ್ಲಿ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ವಿಸ್ತೃತವಾಗಿ ಬರೆದಿದ್ದರು. ಪ್ರಿಯಾ ರಮಣಿಯನ್ನು ಸಂದರ್ಶನಕ್ಕೆಂದೆ ಹೋಟೆಲಿಗೆ ಕರೆದಿದ್ದಲ್ಲದೆ, ಅವರು ಮದ್ಯವನ್ನು ತೆಗೆದುಕೊಳ್ಳಲು ಒತ್ತಾಯಿಸಿ, ರೋಮ್ಯಾಂಟಿಕ್ ಹಾಡನ್ನು ಹಾಡುತ್ತ ಅವರನ್ನು ಪಲ್ಲಂಗದ ಮೇಲೆ ತಮ್ಮ ಪಕ್ಕದ ಕೂಡಬೇಕೆಂದು ಒತ್ತಾಯಿಸಿದ್ದರು.

ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಲ್ಲ
1995ರಿಂದ 97ರ ನಡುವಿನಲ್ಲಿ ಅಕ್ಬರ್ ಜೊತೆ ಕೆಲಸ ಮಾಡಿರುವ ಕನಿಕಾ ಗಹ್ಲೋಟ್ ಅವರು ಕೂಡ ಪ್ರಿಯಾ ರಮಣಿ ಅವರು ಮಾಡಿರುವಂಥ ಆರೋಪಗಳನ್ನೇ ಮಾಡಿದ್ದಾರೆ. ಅವರನ್ನು ಕೂಡ ಅಕ್ಬರ್ ಅವರು ಸಂದರ್ಶನಕ್ಕೆಂದು ಹೋಟೆಲಿಗೆ ಕರೆಯಿಸಿ ಅಸಭ್ಯವಾಗಿ ವರ್ತಿಸಿದ್ದರೆಂದು ಆರೋಪಿಸಿದ್ದಾರೆ. ನಾನು ಮಾಡಿರುವ ಎಲ್ಲಾ ಆರೋಪಗಳಿಗೆ ಬದ್ಧಳಾಗಿದ್ದೇನೆ. ಅಕ್ಬರ್ ಅವರಿಂದ ದೌರ್ಜನ್ಯಕ್ಕೊಳಗಾಗಿರುವ ಮತ್ತೊಬ್ಬ ಮಹಿಳೆ ಶುತಾಪಾ ಪೌಲ್ ಅವರು, ಅಕ್ಬರ್ ಹೇಳಿಕೆಯಿಂದ ತೀವ್ರ ಆಘಾತವಾಗಿದೆ. ನಮ್ಮ ಹೋರಾಟ ಪ್ರತಿಯೊಬ್ಬ ಮಹಿಳೆಯರ ಪರವಾಗಿನ ಹೋರಾಟ, ನ್ಯಾಯಕ್ಕಾಗಿ ಹೋರಾಟ, ಪ್ರತಿನಿತ್ಯ ಕೆಲಸದ ಸ್ಥಳದಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರ ಪರವಾಗಿನ ಹೋರಾಟ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಬರ್ ವಿರುದ್ಧದ ಕಾನೂನು ಹೋರಾಟಕ್ಕೆ ತಾವು ಸಿದ್ಧರಿರುವುದಾಗಿ ಅವರು ಹೇಳಿದ್ದಾರೆ.

ಒಬ್ಬಿಬರಲ್ಲಿ ಹನ್ನೊಂದು ಪತ್ರಕರ್ತೆಯರಿಂದ ಆರೋಪ
ಅಕ್ಬರ್ ವಿರುದ್ಧ ಈ ಐವರು ಮಹಿಳೆಯರಲ್ಲದೆ ಇನ್ನೂ ಆರು ಮಹಿಳಾ ಪತ್ರಕರ್ತರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ ಅವರಲ್ಲಿ, ಗಝಾಲಾ ವಹಾಬ್ ಅವರು ಆರು ತಿಂಗಳ ಕಾಲ ಅಕ್ಬರ್ ಕೈಯಲ್ಲಿ ಅನುಭವಿಸಿದ ಪ್ರತಿಯೊಂದು ಲೈಂಗಿಕ ಕಿರುಕುಳದ ವಿವರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಚೇಂಬರ್ ನಲ್ಲಿ ಕರೆದು, ಡಿಕ್ಷನರಿ ನೋಡಲು ಹೇಳಿ, ಹಿಂದಿನಿಂದ ಬಂದು ಸೊಂಟವನ್ನು ಹಿಡಿದುಕೊಂಡಿದ್ದಲ್ಲದೆ, ಸ್ತನಗಳ ಮೇಲೆಲ್ಲ ಕೈಯಾಡಿಸಿ ಅಸಭ್ಯವಾಗಿ ವರ್ತಿಸಿದ್ದರೆಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಹಲವಾರು ಬಾರಿ ಚೇಂಬರ್ ಬಾಗಿಲ ಬಳಿ ಅಡಗಿಕೊಂಡು, ಒಳಗೆ ಬರುತ್ತಿದ್ದಂತೆ ಬಾಗಿಲಿಗೆ ಬಲವಾಗಿ ಒತ್ತಿಹಿಡಿದು ತುಟಿಗೆ ಮುತ್ತು ಕೊಟ್ಟು ಅಸಹ್ಯವಾಗಿ ನಡೆದುಕೊಂಡಿದ್ದಾರೆ. ಕಡೆಗೆ ಅವರ ಕಾಟ ತಾಳಲಾರದೆ ರಾಜೀನಾಮೆ ನೀಡಬೇಕಾಯಿತು ಎಂದು ವಿವರಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications