ಏರ್ಇಂಡಿಯಾದ 5 ಹಿರಿಯ ಪೈಲಟ್ಗಳು ಮೇ ತಿಂಗಳಿನಲ್ಲಿ ಕೊರೊನಾ ವೈರಸ್ಗೆ ಬಲಿ
ನವದೆಹಲಿ, ಜೂನ್ 3: ಕೊರೊನಾ ವೈರಸ್ನ ಲಸಿಕೆಯನ್ನು ತಮಗೆ ಹಾಗೂ ಕುಟುಂಬಕ್ಕೆ ನೀಡುವಂತೆ ಏರ್ಇಂಡಿಯಾ ಪೈಲಟ್ಗಳು ಪದೇ ಪದೇ ಬೇಡಿಕೆಯನ್ನಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಒಂದು ತಿಂಗಳಲ್ಲಿ ಐವರು ಏರ್ ಇಂಡಿಯಾದ ಪೈಲಟ್ಗಳು ಕೊರೊನಾವೈರಸ್ಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಏರ್ಇಂಡಿಯಾ ಅಧಿಕೃತ ಮೂಲಗಳು ಹಾಗೂ ಫೈಲಟ್ಗಳ ಒಕ್ಕೂಟ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದೆ. ಕ್ಯಾಪ್ಟನ್ ಪ್ರಸಾದ್ ಕರ್ಮಾಕರ್, ಕ್ಯಾಪ್ಟನ್ ಸಂದೀಪ್ ರಾಣಾ, ಕ್ಯಾಪ್ಟನ್ ಅಮಿತೇಶ್ ಪ್ರಸಾದ್, ಕ್ಯಾಪ್ಟನ್ ಜಿಪಿಎಸ್ ಗಿಲ್ ಮತ್ತು ಕ್ಯಾಪ್ಟನ್ ಹರ್ಷ್ ತಿವಾರಿ ಮೇ ತಿಂಗಳಿನಲ್ಲಿ ಕೊರೊನಾ ವೈರಸ್ಗೆ ಮೃತಪಟ್ಟ ಪೈಲಟ್ಗಳು ಎಂದು ತಿಳಿಸಿದೆ.
ಈ ಎಲ್ಲರು ಕೂಡ ಏರ್ಇಂಡಿಯಾದ ಫೈಲಟ್ಗಳಾಗಿದ್ದು ವಂದೇ ಮಾತರಂ ಮಿಶನ್ ಅಡಿಯಲ್ಲಿ ವಿದೇಶಗಳಿಗೆ ಸಂಚರಿಸುತ್ತಿದ್ದ ಬೃಹತ್ ವಿಮಾನಗಳನ್ನು ಚಲಾಯಿಸುತ್ತಿದ್ದರು. ಇದರಲ್ಲಿ ಬೋಯಿಂಗ್ 777 ವಿಮಾನವನ್ನು ಚಲಾಯಿಸುತ್ತಿದ್ದ ಹರ್ಷ್ ತಿವಾರಿ ಮೇ 30 ರಂದು ಮೃತಪಟ್ಟಿದ್ದಾರೆ.

ಕಳೆದ ಮೇ 4ರಂದು ಎಲ್ಲಾ ಸಿಬ್ಬಂದಿಗಳಿಗೆ ಲಸಿಕೆಯನ್ನು ಹಾಕದಿದ್ದಲ್ಲಿ ವಿಮಾನ ಹಾರಾಟವನ್ನು ನಿಲ್ಲಿಸುವುದಾಗಿ ಬೆದರಿಕೆಯನ್ನು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಏರ್ಇಂಡಿಯಾ ತಿಂಗಳ ಅಂತ್ಯದ ಒಳಗೆ ಎಲ್ಲಾ ಸಿಬ್ಬಂದಿಗಳಿಗೆ ಲಸಿಕೆ ನೀಡಲು ಶಿಬಿರಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೆ ಲಸಿಕೆ ಲಭ್ಯವಾಗದ ಕಾರಣ ಮೂರು ಶಿಬಿರಗಳು ರದ್ದಾದವು. ತಡವಾಗಿ ಮೇ 15ರಂದು ಲಸಿಕೆ ಅಭಿಯಾನವನ್ನು ಆಯೋಜಿಸಿತಾದರೂ ಆರಂಭದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆಯೋಜನೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಇಂಡಿಯನ್ ಕಮರ್ಶಿಯನ್ ಫ್ಲೈಟ್ಸ್ ಅಸೊಸಿಯೇಶನ್, ಏರ್ಇಂಡಿಯಾದ ನಿರ್ದೇಶಕ ಆರ್ಎಸ್ ಸಂಧು ಅವರಿಗೆ ಪತ್ರವನ್ನು ಬರೆದಿದೆ. "ಕೊರೊನಾ ವೈರಸ್ ಪರೀಕ್ಷೆಯಲ್ಲಿ ಧನಾತ್ಮಕ ವರದಿಗಳನ್ನು ಪಡೆದು ಹಲವಾರು ಪೈಲಟ್ಗಳು ಕ್ವಾರಂಟೈನ್ನಲ್ಲಿದ್ದಾರೆ. ಆತಂಕಕಾರಿ ಬೆಳವಣಿಗೆಗಳಲ್ಲಿ ಕೆಲವರು ಈ ವೈರಸ್ಗೆ ಬಲಿಯಾಗಿದ್ದಾರೆ. ಕುಟುಂಬದ ಸದಸ್ಯರು ಕೂಡ ಈ ವೈರಸ್ಗೆ ತುತ್ತಾಗುತ್ತಿದ್ದಾರೆ. ವಂದೇ ಭಾರತ್ ಮಿಷನ್ ವಿಮಾನಗಳನ್ನು ನಿರ್ವಹಿಸಿದ ನಂತರ ಮನೆಗೆ ಬಂದಾಗ ಕುಟುಂಬಸ್ಥರಿಗೂ ಈ ವೈರಸ್ ತಗುಲುವ ಆತಂಕಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸಲು ಹಾಗೂ ನಮ್ಮ ಕುಟುಂಬಗಳನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಸಂಸ್ಥೆಯ ಬೆಂಬಲ ನಮಗೆ ಬೇಕು" ಎಂದು ಮಂಗಳವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications