'ನೀಚ ಯುದ್ಧ'ಕ್ಕೆ ವಿಶಿಷ್ಟ ತಂತ್ರಗಳು ಅನಿವಾರ್ಯ – ಸೇನಾ ಮುಖ್ಯಸ್ಥ ರಾವತ್
ನವದೆಹಲಿ, ಮೇ 29: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವುದು 'ಪರೋಕ್ಷ ಯುದ್ಧ'. ಈ 'ನೀಚ ಯುದ್ಧ'ವನ್ನು ಎದುರಿಸಲು ವಿಶಿಷ್ಟ ತಂತ್ರಗಳು ಅನಿವಾರ್ಯ ಎಂದು ಸೇನಾ ಮುಖ್ಯಸ್ಥ ಮೇಜರ್ ಬಿಪಿನ್ ರಾವತ್ ಹೇಳಿದ್ದಾರೆ. ಈ ಮೂಲಕ ಕಾಶ್ಮೀರಿ ಯುವಕನನ್ನು ಮಾನವ ಗುರಾಣಿಯಾಗಿ ಜೀಪಿಗೆ ಕಟ್ಟಿದ ಮೇಜರ್ ಲೀತುಲ್ ಗೊಗೋಯಿ ಕ್ರಮವನ್ನು ಸೇನಾ ಮುಖ್ಯಸ್ಥರು ಸಮರ್ಥಿಸಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನಲ್ಲಿ ರಾವತ್, ಜನರಲ್ ಗೊಗೋಯಿಗೆ ಪ್ರಶಸ್ತಿ ನೀಡಿದ್ದರ ಉದ್ದೇಶ ಕಾಶ್ಮೀರದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯಚರಿಸುತ್ತಿರುವ ಯುವ ಅಧಿಕಾರಿಗಳಿಗೆ ಉತ್ಸಾಹ ತುಂಬುವುದು ಎಂದು ಹೇಳಿದ್ದಾರೆ.[ಯೋಧರಿಗೆ ತಾಳ್ಮೆಯಿಂದಿರಿ ಆಮೇಲೆ ಸಾಯಿರಿ ಎನ್ನಕಾಗುತ್ತಾ, ನೋ..ವೇ..]
"ಭದ್ರತಾ ಪಡೆಗಳತ್ತ ಕಲ್ಲು ತೂರುವಂಥ ಅಸಂಪ್ರದಾಯಿಕ ವಿಧಾನಗಳನ್ನು ಜನರು ಪ್ರತಿಭಟಿಸಲು ಅನುಸರಿಸುವಾಗ ಅದನ್ನು ಹತ್ತಿಕ್ಕುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ ಈ ರೀತಿ ಕಲ್ಲೆಸೆಯುವಾಗ ನಮ್ಮ ಯೋಧರಿಗೆ ಸುಮ್ಮನೆ ನಿಂತು ಸತ್ತು ಹೋಗಿ ಎಂದು ನಾನು ಹೇಳಬೇಕೇ?" ಎಂದು ಪ್ರಶ್ನಿಸಿದ್ದಾರೆ. ಚಂದದ ಶವಪೆಟ್ಟಿಗೆಯೊಂದಿಗೆ ಬರುತ್ತೇನೆ. ನಿಮ್ಮ ದೇಹವನ್ನು ಸಕಲ ಸೇವಾ ಗೌರವಗಳೊಂದಿಗೆ ಊರಿಗೆ ಕಳುಹಿಸುತ್ತೇನೆ ಎಂದು ಹೇಳಬೇಕೇ? ಎಂದು ಮರು ಪ್ರಶ್ನೆ ಎಸೆದಿದ್ದಾರೆ.
"ನಾನು ಜನರು ಕಲ್ಲು ತೂರುವ ಬದಲು ನಮ್ಮತ್ತ ಗುಂಡು ಹಾರಿಸಲಿ ಎಂದು ಬಯಸುತ್ತೇನೆ. ಆವಾಗ ನನಗೆ ಖುಷಿಯಾಗುತ್ತದೆ. ಆಗ ನನಗೇನು ಬೇಕೋ ಅದನ್ನು ಮಾಡಬಹುದು," ಎಂದು ರಾವತ್ ಹೇಳಿದ್ದಾರೆ.
ನಮ್ಮ ಸೈನಿಕರ ಉತ್ಸಾಹವನ್ನು ಹೆಚ್ಚಿಸುವುದು, ಅವರನ್ನು ಉತ್ತೇಜಿಸುವುದೇ ಸೇನಾ ಮುಖ್ಯಸ್ಥನಾಗಿ ನನ್ನು ಗುರಿ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
"ಹಿಂಸೆ ನಡೆಯದಂತೆ ತಡೆಯುವುದು ಮತ್ತು ಹಿಂಸೆಯಲ್ಲಿ ಪಾಲ್ಗೊಳ್ಳದವರನ್ನು ರಕ್ಷಿಸುವುದು ಸೇನೆಯ ಕರ್ತವ್ಯ" ಎಂದು ರಾವತ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಲೆಫ್ಟಿನೆಂಟ್ ಉಮರ್ ಫಯಾಜ್ ಕೊಲೆಯಾದ ಬಗ್ಗೆ ಜನರು ಯಾಕೆ ಪ್ರಶ್ನಿಸುತ್ತಿಲ್ಲ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ