FDI (ವಿದೇಶಿ ನೇರ ಬಂಡವಾಳ) ನಿಯಮ ಸಡಿಲಿಸಿದ ಕೇಂದ್ರ ಸರಕಾರ
ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ಹಲವು ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ (ಎಫ್ ಡಿಐ) ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ದೊಡ್ಡ ಮಟ್ಟದ ವಿನಾಯಿತಿ ನೀಡಿದೆ. ಒಂದೇ ಬ್ರ್ಯಾಂಡ್ ನ ರೀಟೇಲ್, ಡಿಜಿಟಲ್ ಮಾಧ್ಯಮ ಹಾಗೂ ಗುತ್ತಿಗೆ ಉತ್ಪಾದನೆ ಕ್ಷೇತ್ರಗಳು ವಿದೇಶಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಇದರಿಂದ ಅನುಕೂಲ ಆಗಲಿದೆ.
ಕಲ್ಲಿದ್ದಲು ಗಣಿಗಾರಿಕೆ ಹಾಗೂ ಗುತ್ತಿಗೆ ಉತ್ಪಾದನೆಯಲ್ಲಿ ಶೇಕಡಾ ನೂರರಷ್ಟು ವಿದೇಶಿ ನೇರ ಬಂಡವಾಳಕ್ಕೆ ಸರಕಾರ ಸಮ್ಮತಿ ನೀಡಿದೆ. ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಕಲ್ಲಿದ್ದಲು ಗಣಿಗಾರಿಕೆ ಹಾಗೂ ಸಂಬಂಧಿತ ಮೂಲ ಸೌಕರ್ಯಕ್ಕೆ ಶೇಕಡಾ ನೂರರಷ್ಟು ವಿದೇಶಿ ನೇರ ಬಂಡವಾಳಕ್ಕೆ ಸಮ್ಮತಿ ನೀಡಲಾಗಿದೆ ಎಂದಿದ್ದಾರೆ.
ವಿಮಾನಯಾನ, ವಿಮೆ, ಮಾಧ್ಯಮ ಕ್ಷೇತ್ರದಲ್ಲಿ ಎಫ್ ಡಿಐಗೆ ಉತ್ತೇಜನ
ಸಕ್ಕರೆ ರಫ್ತು ಪ್ರೋತ್ಸಾಹ ಧನವನ್ನು ನೀಡಲು ಸಮ್ಮತಿಸಲಾಗಿದ್ದು, ಸಕ್ಕರೆ ರಫ್ತಿಗೆ 6,270 ಕೋಟಿ ರುಪಾಯಿ ಸಬ್ಸಿಡಿಯನ್ನು ಮಂಜೂರು ಮಾಡಿದೆ. ಈ ಪ್ರೋತ್ಸಾಹ ಧನ ನೇರವಾಗಿ ರೈತರ ಖಾತೆಗೆ ಹೋಗುತ್ತದೆ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ಆರ್ಥಿಕ ವರ್ಷದಲ್ಲಿ ಆರು ಮಿಲಿಯನ್ ಟನ್ ರಫ್ತಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ಮಾಧ್ಯಮದಲ್ಲಿ ಶೇಕಡಾ ಇಪ್ಪತ್ತಾರರಷ್ಟು ವಿದೇಶಿ ನೇರ ಬಂಡವಾಳಕ್ಕೆ ಒಪ್ಪಿಗೆ ಸಿಕ್ಕಿದೆ. ವೈದ್ಯಕೀಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರಣಕ್ಕೆ ಎಪ್ಪತ್ತೈದು ಹೊಸ ಕಾಲೇಜುಗಳಿಗೆ ಮಂಜೂರು ಸಿಕ್ಕಿದೆ. ಹದಿನೈದು ಸಾವಿರಕ್ಕೂ ಹೆಚ್ಚು ಸೀಟ್ ಗಳು ಸೇರ್ಪಡೆ ಆಗಲಿವೆ. ಇಂದಿನ ಈ ನಿರ್ಧಾರದಿಂದ ಗ್ರಾಮೀಣ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಉತ್ಪಾದನಾ ವಲಯಕ್ಕೆ ಶೇಕಡಾ ನೂರರಷ್ಟು ವಿದೇಶಿ ನೇರ ಬಂಡವಾಳಕ್ಕೆ ಸಮ್ಮತಿಸಿರುವುದು ಅತಿ ದೊಡ್ಡ ನಿರ್ಧಾರ. ಜತೆಗೆ ಉತ್ಪಾದಕರು ಭಾರತದಲ್ಲಿ ಉತ್ಪನ್ನಗಳ ಮಾರಾಟವನ್ನು ಕೂಡ ಚಿಲ್ಲರೆ, ಸಗಟು ಹಾಗೂ ಇ ಕಾಮರ್ಸ್ ವ್ಯಾಪಾರ ಜಾಲದ ಮೂಲಕ ಮಾಡಬಹುದು. ಇದಕ್ಕೆ ಸರಕಾರದ ಅನುಮತಿ ಕೂಡ ಅಗತ್ಯ ಇಲ್ಲ.
ಸಿಂಗಲ್ ಬ್ರ್ಯಾಂಡ್ ರಿಟೇಲ್ ವಲಯಕ್ಕೆ ಸ್ಥಳೀಯವಾದ ಉತ್ಪನ್ನಗಳನ್ನು ಖರೀದಿ ಮಾಡಬೇಕು ಎಂದಿರುವ ನಿಯಮದಲ್ಲಿ ನೀಡಿರುವ ವಿನಾಯಿತಿಯಿಂದ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಲಿದೆ. ಯಾವ ಕಂಪೆನಿಯು ಐವತ್ತೊಂದು ಪರ್ಸೆಂಟ್ ಗಿಂತ ಹೆಚ್ಚು ವಿದೇಶಿ ನೇರ ಬಂಡವಾಳ ಹೊಂದಿದೆಯೋ ಅಂಥದ್ದು ದೇಶಿ ಮಾರುಕಟ್ಟೆಯಿಂದ ಶೇಕಡಾ ಮೂವತ್ತರಷ್ಟು ಖರೀದಿ ಮಾಡಬೇಕು ಎಂಬ ನಿಯಮ ಇತ್ತು. ಅದರಿಂದ ಈಗ ವಿನಾಯಿತಿ ಸಿಗಲಿದೆ.
ಆದರೆ, ಗುತ್ತಿಗೆ ಉತ್ಪಾದನೆ ಬಗ್ಗೆ ಈಗಿನ ನೀತಿಯಲ್ಲಿ ಯಾವುದೇ ಸ್ಪಷ್ಟ ಪ್ರಸ್ತಾವನೆ ಇಲ್ಲ.