ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಪುನರುಚ್ಚರಿಸಿದ ಕೆನಡಾ ಪ್ರಧಾನಿ
ನವದೆಹಲಿ, ಡಿಸೆಂಬರ್ 05: ಭಾರತದ ವಿರೋಧದ ನಂತರವೂ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳಿಗೆ ಮತ್ತೊಮ್ಮೆ ತಮ್ಮ ಬೆಂಬಲವನ್ನು ಘೋಷಿಸುವ ಮೂಲಕ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜತಾಂತ್ರಿಕ ಮಾತುಕತೆ ಮಧ್ಯೆ, ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಟ್ರೂಡೊ ಮತ್ತೆ ಪುನರುಚ್ಚರಿಸಿದ್ದಾರೆ. ಕೆನಡಾದ ಹೈಕಮಿಷನರ್ ಶುಕ್ರವಾರ ಅವರಿಗೆ ಸಮನ್ಸ್ ನೀಡಿದ ಬಳಿಕ ರಾಜತಾಂತ್ರಿಕ ಪ್ರತಿಭಟನೆಯನ್ನು ನಡೆಸಿತು. ಆದರೆ ಕೆನಡಾ ಪ್ರಧಾನಿ ತಮ್ಮ ಹೇಳಿಕೆಯನ್ನು ಮತ್ತೆ ದಾಖಲಿಸಿದ್ದಾರೆ.
ಕೆನಡಾ ಪ್ರಧಾನಿ ಹೇಳಿಕೆಗೆ ಭಾರತದ ಪ್ರತಿಭಟನೆ: ಹೈಕಮಿಷನರ್ಗೆ ಸಮನ್ಸ್
ಶುಕ್ರವಾರ, ಕೆನಡಾದ ಹೈಕಮಿಷನರ್ ನಾದಿರ್ ಪಟೇಲ್ ಅವರು ವಿದೇಶಾಂಗ ಸಚಿವಾಲಯದ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನಿ ಟ್ರುಡೊ ಅವರಿಂದ ಬರುವ ಈ ಕಾಮೆಂಟ್ಗಳು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
''ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಒಪ್ಪಲಾಗದು. ಈ ಧೋರಣೆ ಮುಂದುವರಿದಿದ್ದೇ ಆದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಕೆನಡಾ ಹೈಕಮಿಷನರ್ಗೆ ತಿಳಿಸಲಾಯಿತು'' ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಕೆನಡಾ ಪ್ರಧಾನಿ ಟ್ರುಡೊ ಸಂಬಂಧವನ್ನು ಹಾಳು ಮಾಡಿದ್ದಾರೆ ಎಂದು ಭಾರತ ಆರೋಪಿಸಿದೆ. ಮತ್ತೊಂದೆಡೆ ಪಿಎಂ ಟ್ರುಡೊ ಭಾರತದ ವಿರೋಧವನ್ನು ನಿರ್ಲಕ್ಷಿಸಿದ್ದಾರೆ. ಅವರ ಅಭಿಪ್ರಾಯವು ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದೇ ಎಂದು ಕೇಳಿದಾಗ? ಇದಕ್ಕೆ ಅವರು, 'ಕೆನಡಾ ಯಾವಾಗಲೂ ಶಾಂತಿಯುತ ಪ್ರತಿಭಟನೆ ಮತ್ತು ಮಾನವ ಹಕ್ಕುಗಳಿಗಾಗಿ ನಿಲ್ಲುತ್ತದೆ' ಎಂದು ಹೇಳಿದರು. ಇನ್ನು ಕೆನಡಾ ಪ್ರಧಾನಿ ಹೇಳಿಕೆಗೆ ಕೆಲವು ಕ್ಯಾಬಿನೆಟ್ ಮಂತ್ರಿಗಳು ಮತ್ತು ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.