ಪಶ್ಚಿಮ ಬಂಗಾಳ: ನಿವೃತ್ತ ನೌಕಾಪಡೆ ನೌಕರನನ್ನು ಕೊಂದ ಪತ್ನಿ ಮತ್ತು ಪುತ್ರ
ಕೋಲ್ಕತ್ತಾ, ನವೆಂಬರ್ 21: ನವದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಮಾಸುವ ಮೊದಲೇ ಅಂಥದ್ದೇ ಮತ್ತೊಂದು ಪ್ರಕರಣವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಕೋಲ್ಕತ್ತಾದಿಂದ 40 ಕಿಮೀ ದೂರದಲ್ಲಿರುವ ಬರುಯಿಪುರದಲ್ಲಿ ಅಂತಹುದೇ ಭೀಕರ ಹತ್ಯೆಯೊಂದು ನಡೆದಿದೆ.
ನೌಕಾಪಡೆಯ ಮಾಜಿ ಸಿಬ್ಬಂದಿಯಾಗಿರುವ 55 ವರ್ಷದ ಉಜ್ಜವಲ್ ಚಕ್ರವರ್ತಿ ಅನ್ನು ಅವರ ಪತ್ನಿ ಹಾಗೂ ಪುತ್ರನೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಸಂಬಂಧ 50 ವರ್ಷದ ಅವರ ಪತ್ನಿ ಶ್ಯಾಮಲಿ ಚಕ್ರವರ್ತಿ ಹಾಗೂ 25 ವರ್ಷದ ಪುತ್ರ ರಾಜು ಚಕ್ರವರ್ತಿ ಅಲಿಯಾಸ್ ಜಾಯ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ: ಯುವತಿಯ ದೇಹವನ್ನು ಕತ್ತರಿಸಿ ಬಾವಿಗೆ ಬೀಸಾಕಿದ ಮಾಜಿ ಪ್ರಿಯಕರ
ಕಳೆದ ನವೆಂಬರ್ 14ರಂದು ಸಂಜೆ ಪರೀಕ್ಷಾ ಶುಲ್ಕವನ್ನು ಪಾವತಿಸುವ ವಿಷಯದಲ್ಲಿ ಉಜ್ಜವಲ್ ಚಕ್ರವರ್ತಿ ಮತ್ತು ಮನೆಯವರ ಮಧ್ಯೆ ಜಗಳವಾಗಿದೆ. ಇದೇ ವಿಷಯಕ್ಕೆ ಪತ್ನಿ ಹಾಗೂ ಪುತ್ರ ಸೇರಿಕೊಂಡು ಉಜ್ವವಲ್ ಚಕ್ರವರ್ತಿ ಅನ್ನು ಹತ್ಯೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಅವರ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ ಹತ್ತಿರದ ಪ್ರದೇಶಗಳಲ್ಲಿ ಎಸೆದಿದ್ದಾರೆ ಎಂದು ಗೊತ್ತಾಗಿದೆ.
ನ.14ರಂದು ನಡೆದಿತ್ತು ತಂದೆ-ಮಗನ ಜಗಳ
"ಇದುವರೆಗೆ, ನಮ್ಮ ತನಿಖೆಯಲ್ಲಿ ಉಜ್ಜವಲ್ ಮದ್ಯವ್ಯಸನಿಯಾಗಿದ್ದು, ಅವರ ಮಗನ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ನವೆಂಬರ್ 14ರಂದು ಸಂಜೆ ಪತ್ನಿಯೊಂದಿಗೆ ಜಗಳವಾಡಿ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕೋಪದಿಂದ ರಾಜು ತನ್ನ ತಂದೆಯ ಕತ್ತು ಹಿಸುಕಿದ್ದಾನೆ ಎಂದು ಬರುಯಿಪುರ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪಾ ತಿಳಿಸಿದ್ದಾರೆ.
ತಂದೆ ದೇಹವನ್ನು ತುಂಡು ಮಾಡಿದ ಪುತ್ರ ಜಾಯ್
ಐಟಿಐನಿಂದ ಪಾಲಿಟೆಕ್ನಿಕ್ ಓದಿ ಕೆಲಸ ಹುಡುಕುತ್ತಿದ್ದ ಮಗ ತನ್ನ ಕಾರ್ಪೆಂಟ್ರಿ ಕ್ಲಾಸ್ ಕಿಟ್ನಿಂದ ಹ್ಯಾಕ್ಸಾ ಬಳಸಿ ತಂದೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಜ್ಜವಲ್ ಚಕ್ರವರ್ತಿ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಲಾಯಿತು. ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿಡಲಾಗಿತ್ತು. ಅವುಗಳನ್ನು ಹತ್ತಿರದ ಕೊಳ ಮತ್ತು ಪೊದೆಗಳಲ್ಲಿ ಮಗನೇ ವಿಲೇವಾರಿ ಮಾಡಿದನು. ಖಾಸ್ ಮಲ್ಲಿಕ್ ಮತ್ತು ದೇಹಿಮೇಡನ್ ಮಲ್ಲಾ ಪ್ರದೇಶಗಳಲ್ಲಿ ಸುಮಾರು 500 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ದೇಹದ ತುಂಡುಗಳನ್ನು ಎಸೆದಿದ್ದಾನೆ.
ಪೊಲೀಸರಿಗೆ ದೂರು ನೀಡಿದ ತಾಯಿ ಹಾಗೂ ಮಗ
ಮರುದಿನ ಬೆಳಿಗ್ಗೆ 3 ಗಂಟೆವರೆಗೂ ದೇಹದ ಭಾಗಗಳನ್ನು ಮಗ ವಿಲೇವಾರಿ ಮಾಡಿದನು. ತದನಂತರ, ಖಾಸಗಿ ಏಜೆನ್ಸಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ತಮ್ಮ ಉಜ್ಜವಲ್ ಚಕ್ರವರ್ತಿ ಮನೆಗೆ ವಾಪಸ್ ಬಂದಿಲ್ಲ ಎಂದು ಪತ್ನಿ ಹಾಗೂ ಪುತ್ರ ಸೇರಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಅದಾಗಿ ಎರಡು ದಿನಗಳ ನಂತರ ನವೆಂಬರ್ 17ರಂದು ದೇಹದ ಭಾಗಗಳು ಹತ್ತಿರದ ಕೊಳದಲ್ಲಿ ತೇಲಲು ಪ್ರಾರಂಭಿಸಿವೆ.
"ಗುರುವಾರ ಸಂಜೆ, ನಾನು ನನ್ನ ಮನೆಯ ಮೇಲಿನ ಮಹಡಿಯಲ್ಲಿ ಕುಳಿತಿದ್ದಾಗ ಕೊಳದಲ್ಲಿ ಕೆಂಪು ಟಿ-ಶರ್ಟ್ ತೇಲುತ್ತಿರುವುದನ್ನು ನೋಡಿದೆವು. ಇದು ಮನುಷ್ಯನ ದೇಹ ಎಂಬುದನ್ನು ನಾವು ಅರ್ಥಮಾಡಿಕೊಂಡೆವು. ಅಲ್ಲಿ ತಲೆಯನ್ನು ಪಾಲಿಥಿನ್ ಚೀಲದಲ್ಲಿ ಸುತ್ತಲಾಗಿತ್ತು. ಇದು ಮಾನವ ದೇಹ ಎಂದು ಜನರು ದೃಢಪಡಿಸಿದ ನಂತರ, ನಾವು ಪೊಲೀಸರಿಗೆ ಮಾಹಿತಿ ನೀಡಿದೆವು," ಎಂದು ಕೊಳದ ಪಕ್ಕದಲ್ಲೇ ಮನೆಯುಳ್ಳ ಸುಬ್ರಾ ಚಟರ್ಜಿ ತಿಳಿಸಿದ್ದಾರೆ.
ತಾಯಿ ಮತ್ತು ಮಗನ ಮೇಲೆಯೇ ಪೊಲೀಸರಿಗೆ ಇತ್ತು ಅನುಮಾನ!
ಪೊಲೀಸರ ಪ್ರಕಾರ, ಆ ಪ್ರದೇಶದ ಪ್ರಸಿದ್ಧ ಗಾರ್ಮೆಂಟ್ಸ್ ಅಂಗಡಿಯ ಪಾಲಿಥಿನ್ ಬ್ಯಾಗ್ನಲ್ಲಿ ಮೃತದೇಹದ ತಲೆಯನ್ನು ಸುತ್ತಲಾಗಿತ್ತು. "ಇದು ಮೃತದೇಹವಿದ್ದ ಸ್ಥಳವನ್ನು ಪತ್ತೆಹಚ್ಚಲು ನಮಗೆ ಸಹಾಯ ಮಾಡಿತು. ನಾವು ಶವವನ್ನು ಗುರುತಿಸಿದ ನಂತರ, ತಾಯಿ ಮತ್ತು ಮಗನನ್ನು ವಿಚಾರಣೆ ನಡೆಸಲಾಯಿತು.
ನವೆಂಬರ್ 15ರ ಬೆಳ್ಳಂಬೆಳಗ್ಗೆ ಅವರು ನಾಪತ್ತೆಯಾದ ಪ್ರಕರಣವನ್ನು ದಾಖಲಿಸಿದಾಗ ಅವರ ಮೇಲೆ ಅನುಮಾನ ಬಂದಿತ್ತು. ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ ನಂತರವೂ ಉಜ್ಜವಲ್ಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಆಗಾಗ ಜಗಳವಾಡುತ್ತಿದ್ದ ಕಾರಣ ಆತನನ್ನು ಯಾರೋ ಹೊರಗಿನವರು ಕೊಂದಿರಬೇಕು ಎಂದು ಅವರು ಹೇಳಿದ್ದರು. ಆದರೆ ಸುದೀರ್ಘ ವಿಚಾರಣೆಯ ನಂತರ, ಅವರು ಅವನನ್ನು ಕೊಂದು ದೇಹವನ್ನು ಆರು ಭಾಗಗಳಾಗಿ ಕತ್ತರಿಸಿದ್ದನ್ನು ಒಪ್ಪಿಕೊಂಡರು," ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.