ದೇಶಕ್ಕಾಗಿ ಬಿಜೆಪಿಯವರ ನಾಯಿಯೂ ಸತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ಕೆಂಡ
ಬೆಂಗಳೂರು, ಡಿಸೆಂಬರ್ 21: ದೇಶಕ್ಕಾಗಿ ಬಿಜೆಪಿಯಿಂದ ನಾಯಿಯೂ ಸತ್ತಿಲ್ಲ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಮೌತ್ ಕಾ ಸೌದಾಗರ್', 'ನರಹಂತಕ' ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಬೋಧಿಸುವುದರಿಂದ ಹಿಡಿದು ಇತ್ತೀಚೆಗೆ ಬಿಜೆಪಿಯಿಂದ ನಾಯಿಯೂ ಸತ್ತಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಮಾತುಗಳವರೆಗೂ ಎಲ್ಲವೂ ಕಾಂಗ್ರೆಸ್ನಿಂದ ಬೆಳೆದು ಬಂದ ಸಂಸ್ಕೃತಿ ಹಾಗೂ ಪಕ್ಷದ ನಾಯಕರ ಮನಸ್ಥಿತಿಯನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ 'ನಾಯಿ' ವಿವಾದ: ಕ್ಷಮೆಗೆ ಬಿಜೆಪಿ ಪಟ್ಟು, ಕ್ಷಮೆ ಕೇಳುವ ಅಗತ್ಯವಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ
'ಆದರೆ ನಮ್ಮದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಎಲ್ಲರನ್ನೊಳಗೊಂಡ, ಎಲ್ಲರ ಏಳ್ಗೆಯ ಪಕ್ಷ. ಹಾಗಾಗಿಯೇ ಪ್ರಮುಖ ವಿಷಯಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರಂತಹ ವಿರೋಧ ಪಕ್ಷದವರ ವಿಶ್ವಾಸವನ್ನೂ ಪಡೆದು ಮುಂದೆ ಸಾಗುವ ತತ್ತ್ವ ಸಿದ್ಧಾಂತ ಭಾರತೀಯ ಜನತಾ ಪಾರ್ಟಿಯದ್ದು' ಎಂದು ಬಿಜೆಪಿ ಹೇಳಿದೆ.
'ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ಕೊಡಿಸಿದ್ದು' ಎಂದು ಪದೇ ಪದೇ ಹೇಳುವ ಕಾಂಗ್ರೆಸ್ಸಿಗರೇ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಭಾರತೀಯರಿಂದಲೇ ವಿನಃ ಒಂದು ಪಕ್ಷ/ಸಂಘಟನೆಯಿಂದಲ್ಲ. ಬ್ರಿಟಿಷರು ಬೆದರಿದ್ದು ಸಿಡಿದೆದ್ದ ಭಾರತೀಯರಿಗೆ. ದೇಶದ ವಿಚಾರದಲ್ಲಾದರೂ ಒಟ್ಟಾಗಿ ಸಾಗಬೇಕೆಂಬ ಮಾನಸಿಕತೆ ಇಲ್ಲದ್ದರಿಂದ ನೀವು ಕಳೆದುಹೋಗಿದ್ದೀರಿ ಎಂದೂ ಬಿಜೆಪಿ ಆರೋಪಿಸಿದೆ.
ರಾಜಸ್ಥಾನದಲ್ಲಿ ಸೋಮವಾರ ನಡೆದ ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ್ದ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯವರ ಮನೆಯ ನಾಯಿಯೂ ದೇಶಕ್ಕಾಗಿ ಪ್ರಾಣ ಕೊಟ್ಟಿಲ್ಲ ಎಂದು ಟೀಕಿಸಿದ್ದರು.
ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ದೇಶಕ್ಕಾಗಿ ಕಾಂಗ್ರೆಸ್ ನಾಯಕರಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಬಿಜೆಪಿಯವರು ಈ ದೇಶಕ್ಕಾಗಿ ಏನು ಮಾಡಿದ್ದಾರೆ. ಈ ದೇಶಕ್ಕಾಗಿ ಅವರ ಮನೆಯ ನಾಯಿಯೂ ಸತ್ತಿಲ್ಲ. ಆದರೂ ಅವರು ತಮ್ಮನ್ನು ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ. ಅವರ ಪ್ರಕಾರ, ನಾವೆಲ್ಲರೂ ದೇಶದ್ರೋಹಿಗಳು ಎಂದು ಖರ್ಗೆ ಕಿಡಿ ಕಾರಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯೂ ರಾಷ್ಟ್ರ ರಾಜಕಾರಣದಲ್ಲಿ ಕಲ್ಲೋಲ ಸೃಷ್ಟಿಸಿದೆ. ಚಳಿಗಾಲದ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಖರ್ಗೆ ಹೇಳಿಕೆ ವ್ಯಾಪಕ ಚರ್ಚೆಗೆ ಈಡಾಗಿದೆ. ಖರ್ಗೆ ವಿರುದ್ಧ ಮುಗಿಬಿದ್ದಿದ್ದ ಬಿಜೆಪಿ ನಾಯಕರು ಖರ್ಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಖರ್ಗೆ, 'ನಾನು ಈ ಹೇಳಿಕೆ ನೀಡಿದ್ದು ರಾಜಸ್ಥಾನದ ಸಾರ್ವಜನಿಕ ಸಭೆಯಲ್ಲಿ. ಹೀಗಾಗಿ, ಸಂಸತ್ನಲ್ಲಿ ನಾನು ಕ್ಷಮೆ ಕೇಳಲಾರೆ' ಎಂದು ಹೇಳಿದ್ದಾರೆ.