ತಿರುಮಲದಲ್ಲಿ ರೊಚ್ಚಿಗೆದ್ದ ಆನೆಯಿಂದ ಮಾವುತನ ಕಾಲು ಮುರಿತ
ತಿರುಮಲದಲ್ಲಿ ಪೂಜೆಗೆ ಕರೆದೊಯ್ಯುತ್ತಿದ್ದಾಗ ರೊಚ್ಚಿಗೆದ್ದ ಹೆಣ್ಣಾನೆಯೊಂದು ಮಾವುತನನ್ನು ನೆಲಕ್ಕೆ ಕೆಡವಿ, ಕಾಲನ್ನು ತುಳಿದಿದೆ. ಅತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿರುಪತಿ, ಡಿಸೆಂಬರ್ 19: ರೊಚ್ಚಿಗೆದ್ದ ಆನೆಯ ದಾಳಿಯಿಂದ ಗಾಯಗೊಂಡ ಮಾವುತರೊಬ್ಬರು, ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಸಂಜೆ ತಿರುಮಲದಲ್ಲಿ ನಡೆದಿದೆ. ಗಂಗಯ್ಯ (39) ಗಾಯಗೊಂಡ ಮಾವುತ. ಶ್ರೀ ಭೂವರಾಹ ಸ್ವಾಮಿ ದೇವಾಲಯದ ಬಳಿ ಮಾವುತ ಗಂಗಯ್ಯ ಅವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಕ್ಷ್ಮಿ, ಅವನಿಜಾ ಎಂಬೆರಡು ಆನೆಗಳನ್ನು ಸಹಸ್ರ ದೀಪಾಲಂಕಾರ ಸೇವೆಗಾಗಿ ಕರೆತರುವಾಗ ಭೂವರಾಹ ದೇಗುಲದ ಬಳಿ ಲಕ್ಷ್ಮಿ ಎಂಬ ಆನೆಯ ಮೇಲೆ ಕೂತಿದ್ದ ಗಂಗಯ್ಯ ಅವರನ್ನು ನೆಲಕ್ಕೆ ಕೆಡವಿ, ಆತನ ಕಾಲನ್ನು ತುಳಿದಿದೆ. ಆ ವೇಳೆ ಗಂಗಯ್ಯ ಪ್ರಜ್ಞೆ ತಪ್ಪಿದರು. ಮತ್ತೊಂದು ಆನೆ ಅವನಿಜಾಳನ್ನು ಕರೆತರುತ್ತಿದ್ದ ಮಾವುತ ಎರಡನ್ನೂ ನಿಯಂತ್ರಣಕ್ಕೆ ತಂದು, ವಾಪಸ್ ಶೆಡ್ ಗೆ ಕರೆದೊಯ್ದರು.[ಚಿತ್ರದುರ್ಗದಲ್ಲಿ ಆನೆ ದಾಳಿಗೆ ಗರ್ಭಿಣಿ ಬಲಿ]
ಗಂಗಯ್ಯ ಅವರನ್ನು ಬಿಐಆರ್ ಆರ್ ಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತನ ಜೀವಕ್ಕೆ ಅಪಾಯವಿಲ್ಲ. ಆದರೆ ಮುರಿದ ಕಾಲಿಗೆ ಪ್ಲೇಟ್ ಅಳವಡಿಸಲಾಗಿದೆ. ಲಕ್ಷ್ಮಿ ಆನೆಯು ಸಹಜ ಸ್ಥಿತಿಗೆ ಮರಳುವವರೆಗೆ ತಜ್ಞರ ಪರಿಶೀಲನೆಯಲ್ಲಿ ಇರಿಸಲಾಗುವುದು. ನಿತ್ಯದ ಸೇವೆಗೆ ಅದನ್ನು ಬಳಸದಿರಲು ನಿರ್ಧರಿಸಿದ್ದೇವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.