ಕೊರೊನಾ ಭೀತಿ: 55 ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆ ಮುಂದಕ್ಕೆ
ನವದೆಹಲಿ, ಮರ್ಚ್ 24: ಕೊರೊನಾವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಈ ನಡುವೆ ಮಾರ್ಚ್ ತಿಂಗಳಿನಲ್ಲಿ ನಿಗದಿಯಾಗಿದ್ದ ರಾಜ್ಯಸಭೆ ಚುನಾವಣೆಯನ್ನುಕೇಂದ್ರ ಚುನಾವಣಾ ಆಯೋಗವು ಮುಂದೂಡಿದೆ.
ಮಾರ್ಚ್ 26 ರಂದು ರಾಜ್ಯಸಭೆಯ 55 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ ಕೊರೊನಾಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ದೇಶದೆಲ್ಲೆಡೆ ಮಾರ್ಚ್ 31ರ ತನಕ ಲಾಕ್ ಡೌನ್ ಇರುವುದರಿಂದ, ಚುನಾವಣೆಯ ಮುಂದಿನ ದಿನಾಂಕವನ್ನು ಮಾರ್ಚ್ 31ರ ಬಳಿಕ ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜ್ಯಸಭೆ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ಚುನಾವಣೆಗೆ ಸಜ್ಜಾಗಿವೆ. 55 ರಾಜ್ಯಸಭಾ ಸೀಟುಗಳ ಪೈಕಿ 37 ಸೀಟುಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 18 ಸೀಟುಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

ರಾಜ್ಯಸಭೆಯಲ್ಲಿ 82 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ತೆರವಾಗುವ 51 ಸ್ಥಾನಗಳ ಪೈಕಿ 13 ಸ್ಥಾನ ಗಳಿಸುವ ಸಾಧ್ಯತೆಯಿದೆ. ಒಡಿಶಾದಲ್ಲಿ ಮೂರು ಸ್ಥಾನಗಳು ತೆರವಾಗಲಿದ್ದು, ಈ ಪೈಕಿ ಎರಡು ಬಿಜೆಡಿ ಪಾಲಾಗಲಿದ್ದು, ಉಳಿದ ಒಂದು ಬಿಜೆಪಿಗೆ ಸಿಗಲಿದೆ. ಏಪ್ರಿಲ್ ನಲ್ಲಿ ಆಂಧ್ರದಿಂದ ನಾಲ್ಕು ಸ್ಥಾನಗಳು ತೆರವಾಗಲಿದ್ದು, ವೈಎಸ್ಆರ್ ಕಾಂಗ್ರೆಸ್ ಪಡೆದುಕೊಳ್ಳಲಿದೆ. ಹಿಮಾಚಲ ಪ್ರದೇಶ ಹಾಗೂ ಹರ್ಯಾಣದಲ್ಲಿ ತಲಾ ಒಂದು ಸ್ಥಾನಗಳು ಬಿಜೆಪಿಗೆ ಲಾಭವಾಗಲಿವೆ. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ ರಾಜ್ಯಸಭೆ ಟಿಕೆಟ್ ಪಡೆದಿದ್ದ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ರಾಜ್ಯಸಭೆ ಮೂಲಕ ಸಂಸತ್ತಿಗೆ ಪ್ರವೇಶ ಬಯಸಿದ್ದಾರೆ.
ಮಹಾರಾಷ್ಟ್ರದಿಂದ 7, ತಮಿಳುನಾಡಿನಿಂದ 6, ಬಿಹಾರ ಹಾಗೂ ಪಶ್ಚಿಮ ಬಂಗಾಳದಿಂದ ತಲಾ 5, ಆಂಧ್ರ ಹಾಗೂ ಗುಜರಾತ್ನಿಂದ ತಲಾ 4, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಒಡಿಶಾದಿಂದ ತಲಾ 3, ಜಾರ್ಖಂಡ್ ಹಾಗೂ ಛತ್ತೀಸ್ಗಢದಿಂದ ತಲಾ 2, ಅಸ್ಸಾಂ, ಮಣಿಪುರ, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳ ತಲಾ 1ಸ್ಥಾನಗಳು ತೆರವಾಗಿವೆ.












Click it and Unblock the Notifications