ಗುಜರಾತ್ನ ಮೂರು ಗ್ರಾಮಗಳಿಂದ ಚುನಾವಣೆ ಬಹಿಷ್ಕಾರ, ಕಾರಣವೇನು?
ಅಹಮದಾಬಾದ್, ಡಿಸೆಂಬರ್ 5: ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಮೂರು ಗ್ರಾಮಗಳ 5,200 ಮತದಾರರು ಸೋಮವಾರ ಎರಡನೇ ಮತ್ತು ಅಂತಿಮ ಹಂತದ ಮತದಾನವನ್ನು ಬಹಿಷ್ಕರಿಸಿದ್ದಾರೆ.
ನೀರಿನ ಕೊರತೆ ಸೇರಿದಂತೆ ತಮ್ಮ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅವರು ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದಾರೆ. ನರ್ಮದಾ ನೀರಿನಿಂದ ತಮ್ಮ ಗ್ರಾಮಗಳ ಎಲ್ಲಾ ಕೆರೆಗಳನ್ನು ತುಂಬಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ಸರ್ಕಾರ ಈಗಾಗಲೇ ಒಪ್ಪಿಕೊಂಡಿದ್ದರೂ ಗ್ರಾಮಸ್ಥರು ತಮ್ಮ ನಿಲುವಿನಲ್ಲಿ ಅಚಲರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Explainer: ಗುಜರಾತ್ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ? ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?
ಖೇರಾಳು ತಾಲೂಕಿನ ವರೆಠಾ, ದಲಿಸಾನ ಮತ್ತು ದಾವೋಲ್ ಗ್ರಾಮಸ್ಥರು ಸತತ ಮೂರನೇ ವರ್ಷ ವಿವಿಧ ಚುನಾವಣೆಗಳಲ್ಲಿ ತಮ್ಮ ಹಕ್ಕು ಚಲಾಯಿಸುವುದನ್ನು ಬಹಿಷ್ಕರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗುಜರಾತ್ನ ಉತ್ತರ ಮತ್ತು ಮಧ್ಯ ಭಾಗದ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆದಿದೆ.
182 ಸ್ಥಾನಗಳ ಪೈಕಿ ಡಿಸೆಂಬರ್ 1 ರಂದು 89 ಸ್ಥಾನಗಳಿಗೆ ಮೊದಲ ಹಂತದ ಮತದಾನ ನಡೆದಿತ್ತು. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಈ ಹಿಂದೆ ನಡೆದ ತಾಲೂಕು, ಜಿಲ್ಲಾ, ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಮೂರು ಗ್ರಾಮಗಳ ನಿವಾಸಿಗಳು ಮತದಾನ ಮಾಡಿರಲಿಲ್ಲ ಎಂದು ಅಧಿಕಾರಿ ತಿಳಿಸಿದರು. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ತಮ್ಮ ನೀರಿನ ಸಮಸ್ಯೆ ಪರಿಹಾರವಾಗಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ವಿಧಾನಸಭೆ ಚುನಾವಣೆ ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಮೂರು ಗ್ರಾಮಗಳ ಎಲ್ಲ ಕೆರೆಗಳಿಗೆ ಪೈಪ್ಲೈನ್ ಮೂಲಕ ನರ್ಮದಾ ನೀರು ತುಂಬಿಸಿ, ಕೃಷಿಗೆ ಧಾರೋಯ್ ಅಣೆಕಟ್ಟಿನಿಂದ ಸಮರ್ಪಕ ನೀರು ಬಿಡಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ 2022, ಇಲ್ಲಿವೆ ಅಂಕಿಅಂಶಗಳು
ಸೋಮವಾರ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ನಡೆದ ಮತದಾನದಲ್ಲಿ ವರೆಥಾ, ದಲಿಸಾನ ಮತ್ತು ದಾವೋಲ್ ಗ್ರಾಮಗಳ ಸುಮಾರು 5,200 ಮತದಾರರು ತಮ್ಮ ಹಕ್ಕು ಚಲಾಯಿಸುವುದನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಉದಿತ್ ಅಗರವಾಲ್ ಮಾತನಾಡಿ, ಗ್ರಾಮಸ್ಥರ ಪ್ರಮುಖ ಬೇಡಿಕೆಯನ್ನು ಸರ್ಕಾರ ಈಗಾಗಲೇ ಒಪ್ಪಿಕೊಂಡಿದ್ದರೂ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದು ಅವರ ಮತದಾನ ಬಹಿಷ್ಕಾರದ ಮೂರನೇ ವರ್ಷ, ನಾನು ಕೆಲವು ತಿಂಗಳ ಹಿಂದೆ ಈ ಗ್ರಾಮಗಳಿಗೆ ಭೇಟಿ ನೀಡಿ (ಮತದಾನ ಮಾಡಲು) ಪ್ರಯತ್ನಿಸಿದೆ. ಸರ್ಕಾರ ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದರೂ, ಗ್ರಾಮದ ಯಾರೂ ಇಂದು ಮತದಾನ ಮಾಡಲಿಲ್ಲ ಅವರು ಹೇಳಿದರು.
ಏತನ್ಮಧ್ಯೆ, ಸ್ಥಳೀಯ ಆಡಳಿತವು ಮೆಹ್ಸಾನಾ ಜಿಲ್ಲೆಯ ಬೆಚರಾಜಿ ತಾಲೂಕಿನ ಬರಿಯಾಫ್ ಗ್ರಾಮದ ಮತದಾರರಿಗೆ ಚುನಾವಣೆ ಬಹಿಷ್ಕಾರದ ವಿರುದ್ಧ ಮನವರಿಕೆ ಮಾಡಿತು. ನೀರು ಪೂರೈಕೆ ಸೇರಿದಂತೆ ಬಾಕಿ ಉಳಿದಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಹಿಂದೆಯೇ ಮತದಾನದಿಂದ ದೂರ ಉಳಿಯುವಂತೆ ಗ್ರಾಮಸ್ಥರು ಕರೆ ನೀಡಿದ್ದರು.
ನಮ್ಮ ನಿರಂತರ ಪ್ರಯತ್ನದಿಂದ, ಬರಿಯಾಫ್ ಗ್ರಾಮದ ನಿವಾಸಿಗಳು ಅಂತಿಮವಾಗಿ ಮಧ್ಯಾಹ್ನ ತಮ್ಮ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಂಡರು. ಗ್ರಾಮವು ಸಂಜೆಯವರೆಗೆ ಸುಮಾರು 50 ಪ್ರತಿಶತದಷ್ಟು ಮತದಾನವನ್ನು ಕಂಡಿತು ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಅಗರವಾಲ್ ಹೇಳಿದರು.