ವಾರಣಾಸಿಯಲ್ಲಿ ಕೇಜ್ರಿ ಮೇಲೆ ಮೊಟ್ಟೆ, ಮಸಿ ಎಸೆತ
ವಾರಣಾಸಿ, ಮಾ 25: ಪಕ್ಷದ ಸಮಾವೇಶಕ್ಕಾಗಿ ದೇವಾಲಯ ನಗರಿ ವಾರಣಾಸಿಗೆ ಬಂದಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೇಲೆ ದುಷ್ಕರ್ಮಿಗಳು ಮೊಟ್ಟೆ ಎಸೆದ ಘಟನೆ ವರದಿಯಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಅವರ ಮೇಲೆ ಕಪ್ಪುಮಸಿ ಎರಚಿದ ಘಟನೆಯೂ ವರದಿಯಾಗಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ದ ತೊಡೆ ತಟ್ಟಿ ನಿಂತಿರುವ ಕೇಜ್ರಿವಾಲ್, ಮಂಗಳವಾರ (ಮಾ 25) ವಾರಣಾಸಿಯಲ್ಲಿ ಗಂಗಾ ಸ್ನಾನ ಮಾಡಿ ಕಾಶಿ ವಿಶ್ವೇಶ್ವರನ ದರ್ಶನ ಮಾಡಿದ ನಂತರ ಕಾರ್ಯಕರ್ತರ ಜನಮತ ಸಂಗ್ರಹಿಸುತ್ತಿದ್ದ ವೇಳೆ ಅವರ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ. [ಮೋದಿ ಭಾಷಣವನ್ನು ಕನ್ನಡದಲ್ಲಿ ಕೇಳಿ]
ದೇವಾಲಯದ ಆವರಣದಿಂದ ಹೊರಬಂದು ಜನಮತ ಸಂಗ್ರಹಿಸುತ್ತಿದ್ದ ವೇಳೆ ದುಷ್ಕರ್ಮಿ ಎಸೆದ ಮೊಟ್ಟೆಗಳು ಕೇಜ್ರಿವಾಲ್ ಕಾರಿನ ಮೇಲೆ ಬಿದ್ದರೆ, ಮತ್ತಷ್ಟು ಪಕ್ಷದ ಕಾರ್ಯಕರ್ತರ ಮೇಲೆ ಬಿದ್ದಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಕೇಜ್ರಿವಾಲ್ ಮೇಲೆ ಮಸಿ ಎರಚಿದ ಘಟನೆಯೂ ನಡೆದಿದೆ.
ಘಟನೆಯಿಂದ ವಿಚಲಿತರಾಗದ ಕೇಜ್ರಿ, ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ.
ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿತ್ತಿದ್ದ ಕೇಜ್ರಿವಾಲ್, ಭ್ರಷ್ಟ ರಾಜಕಾರಣಿಗಳಿಂದ ಪವಿತ್ರ ಗಂಗಾ ನದಿಯೂ ಅಪವಿತ್ರವಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ವಾರಣಾಸಿಯಲ್ಲಿ ಮನೆ ಮನೆಗೂ ತೆರಳಿ ಜನಮತ ಸಂಗ್ರಹಿಸಿ, ಮೋದಿ ವಿರುದ್ದ ಸ್ಪರ್ಧಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ದ ಕೇಜ್ರಿವಾಲ್ ವಾಗ್ದಾಳಿ

ಮೋದಿ ವಿರುದ್ದ ಗೆಲ್ಲುತ್ತೇನೆ
ಜನರು ಮೋದಿ ವಿರುದ್ದ ಸ್ಪರ್ಧಿಸ ಬೇಕೆಂದು ಬಯಸಿದರೆ ವಾರಣಾಸಿಯಲ್ಲಿ ಅವರ ವಿರುದ್ದ ಸ್ಪರ್ಧಿಸುತ್ತೇನೆ. ಮತ್ತು ಅವರನ್ನು ಸೋಲಿಸುತ್ತೇನೆ ಎನ್ನುವ ವಿಶ್ವಾಸ ನನಗೆ ಮತ್ತು ಪಕ್ಷದ ಕಾರ್ಯಕರ್ತರಿಗಿದೆ.

ಇದು ಲೋಕಲ್ ಚುನಾವಣೆಯಲ್ಲ
ಅರವಿಂದ್ ಕೇಜ್ರಿವಾಲ್ ಉತ್ತರಪ್ರದೇಶದವನು ಅಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ನಾನು ವಾರಣಾಸಿ ನಿವಾಸಿ ಅಲ್ಲದಿರಬಹುದು. ಆದರೆ ಈಗ ನಡೆಯುತ್ತಿರುವುದು ಲೋಕಸಭಾ ಚುನಾವಣೆ, ಸ್ಥಳೀಯ ಚುನಾವಣೆಯಲ್ಲಿ. ಹಾಗಾಗಿ, ಸ್ಥಳೀಯ ನಿವಾಸಿ ಎನ್ನುವ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ.

ದೇಶಕ್ಕೆ ಬೇಕಾಗಿರುವುದು ಎರಡೇ ಕ್ಷೇತ್ರದ ಫಲಿತಾಂಶ
ಈ ಬಾರಿಯ ಚುನಾವಣೆಯಲ್ಲಿ ಇಡೀ ದೇಶಕ್ಕೆ ಬೇಕಾಗಿರುವುದು ಎರಡು ಕ್ಷೇತ್ರದ ಫಲಿತಾಂಶ, ಅದು ವಾರಣಾಸಿ ಮತ್ತು ಅಮೇಠಿ. ಮೋದಿ ವಿರುದ್ದ ಸಂಘಟಿತ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಯಾವ ಪಕ್ಷದವರೂ ಇದುವರೆಗೆ ನಮ್ಮ ಬಳಿ ಚರ್ಚಿಸಿಲ್ಲ. ನಾವಂತೂ ಯಾರ ಬಳಿಯೂ ಈ ಬಗ್ಗೆ ಚರ್ಚಿಸುವುದಿಲ್ಲ.

ಇಲ್ಲಿಂದ ಸೋತರೂ ರಾಜಕೀಯದಲ್ಲಿ ಇರುತ್ತೇನೆ
ಪವಿತ್ರ ಗಂಗಾ ಸ್ನಾನವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ತಪ್ಪು. ನಾನು ಮೋದಿ ವಿರುದ್ದ ವಾರಣಾಸಿಯಲ್ಲಿ ಸೋತರೂ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ.

ದಿಗ್ವಿಜಯ್ ಬಂದರೂ ಬರಲಿ
ವಾರಣಾಸಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಿಗ್ವಿಜಯ್ ಸಿಂಗ್ ಕಣಕ್ಕಿಳಿದರೂ ಸಂತೋಷದಿಂದ ಅವರನ್ನು ಸ್ವಾಗತಿಸಿ, ಸ್ಪರ್ಧೆ ಎದುರಿಸುತ್ತೇನೆ.












Click it and Unblock the Notifications