ಮೋದಿ ಬಗ್ಗೆ ಪ್ರಶ್ನೆ: ಪತ್ರಕರ್ತನಿಗೆ ಶ್ರೀಗಳ ಕಪಾಳಮೋಕ್ಷ
ನವದೆಹಲಿ, ಜ 23: ದ್ವಾರಕಾ ಶಾರದಾ ಪೀಠದ ಹಿರಿಯ ಶ್ರೀಗಳಾದ ಶ್ರೀಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಪತ್ರಕರ್ತನೊಬ್ಬನಿಗೆ ಕಪಾಳಮೋಕ್ಷ ಮಾಡಿ ವಿವಾದಕ್ಕೀಡಾಗಿದ್ದಾರೆ. ಶ್ರೀಗಳು ಪತ್ರಕರ್ತನಿಗೆ ಹೊಡೆದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿವೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಸಿಟ್ಟಾಗಿ ಶ್ರೀಗಳು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ವರದಿಯಾಗಿದೆ.
ಚುನಾವಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿಯನ್ನು ಯಾವುದೇ ಪಕ್ಷವು ಘೋಷಿಸಬಾರದು, ಚುನಾಯಿತ ಸಂಸದರು ಪ್ರಧಾನಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ಈ ಹಿಂದೆ ಸ್ವಾಮಿ ಸ್ವರೂಪಾನಂದ ಸರಸ್ವತಿ ಶ್ರೀಗಳು ಜಬಲ್ಪುರದಲ್ಲಿ ಹೇಳಿಕೆಯನ್ನು ನೀಡಿದ್ದರು.

ಸ್ವಾಮೀಜಿಗಳ ಈ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಕರ್ತ ಪದೇ ಪದೇ 'ಬಿಜೆಪಿ, ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಸರಿಯೇ' ಎನ್ನುವ ಪ್ರಶ್ನೆಗೆ ಸಿಟ್ಟಾಗಿ ಶ್ರೀಗಳು ಈ ರೀತಿ ನಡೆದುಕೊಂಡರು ಎಂದು ತಿಳಿದು ಬಂದಿದೆ.
ಮೋದಿ ಬಗ್ಗೆ ಅವಶ್ಯಕತೆಗಿಂತ ಹೆಚ್ಚಿನ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಆ ಪತ್ರಕರ್ತನಿಗೆ ನಾನು ಹೊಡೆದೆ ಎಂದು ಶ್ರೀಗಳು ತಮ್ಮ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾರೆ. ಮೋದಿಯನ್ನು ಒಂದೋ ಹೊಗಳುವುದು ಅಥವಾ ತೆಗಳುವುದೋ ಮಾಡಿ, ಮೋದಿಯನ್ನು ಸದಾ ಸುದ್ದಿಯಲ್ಲಿರುವಂತೆ ಮಾಡುವುದು ಕೆಲ ಮಾಧ್ಯಮಗಳ ಕೆಲಸವಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.
ನನಗೆ ಮೋದಿ ಮೇಲೆ ಯಾವುದೇ ದ್ವೇಷವಿಲ್ಲ. ಆದರೆ ಈ ಮಟ್ಟಕ್ಕೆ ಮೋದಿ ಬಂದಿದ್ದು, ಬೆಳೆದಿದ್ದು ಹೇಗೆ ಎಂದು ಅವರು ಜನತೆಗೆ ಮೊದಲು ಸ್ಪಷ್ಟ ಪಡಿಸಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.
ಶ್ರೀಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಶ್ರೀಗಳು ಕಾಂಗ್ರೆಸ್ ಪಕ್ಷದ ನಿಕಟವರ್ತಿಯಾಗಿದ್ದು, ಹಲವು ಬಾರಿ ಸ್ಥಳೀಯ ಪತ್ರಿಕೆಯಲ್ಲಿ ಮೋದಿ ವಿರುದ್ದ ಹೇಳಿಕೆಯನ್ನು ನೀಡಿದ್ದಾರೆಂದು ಸಿಎನ್ಎನ್ - ಐಬಿಎನ್ ವರದಿ ಮಾಡಿದೆ.












Click it and Unblock the Notifications