ಜನರ ಜೀವ ಉಳಿಸಲು ಹೋಗಿ ತಾನೇ ಬಲಿಯಾದ 'ರಾವಣ'

ಅಮೃತಸರ, ಅಕ್ಟೋಬರ್ 20: ರಾವಣನ ದಹನ ನೋಡಲು ಹೋದ 60ಕ್ಕೂ ಹೆಚ್ಚು ಮಂದಿ ರೈಲಿನ ಗಾಲಿಗೆ ಸಿಲುಕಿ ಜೀವ ಕಳೆದುಕೊಂಡರೆ, ಅವರನ್ನು ಉಳಿಸಲು ಮುಂದಾದ 'ರಾವಣ'ನ ಪಾತ್ರಧಾರಿಯೂ ಪ್ರಾಣ ಕಳೆದುಕೊಳ್ಳುವಂತಾಗಿದ್ದು ಮತ್ತೊಂದು ದುರಂತ.

ಸಂಜೆ ನಡೆದ ರಾಮ್‌ಲೀಲಾ ಪ್ರದರ್ಶನದಲ್ಲಿ ರಾವಣನ ವೇಷ ಧರಿಸಿದ್ದವರು ದಲ್ಬೀರ್ ಸಿಂಗ್. ಪ್ರದರ್ಶನ ಮುಗಿದ ಬಳಿಕ ಎಲ್ಲರಂತೆ ದಲ್ಬೀರ್ ಕೂಡ ರಾವಣನ ಪ್ರತಿಕೃತಿ ದಹನವನ್ನು ವೀಕ್ಷಿಸಲು ತೆರಳಿದ್ದರು. ಅವರು ಸಿಡಿಮದ್ದಿನ ಚಿತ್ತಾರವನ್ನು ಕಣ್ತುಂಬಿಕೊಳ್ಳಲು ಜೋದಾ ಪಾಠಕ್‌ನ ರೈಲ್ವೆ ಹಳಿಯತ್ತ ನಡೆದಿದ್ದರು.

ನೂರಾರು ಮಂದಿ ಸಿಡಿಮದ್ದಿನ ಸದ್ದು ಮತ್ತು ಬೆಳಕನ್ನು ಆನಂದಿಸುತ್ತಾ ನಿಂತಿದ್ದರೆ, ಅವರಿಗೆ ವೇಗದ ರೈಲು ತಮ್ಮತ್ತ ಧಾವಿಸಿ ಬರುತ್ತಿರುವುದರ ಪರಿವೇ ಇರಲಿಲ್ಲ. ಆದರೆ, ರೈಲು ಬರುತ್ತಿರುವುದನ್ನು ಕಂಡ ದಲ್ಬೀರ್ ಸಿಂಗ್, ಕೂಡಲೇ ಜನರನ್ನು ಎಚ್ಚರಿಸಲು ಅವರತ್ತ ಓಡತೊಡಗಿದರು.

ಈ ವೇಳೆ ಅವರೂ ರೈಲ್ವೆ ಹಳಿಯಿಂದ ಹೊರದಾಟುವಲ್ಲಿ ವಿಫಲರಾದರು. ರೈಲು ಬರುವುದನ್ನು ಕಂಡು ಅಲ್ಲಿಂದ ಕೂಗುತ್ತಾ ಜನರ ಜೀವ ಉಳಿಸಲು ಮುಂದೆ ಓಡಿದ ದಲ್ಬೀರ್ ರೈಲಿನ ಚಕ್ರಕ್ಕೆ ಸಿಲುಕಿದರು. ಅವರಂತೆಯೇ ಇನ್ನೂ 61 ಮಂದಿ ಹಳಿಗಳ ಮೇಲೆ ಶವವಾದರು.

ಕುಟುಂಬದಲ್ಲಿ ದುಃಖ

ಕುಟುಂಬದಲ್ಲಿ ದುಃಖ

ದಲ್ಬೀರ್ ಸಿಂಗ್ ಅವರ ತಾಯಿ, ಇತ್ತೀಚೆಗೆ ವಿವಾಹವಾಗಿದ್ದ ಪತ್ನಿ ಮತ್ತು ಸಹೋದರ ಮಾತಿಲ್ಲದೆ ಮೂಕವಾಗಿದ್ದರು. ರಾಮಲೀಲಾದಲ್ಲಿ ದಶಕದಿಂದಲೂ ಹೆಚ್ಚು ಸಮಯದಿಂದ ದಲ್ಬೀರ್ ವಿವಿಧ ಪಾತ್ರಗಳನ್ನು ಮಾಡಿದ್ದರು. ಶುಕ್ರವಾರ ಕಾರ್ಯಕ್ರಮಕ್ಕೆಂದು ಮನೆಯಿಂದ ಬೇಗನೆ ಹೊರಟಿದ್ದರು. ರಾಮ ಮತ್ತು ಲಕ್ಷ್ಮಣನ ಪಾತ್ರಧಾರಿಗಳಾದ ತನ್ನ ಇಬ್ಬರು ಸ್ನೇಹಿತರಿಗೆ ಸಿದ್ಧಗೊಳ್ಳಲು ನೆರವಾಗುವ ಸಲುವಾಗಿ ಅವರು ಬೇಗ ತೆರಳಿದ್ದರು.

ಸೊಸೆಗೆ ಕೆಲಸ ನೀಡಿ

ಸೊಸೆಗೆ ಕೆಲಸ ನೀಡಿ

20ಕ್ಕೂ ಹೆಚ್ಚು ವರ್ಷದಿಂದ ಸಮೀಪದ ಹಳ್ಳಿಗಳ ಜನರು ಜೋದಾ ಪಾಠಕ್‌ನ ಖಾಲಿ ಮೈದಾನದಲ್ಲಿ ದಸರಾ ಆಚರಣೆಗೆಂದು ಸೇರಿಕೊಳ್ಳುತ್ತಿದ್ದರು. ರೈಲ್ವೆ ನಿಲ್ದಾಣದಿಂದ 50 ಮೀಟರ್‌ನಷ್ಟೆ ದೂರದಲ್ಲಿ ಆಚರಣೆ ನೋಡಲು ಸೇರಿಕೊಳ್ಳುತ್ತಿದ್ದರು ಎಂದು ದಲ್ಬೀರ್ ಸಿಂಗ್‌ನ ತಾಯಿ ಸಾವನ್ ಕೌರ್ ಹೇಳಿದ್ದಾರೆ.

ದಲ್ಬೀರ್ ಅವರ ಪತ್ನಿಗೆ ಇನ್ನೂ ಇಪ್ಪತ್ತು ವರ್ಷ ವಯಸ್ಸು. ಎಂಟು ತಿಂಗಳ ಕೂಸು ಅವರ ಕೈಯಲ್ಲಿತ್ತು. ಕೆನ್ನೆಯ ಮೇಲೆ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ತಮ್ಮ ಸೊಸೆಗೆ ಕೆಲಸ ನೀಡುವಂತೆ ಸರ್ಕಾರವನ್ನು ಕೋರುವುದಾಗಿ ಸಾವನ್ ಕೌರ್ ತಿಳಿಸಿದರು.

30 ಸೆಕೆಂಡ್ ಮೊದಲಷ್ಟೇ ಹೋಗಿತ್ತು...

30 ಸೆಕೆಂಡ್ ಮೊದಲಷ್ಟೇ ಹೋಗಿತ್ತು...

ದಸರಾ ಸಂಭ್ರಮದಲ್ಲಿ ಮುಳುಗಿದ್ದ ಸುಮಾರು 60 ಮಂದಿಯ ಮೇಲೆ ರೈಲು ಹರಿದುಹೋಗುವ ಕೇವಲ 30 ಸೆಕೆಂಡುಗಳ ಮುಂಚೆಯಷ್ಟೇ ಇನ್ನೊಂದು ದಿಕ್ಕಿನಿಂದ ರೈಲೊಂದು ನಿಧಾನವಾಗಿ ಅದೇ ಸ್ಥಳದಲ್ಲಿ ಹಾದುಹೋಗಿತ್ತು.

ದುರ್ಘಟನೆ ಸಂಭವಿಸಿದ ಎರಡು ಕಿ.ಮೀ. ದೂರದಲ್ಲಿರುವ ಅಮೃತಸರ ರೈಲ್ವೆ ನಿಲ್ದಾಣದಿಂದ ಪಶ್ಚಿಮ ಬಂಗಾಳದ ಹೌರಾಕ್ಕೆ ತೆರಳಿತ್ತು. ಎರಡನೆಯ ರೈಲು ಜಲಂಧರ್‌ನಿಂದ ಅಮೃತಸರಕ್ಕೆ ವೇಗವಾಗಿ ಬರುತ್ತಿತ್ತು. ರಾವಣನ ಪ್ರತಿಕೃತಿ ದಹಿಸುವ ಕೆಲವೇ ಸೆಕೆಂಡುಗಳ ಮೊದಲು ರೈಲು ನಿಧಾನವಾಗಿ ಹಾದುಹೋಗುವುದು ಮೊಬೈಲ್ ವಿಡಿಯೋವೊಂದರಲ್ಲಿ ಕಾಣಿಸಿದೆ. ಆ ರೈಲು ಹಾದು ಹೋದ ಅರ್ಧ ನಿಮಿಷದಲ್ಲೇ ವೇಗವಾಗಿ ಇನ್ನೊಂದು ದಿಕ್ಕಿನಿಂದ ರೈಲು ಅವರ ಮೇಲೆ ನುಗ್ಗಿದೆ.

ರಾವಣನ ನೋಡಲು ಹೋದ ಮಕ್ಕಳು ಬರಲಿಲ್ಲ

ರಾವಣನ ನೋಡಲು ಹೋದ ಮಕ್ಕಳು ಬರಲಿಲ್ಲ

'ನನ್ನ ಮಗ ಮೊದಲ ಬಾರಿಗೆ ದಸರಾ ಸಂಭ್ರಮ ನೋಡಲು ಹೋಗಿದ್ದ. ಆದರೆ, ಆತ ಮರಳಿ ಬರಲಿಲ್ಲ'- ದುರಂತದಲ್ಲಿ ಮಗನನ್ನು ಕಳೆದುಕೊಂಡಿದ್ದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಅವರಿಂದ ಅನತಿ ದೂರದಲ್ಲಿ ಮತ್ತೊಬ್ಬ ತಾಯಿ ರೋಧಿಸುತ್ತಾ ಕುಳಿತಿದ್ದರು. ಆಕೆಯ ಮೂರು ವರ್ಷದ ಮಗಳು ರೈಲಿನ ಅಡಿ ಸಿಲುಕಿ ಶವವಾಗಿದ್ದಳು. ತಲೆಗೆ ತೀವ್ರ ಪೆಟ್ಟಾಗಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಳು. ಆ ಮಹಿಳೆಯ ಗಂಡ ಮತ್ತು ಮಗನಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+