ಮೊದಲ ಬಾರಿಗೆ ರಾಷ್ಟ್ರೀಯ ಭದ್ರತಾ ಯೋಜನೆ; ರಾಹುಲ್ ಸಮಿತಿಯಲ್ಲಿ 'ಸರ್ಜಿಕಲ್ ಸ್ಟ್ರೈಕ್' ಹೂಡಾ
ನವದೆಹಲಿ, ಫೆಬ್ರವರಿ 21: ಈಚೆಗೆ ನಡೆದ ಪುಲ್ವಾಮಾ ಉಗ್ರಗಾಮಿಗಳ ದಾಳಿಯಲ್ಲಿ ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಭದ್ರತಾ ವಿಚಾರವಾಗಿಯೇ ದೂರದೃಷ್ಟಿ ಒಳಗೊಂಡ ದಾಖಲೆ ಸಿದ್ಧಪಡಿಸಲು ತೀರ್ಮಾನಿಸಿದ್ದು, ಅದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದಾರೆ.
ಆ ತಂಡವನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಮುನ್ನಡೆಸಲಿದ್ದಾರೆ. ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ ಎರಡೂ ಕಾಲು ವರ್ಷದ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಇದೇ ಹೂಡಾ ಅವರು ನಾರ್ಥನ್ ಆರ್ಮಿ ಕಮ್ಯಾಂಡಿಂಗ್ ಅಧಿಕಾರಿ ಆಗಿದ್ದರು. ಆ ಕಾರ್ಯಾಚರಣೆಯನ್ನು ಯಶಸ್ವಿ ಆಗುವಂತೆ ನೋಡಿಕೊಂಡಿದ್ದರು.
ಸರ್ಜಿಕಲ್ ದಾಳಿಗೆ ಅತಿಯಾದ ಪ್ರಚಾರ: ನಿವೃತ್ತ ಸೇನಾಧಿಕಾರಿ ಕಿಡಿ
ಆಯ್ದ ತಜ್ಞರ ತಂಡದ ಜತೆಗೆ ಚರ್ಚಿಸುವ ಈ ಸಮಿತಿಯು ಗಡಿ ರಕ್ಷಣೆ ವಿಚಾರವಾಗಿ ದೂರದೃಷ್ಟಿ ಒಳಗೊಂಡ ದಾಖಲೆಯನ್ನು ಸಿದ್ಧಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಒಂದು ತಿಂಗಳ ಸಮಯದಲ್ಲಿ ವರದಿಯನ್ನು ಪೂರ್ಣಗೊಳಿಸುತ್ತೇವೆ ಎಂದು ಹೂಡಾ ಹೇಳಿದ್ದಾರೆ.
ಟಾಸ್ಕ್ ಫೋರ್ಸ್ ನಲ್ಲಿ ವಿವಿಧ ತಜ್ಞರು ಇರುತ್ತಾರೆ. ಮಾಜಿ ರಾಜತಾಂತ್ರಿಕರು, ಮಾಜಿ ಸೇನಾಧಿಕಾರಿಗಳು ಹಾಗೂ ಮಾವೋವಾದಿ ಪ್ರದೇಶಗಳಲ್ಲಿ ಪೊಲೀಸರಾಗಿ ಸೇವೆ ಸಲ್ಲಿಸಿದವರು ಸಹ ಇರುತ್ತಾರೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ
ಈ ವರೆಗೆ ಭಾರತದಲ್ಲಿ ಇಲ್ಲದಂಥ ರಾಷ್ಟ್ರೀಯ ಭದ್ರತಾ ಯೋಜನೆ ಬಗ್ಗೆ ಚರ್ಚೆ ನಡೆಸಲು ಇದು ಸಿದ್ಧತೆ ಮಾಡುತ್ತದೆ ಎಂದು ಹೂಡಾ ಹೇಳಿದ್ದಾರೆ. ಫೆಬ್ರವರಿ ಹದಿನಾಲ್ಕರಂದು ನಡೆದ ಉಗ್ರದಾಳಿಗೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದು ಕಾಂಗ್ರೆಸ್ ನಿಂದ ನರೇಂದ್ರ ಮೋದಿ ಸರಕಾರದ ವಿರುದ್ಧ ದಾಳಿ ನಡೆಸಿದ ಕೆಲವು ಗಂಟೆಗಳಲ್ಲಿ ರಾಹುಲ್ ಗಾಂಧಿ ಗುರುವಾರ ಹೂಡಾ ಅವರನ್ನು ಭೇಟಿ ಆಗಿದ್ದಾರೆ.
ಈ ಭಾರಿ ಭದ್ರತಾ ವೈಫಲ್ಯದ ಹೊಣೆಯನ್ನು ಹೊರದ ಬಗ್ಗೆ ಗುರುವಾರದಂದು ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರನ್ನು ಪ್ರಶ್ನೆ ಮಾಡಿದೆ.