ಕೌನ್ಸಿಲರ್ಗಳನ್ನು ಖರೀದಿಸುವ ಕೊಳಕು ಆಟಕ್ಕಿಳಿದ ಬಿಜೆಪಿ: ಎಎಪಿ ಗಂಭೀರ ಆರೋಪ
ನವದೆಹಲಿ, ಡಿಸೆಂಬರ್ 10: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ಗೆ (ಎಂಸಿಡಿ) ಇತ್ತೀಚೆಗೆ ಆಯ್ಕೆಯಾದ ಕೌನ್ಸಿಲರ್ಗಳನ್ನು ಭಾರತೀಯ ಜನತಾ ಪಕ್ಷವು ಖರೀದಿಸಲು ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷವು ಇಂದು ಆರೋಪಿಸಿದೆ.
ಬಿಜೆಪಿ ತನ್ನ ಕೊಳಕು ಆಟಕ್ಕೆ ಇಳಿದಿದೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.
ಮೂವರು ಎಎಪಿ ಕೌನ್ಸಿಲರ್ಗಳಾದ ಡಾ.ರೋನಾಕ್ಷಿ ಶರ್ಮಾ, ಅರುಣ್ ನವಾರಿಯಾ ಮತ್ತು ಜ್ಯೋತಿ ರಾಣಿ ಅವರೊಂದಿಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹಿರಿಯ ಆಪ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, 'ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ 30 ಕಡಿಮೆ ಸ್ಥಾನಗಳನ್ನು ಪಡೆದಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ 80 ಸ್ಥಾನಗಳನ್ನು ಕಳೆದುಕೊಂಡಿದೆ' ಎಂದು ಹೇಳಿದ್ದಾರೆ.
'ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಕರ್ನಾಟಕ, ಗೋವಾ ಮತ್ತು ಗುಜರಾತ್ನಲ್ಲಿ ಶಾಸಕರ ಕುದುರೆ ವ್ಯಾಪಾರದಂತಹ ಕೊಳಕು ಆಟಗಳನ್ನು ಇಲ್ಲಿ ಆಡುತ್ತಿದೆ' ಎಂದು ಆರೋಪಿಸಿದ್ದಾರೆ.

ಅವರು ದೆಹಲಿಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಖರೀದಿಸುವ ಸೂತ್ರವನ್ನು ಅನ್ವಯಿಸುತ್ತಿದ್ದಾರೆ. ಬೆದರಿಕೆ ಮತ್ತು ಹಣದ ಮೂಲಕ 'ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಮತ್ತು ಜನಾದೇಶವನ್ನು ಅವಮಾನಿಸಲು' ಪ್ರಯತ್ನಿಸುತ್ತಿರುವವರನ್ನು ಬಂಧಿಸಿ ಜೈಲಿಗಟ್ಟುವಂತೆ ದೆಹಲಿ ಪೊಲೀಸ್ ಕಮಿಷನರ್ಗೆ ಮನವಿ ಮಾಡಿದ್ದಾರೆ.
'ಬಿಜೆಪಿ ನಾಚಿಕೆಯಿಲ್ಲದ ಪಕ್ಷವಾಗಿದೆ. ಅದು ನಮಗಿಂತ 30 ಕಡಿಮೆ ಸ್ಥಾನಗಳನ್ನು ಪಡೆದ ನಂತರವೂ ಮೇಯರ್ ಬಿಜೆಪಿಯವರೇ ಎಂಬುದಾಗಿ ಹೇಳುತ್ತದೆ' ಎಂದು ಸಂಜಯ್ ಸಿಂಗ್ ಹೇಳಿದರು.
ಯೋಗೇಂದ್ರ ಎಂಬ ವ್ಯಕ್ತಿ ಶ್ರೀಮತಿ ಶರ್ಮಾ ಅವರಿಗೆ ಕರೆ ಮಾಡಿ ಬಿಜೆಪಿಯ ರಾಜ್ಯಾಧ್ಯಕ್ಷ ಆದೇಶ್ ಕುಮಾರ್ ಗುಪ್ತಾ ಅವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಗುಪ್ತಾ ಮತ್ತು ಬಿಜೆಪಿ ಕಾರ್ಯಕರ್ತರು ಎಂಸಿಡಿ ಕೌನ್ಸಿಲರ್ಗಳನ್ನು ಖರೀದಿಸಲು ₹ 100 ಕೋಟಿ ಬಜೆಟ್ ಅನ್ನು ಪ್ರಸ್ತಾಪಿಸಿದ್ದಾರೆ ಎಂದು ಸಿಂಗ್ ಆರೋಪಿಸಿದರು.

ಎಎಪಿ ಕೌನ್ಸಿಲರ್ಗಳು ಮೇಯರ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಲು ಬೆದರಿಕೆಗಳು ಮತ್ತು ₹ 50 ಲಕ್ಷ ಆಫರ್ಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
'ಇವರು ಎಎಪಿ ಕೌನ್ಸಿಲರ್ಗಳು. ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಪ್ರಾಮಾಣಿಕತೆ ಮತ್ತು ನಂಬಿಕೆಯಿಂದ ನಿಲ್ಲುತ್ತಾರೆ. ನಮ್ಮ ಕೌನ್ಸಿಲರ್ಗಳು ಅವರ ಎಲ್ಲಾ ತಂತ್ರಗಳನ್ನು ಬಹಿರಂಗಪಡಿಸುತ್ತಲೇ ಇರುತ್ತಾರೆ' ಎಂದು ಸಿಂಗ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವು ಬಿಜೆಪಿಯ ಕೌನ್ಸಿಲರ್ಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಈ ಹಿಂದೆ ಬಿಜೆಪಿ ಆರೋಪಿಸಿತ್ತು.
ಕೌನ್ಸಿಲರ್ಗಳನ್ನು ಸೆಳೆಯಲು ಅರವಿಂದ್ ಕೇಜ್ರಿವಾಲ್ ಅವರ ಏಜೆಂಟರು ದೆಹಲಿಯ ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಆಮ್ ಆದ್ಮಿ ಪಕ್ಷವು ಬಿಜೆಪಿಯು ಆಪರೇಷನ್ ಕಮಲವನ್ನು ನಡೆಸುತ್ತಿದೆ ಎಂದು ಆರೋಪಿಸಿದಂತೆ, ಬಿಜೆಪಿಯು ಈಗ ಆಮ್ ಆದ್ಮಿ ಪಕ್ಷವು 'ಆಪರೇಷನ್ ಝಾಡು (ಪೊರಕೆ: ಎಎಪಿಯ ಚುನಾವಣಾ ಚಿಹ್ನೆ) ನಡೆಸುತ್ತಿದೆ ಎಂದು ಆರೋಪಿಸುತ್ತಿದೆ.
ಈ ಬಾರಿಯ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವಿನ ಮತ ಗಳಿಕೆ ಪ್ರಮಾಣದಲ್ಲಿನ ವ್ಯತ್ಯಾಸ ಕೇವಲ ಶೇ.3 ರಷ್ಟಿದೆ.
2017 ರ ದೆಹಲಿ ಪಾಲಿಕೆ ಚುನಾವಣೆಗೆ ಹೋಲಿಸಿದರೆ, AAP ಸರಿಸುಮಾರು ಶೇ 16 ಮತಗಳನ್ನು ಪಾಲನ್ನು ಹೆಚ್ಚಿಸಿಕೊಂಡಿದೆ.
ಎಂಸಿಡಿ ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ದೆಹಲಿ ಜನತೆಗೆ ಧನ್ಯವಾದಗಳು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಹಾಗೂ ಪ್ರಧಾನಿ ಮೋದಿ ಅವರ ಆಶೀರ್ವಾದ ಬೇಕೆಂದು ಕೇಜ್ರಿವಾಲ್ ತಿಳಿಸಿದ್ದಾರೆ. ಸುಂದರ ದೆಹಲಿ ನಗರವನ್ನು ನಿರ್ಮಾಣ ಮಾಡಲು ಸಹಕರಿಸಬೇಕೆಂದು ಜನರಿಗೆ ಕೇಜ್ರಿವಾಲ್ ಹೇಳಿದ್ದಾರೆ.












Click it and Unblock the Notifications