just in:ಸ್ವಾತಂತ್ರ್ಯ ಹೋರಾಟಗಾರರ ಕಥೆ ಎಲ್ಲರೂ ನೋಡಿ-ಪ್ರಹ್ಲಾದ್ ಜೋಶಿ
ನವದೆಹಲಿ, ಆಗಸ್ಟ್ 18: 'ಸ್ವರಾಜ್; ಭಾರತ್ ಕೆ ಸ್ವತಂತ್ರ ಸಂಗ್ರಾಮ್ ಕಿ ಸಮಗ್ರ ಗಾಥಾ' ಎಂಬ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ವಿಶಿಷ್ಟ ಸರಣಿ ನಿರ್ಮಾಣ ಮತ್ತು ಪ್ರದರ್ಶನದ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುವ 'ಸ್ವರಾಜ್: ಭಾರತ್ ಕೆ ಸ್ವತಂತ್ರ ಸಂಗ್ರಾಮ್ ಕಿ ಸಮಗ್ರ ಗಾಥಾ' ಟಿವಿ ಶೋನ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಂತ್ರಿ ಮಂಡಳಿ ಮತ್ತು ಇತರ ಗಣ್ಯರೊಂದಿಗೆ ಭಾಗವಹಿಸಿದರು.
ದೆಹಲಿಯ ಸಂಸತ್ ಭವನದ ಗ್ರಂಥಾಲಯ ಕಟ್ಟಡದ ಬಾಲಯೋಗಿ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ ಈ ವಿಶಿಷ್ಟ ಸರಣಿ ಪ್ರದರ್ಶನವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಸ್ವರಾಜ್ ಸಿನಿಮಾ ವೀಕ್ಷಣೆ ವೀಕ್ಷಿಸಿದ ಬಳಿಕ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಭಾವನಾತ್ಮಕ ಅನಿಸಿಕೆ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರು, ಸಂಸದರು ಈ ಸಿನಿಮಾ ವೀಕ್ಷಿಸಿದರು. ಪ್ರಧಾನಿ ಮೋದಿ ಜೊತೆ ದೇಶ ಭಕ್ತರ ಕಥೆ ವೀಕ್ಷಿಸಿ ಪುಳಕಿತನಾದೆ. ನಮ್ಮ ವೀರರು, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ವಿಶೇಷ ಸರಣಿಯನ್ನು ತಾವೆಲ್ಲರೂ ನೋಡಲೇಬೇಕೆಂದು ಸಚಿವ ಜೋಶಿ ಟ್ವೀಟ್ ಮಾಡಿದ್ದಾರೆ.
"ಉಳ್ಳಾಲದ ರಾಣಿ ಅಬ್ಬಕ್ಕ ಮತ್ತು ಕೆಳದಿಯ ಶಿವಪ್ಪ ನಾಯ್ಕ, ಕೆಳದಿ ಚೆನ್ನಮ್ಮ ಅವರ ಆತ್ಮಸ್ಥೈರ್ಯದ ಸ್ಪೂರ್ತಿದಾಯಕ ಅಲೆ ಮತ್ತು ಅಂತಿಮ ತ್ಯಾಗದ ಅಲೆಯನ್ನು ಪ್ರದರ್ಶಿಸಲಾಯಿತು. ನಮ್ಮ ಜನ್ಮಭೂಮಿಗಾಗಿ ಅವರ ಬದ್ಧತೆ ಮತ್ತು ತ್ಯಾಗ ಅಪ್ರತಿಮವಾಗಿ ಉಳಿಯುತ್ತದೆ" ಎಂದಿದ್ದಾರೆ.
"75 ಸಂಚಿಕೆಯ ಈ ವಿಶೇಷ ಸರಣಿಯನ್ನು ತಾವೆಲ್ಲರೂ ಖಂಡಿತವಾಗಿಯೂ ನೋಡಲೇ ಬೇಕು. ಪ್ರತಿ ಸಂಚಿಕೆಯೂ ನಮ್ಮ ವೀರ ಹಾಗೂ ಸ್ಪೂರ್ತಿಯ ಚಿಲುಮೆಯಂತಿದ್ದ ಹಲವು ನಾಯಕರ ಇತಿಹಾಸವನ್ನು ತಿಳಿಸುತ್ತದೆ ಹಾಗೂ ದೇಶಭಕ್ತಿಯನ್ನು ಮತ್ತಷ್ಟು ಜಾಗೃತಗೊಳಿಸುತ್ತದೆ. ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ದೂರದರ್ಶನದಲ್ಲಿ ಈ ಸರಣಿ ಪ್ರಸಾರವಾಗಲಿದೆ" ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ಅನುರಾಗ್ ಠಾಕೂರ್ ಮತ್ತು ಪಿಯೂಷ್ ಗೋಯಲ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.