ಹಿಂದಿಯನ್ನು ದೇಶದ ಮೇಲೆ ಹೇರುವ ಪ್ರಯತ್ನವನ್ನು ನಿಲ್ಲಿಸಿ: ಪ್ರಧಾನಿಗೆ ಸ್ಟಾಲಿನ್ ಮನವಿ
ಚೆನ್ನೈ, ಅಕ್ಟೋಬರ್ 10: ತಮಿಳುನಾಡಿನ ಮೇಲೆ ಮತ್ತೊಂದು ಭಾಷಾ ಯುದ್ಧವನ್ನು ಹೇರಬೇಡಿ. ನಮ್ಮ ಭಾಷಾ ಪ್ರಜ್ಞೆಯ ಬೆಂಕಿಯನ್ನು ಹೊತ್ತಿಸಬೇಡಿ. ಹಿಂದಿಯನ್ನು ದೇಶದ ಮೇಲೆ ಹೇರುವ ಪ್ರಯತ್ನವನ್ನು ನಿಲ್ಲಿಸಿ ಮತ್ತು ಅದರ ಏಕತೆಯನ್ನು ಕಾಪಾಡುವಂತೆ ನಾನು ಪ್ರಧಾನಿಯನ್ನು ವಿನಂತಿಸುತ್ತೇನೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಭಾರತೀಯ ಸಂವಿಧಾನದ ಶೆಡ್ಯೂಲ್ 8ರಲ್ಲಿ 22 ಭಾಷೆಗಳು ಸಮಾನ ಸ್ಥಾನಮಾನ ಹೊಂದಿರುವಾಗ ಹಿಂದಿಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವ ಅಗತ್ಯವೇನಿದೆ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರವು ಅಧಿಕೃತ ಭಾಷೆಗಳ ಸಂಸತ್ತಿನ ಸಮಿತಿಯ 11ನೇ ವರದಿಯು ದೇಶಾದ್ಯಂತ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು, ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಶಿಫಾರಸು ಮಾಡಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ. ಬಿಜೆಪಿ (ಭಾರತೀಯ ಜನತಾ ಪಕ್ಷ) ಸರ್ಕಾರವು ಒಂದು ಭಾಷೆ, ಒಂದು ಧರ್ಮ ಮತ್ತು ಒಂದು ಸಂಸ್ಕೃತಿಯನ್ನು ಜನರ ಮೇಲೆ ಹೇರುವ ಮೂಲಕ ಒಂದು ರಾಷ್ಟ್ರದ ನೆಪದಲ್ಲಿ ವೈವಿಧ್ಯತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಇದು ಭಾರತದ ವೈವಿಧ್ಯತೆಗೆ ಅಪಾಯವಾಗಿದೆ ಎಂದರು.

ಸರ್ಕಾರಿ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡದಿದ್ದರೆ ಎಚ್ಚರಿಕೆ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತರ ಭಾಷೆಗಳಿಗಿಂತ ಹಿಂದಿಗೆ ನೀಡಲಾದ ಈ ಆದ್ಯತೆಯು ಅಸಾಂವಿಧಾನಿಕವಾಗಿದೆ ಮತ್ತು ಅಂತಹ ಕ್ರಮವು ರಾಷ್ಟ್ರದ ಸಮಗ್ರತೆಗೆ ಬೆದರಿಕೆಯಾಗಿದೆ ಎಂದು ಸ್ಟಾಲಿನ್ ಹೇಳಿದರು.
1965ರಲ್ಲಿ ಹಿಂದಿಯನ್ನು ಹೇರುವ ಪ್ರಯತ್ನ ನಡೆದಾಗ ತಮಿಳು ಭಾಷೆಯ ರಕ್ಷಣೆಗಾಗಿ ಯುವ ತಮಿಳು ಜನರು ಉಗ್ರ ಪ್ರತಿಭಟನೆ ಮಾಡಿದ್ದರು. ಅಲ್ಲದೆ ಎದೆಗೆ ಗುಂಡು ಸಹ ಹೊಡೆಸಿಕೊಂಡ ಈ ಇತಿಹಾಸವನ್ನು ಯಾರೂ ಮರೆಯಬಾರದು. 1968ರಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಲಾಗಿದ್ದು, ಈಗ 8ನೇ ಶೆಡ್ಯೂಲ್ನಲ್ಲಿರುವ ಎಲ್ಲಾ 22 ಭಾಷೆಗಳನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಬಿಜೆಪಿ ಸಂವಿಧಾನವನ್ನು ಗೌರವಿಸುತ್ತಿಲ್ಲ ಮತ್ತು ಹಿಂದಿ ಹೇರಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಈ ಕ್ರಮವು ಅಪ್ರಾಯೋಗಿಕವಾಗಿದೆ ಮತ್ತು ವಿಭಜಕವಾಗಿದೆ. ಏಕೆಂದರೆ ಇದು ಹಿಂದಿ ಮಾತನಾಡುವವರು ಭಾರತೀಯ ಪ್ರಜೆಗಳು ಮತ್ತು ಇತರರು ಎರಡನೇ ದರ್ಜೆಯ ಪ್ರಜೆಗಳು ಎಂಬ ಭಾವನೆಯನ್ನು ಸೃಷ್ಟಿಸುತ್ತದೆ. ತನ್ನ ಭಾಷೆಯ ಮೇಲಿನ ಪ್ರೀತಿಯನ್ನು ಹೊಂದಿರುವ ಯಾವುದೇ ರಾಜ್ಯವು ಈ ಕ್ರಮವನ್ನು ವಿರೋಧಿಸುತ್ತದೆ ಎಂದು ಸ್ಟಾಲಿನ್ ಹೇಳಿದರು.

ತಮಿಳುನಾಡು ಸಂಸದ ಪಿ ಚಿದಂಬರಂ ಕೂಡ ವರದಿಗೆ ಪ್ರತಿಕ್ರಿಯಿಸಿ, ಮೋದಿ ಸರ್ಕಾರವು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಲು ನಿರ್ಧರಿಸಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ. ಹಿಂದಿಯೇತರ ರಾಜ್ಯಗಳು ಈ ಕ್ರಮವನ್ನು ವಿರೋಧಿಸುತ್ತವೆ ಎಂದು ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರ ಮತ್ತು ಹಿಂದಿಯೇತರ ರಾಜ್ಯಗಳ ನಡುವಿನ ಮುಖಾಮುಖಿಯ ಪರಿಣಾಮಗಳು ದೇಶಕ್ಕೆ ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications