ನಿರ್ವಹಣಾ ಮಂಡಳಿ ರಚನೆಗೆ ತಡೆ ಹಾಕ್ತಾರಾ ಪ್ರಧಾನಿ ಮೋದಿ?
ಬೆಂಗಳೂರು, ಅಕ್ಟೋಬರ್ 3: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ತಡೆ ಹಾಕಲು ಕೇಂದ್ರ ಸರಕಾರ ಮುಂದಾಗಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್ ನ ಈ ಹಿಂದಿನ ಎರಡೂ ಆದೇಶದ ಮಾರ್ಪಾಡಿಗಾಗಿ ಕರ್ನಾಟಕ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಇನ್ನು ಅಟಾರ್ನಿ ಜನರಲ್ ಮುಕುಲ್ ರೊಹಟಗಿ ನಿರ್ವಹಣಾ ಮಂಡಳಿ ಅಗತ್ಯವಿಲ್ಲ ಎಂದು ಸುಪ್ರೀಂಗೆ ಮುಚ್ಚಳಿಕೆ ಬರೆಯುವ ಸಾಧ್ಯತೆ ಇದೆ.
ನಿರ್ವಹಣಾ ಮಂಡಳಿ ರಚನೆ ಬಗ್ಗೆ ಕೇರಳ, ಪುದುಚೆರಿ ರಾಜ್ಯಗಳ ಅಭಿಪ್ರಾಯ ಪಡೆದಿಲ್ಲ. ಇನ್ನು ಇದಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ. ಆದ್ದರಿಂದ ರಾಜ್ಯಗಳ ಮಧ್ಯೆ ಇರುವ ಈ ಬಿಕ್ಕಟ್ಟನ್ನು ಕೇಂದ್ರವು ಮಾತುಕತೆ ಮೂಲಕ ಬಗೆಹರಿಸಲು ನಿರ್ಧರಿಸಿದೆ. ಈ ಬಗ್ಗೆ ರೊಹಟಗಿ, ಪ್ರಧಾನಿ ಹಾಗೂ ಸಚಿವೆ ಉಮಾಭಾರತಿ ಜತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.[ಮತ್ತೆ ವಿಶೇಷ ಅಧಿವೇಶನ: ನಿರ್ವಹಣಾ ಮಂಡಳಿ ವಿರೋಧಿಸಿ ನಿರ್ಣಯ?]
ಇನ್ನು ಕೇಂದ್ರ ಸರಕಾರದ ಈ ನಿರ್ಧಾರದಿಂದ ರಾಜ್ಯದ ಬಿಜೆಪಿ ಮುಖಂಡರು ನಿಟ್ಟುಸಿರು ಬಿಡುವಂತಾಗಿದೆ. ಕಾವೇರಿ ನ್ಯಾಯಾಧಿಕರಣ ಮಂಡಳಿಯ ಅಂತಿಮ ತೀರ್ಪಿನ ವಿರುದ್ಧದ ಮೇಲ್ಮನವಿ ಅ.18ರಂದು ವಿಚಾರಣೆಗೆ ಬರುತ್ತದೆ. ಇನ್ನು ಕಾವೇರಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡ ಅಮರಣಾಂತ ಉಪವಾಸ ಕೈಗೊಂಡಿದ್ದರು.
ಈ ವಿಚಾರ ಪ್ರಧಾನಿವರೆಗೆ ತಲುಪಿದ್ದು, ಹಿರಿಯ ಸಚಿವರ ಸಭೆ ನಡೆಸಿದ್ದಾರೆ. ಬಳಿಕ ರಾಜ್ಯದ ನಾಯಕರ ಮೂಲಕ, ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿ, ಸಮಸ್ಯೆ ಬಗೆಹರಿಸುವ ಸಂದೇಶ ರವಾನಿಸಿದ್ದರು. ಆ ನಂತರ ಸ್ವತಃ ನರೇಂದ್ರ ಮೋದಿ ಅವರೇ ದೇವೇಗೌಡರ ಜತೆಗೆ ಮಾತನಾಡಿ, ಕೇಂದ್ರ ಸರಕಾರದ ನಿಲುವು ತಿಳಿಸಿದ್ದರು.[ಸುಪ್ರೀಂ ಆದೇಶದ ವಿರುದ್ಧ ಮಂಡ್ಯದಲ್ಲಿ ಬೊಗಸೆ ಚಳವಳಿ]
ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಕರೆಯುತ್ತೇವೆ. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಉಪವಾಸದಂಥ ನಿರ್ಣಯಕ್ಕೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಆ ಮಾತಿಗೆ ದೇವೇಗೌಡರು ಅಮರಣಾಂತ ಉಪವಾಸದಿಂದ ಹಿಂದೆ ಸರಿದರು ಎಂಬುದು ಸದ್ಯದ ಮಾಹಿತಿ. ಕೇಂದ್ರ ಸರಕಾರವೇ ಇಂಥ ನಿರ್ಧಾರಕ್ಕೆ ಬಂದಿರುವುದರಿಂದ ನಿರ್ವಹಣಾ ಮಂಡಳಿ ರಚನೆಗೆ ತಡೆ ಬೀಳುವ ಭರವಸೆ ಮೂಡಿದೆ.