ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಗೆ ಟಿಎಂಸಿ, ಡಿಎಂಕೆ ಖಂಡನೆ
ಬೆಂಗಳೂರು, ಆಗಸ್ಟ್ 3: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ಮನೆ ಹಾಗೂ ಕಚೇರಿಗಳ ಮೇಲೆ ನಡೆದ ದಾಳಿಯನ್ನು ದೇಶದ ಎರಡು ಪ್ರಮುಖ ಪಕ್ಷಗಳು ಖಂಡಿಸಿವೆ.
ಡಿಕೆ ಶಿವಕುಮಾರ್ ಗುರಿಯಾಗಿಸಿ ನಡೆದ ಆದಾಯ ತೆರಿಗೆ ದಾಳಿಯನ್ನು ಪ್ರತೀಕಾರದ ರಾಜಕೀಯ ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದ್ದರೆ, ಇದೊಂದು 'ಸೆಲೆಕ್ಟಿವ್ (ತಮಗೆ ಬೇಕಾದವರ ಮೇಲಿನ) ದಾಳಿ' ಎಂದು ಡಿಎಂಕೆ ಕಿಡಿಕಾರಿದೆ.

"ಬಿಜೆಪಿ ತನ್ನ ವಿರೋಧಿಗಳ ಮೇಲೆ ಮಾತ್ರ ಭ್ರಷ್ಟಾಚಾರದ ವಿರೋಧಿ ಯುದ್ಧ ಹೂಡುತ್ತಿದೆ. ಎಐಎಡಿಎಂಕೆ ಶಾಸಕರನ್ನು ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ಬಣದವರು ರೆಸಾರ್ಟ್ ನಲ್ಲಿಟ್ಟಿದ್ದಾಗ ಇದೇ ಮೋದಿ ಸರಕಾರ ದಾಳಿ ನಡೆಸಲಿಲ್ಲ. ಕುದುರೆ ವ್ಯಾಪಾರದ ವರದಿಗಳಿದ್ದಾಗಲೂ ಸರಕಾರ ಮೌನವಾಗಿತ್ತು. ಎಐಎಡಿಎಂಕೆ ಎನ್ಡಿಎ ಸೇರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬಿಜೆಪಿ ಇಬ್ಬಗೆ ನೀತಿ ತೋರುತ್ತಿದೆ," ಎಂದು ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್ ಕಿಡಿಕಾರಿದ್ದಾರೆ.
"ಇದೇನು ಹೊಸದಲ್ಲ. ಇದನ್ನು ಈ ಹಿಂದೆಯೂ ನೋಡಿದ್ದೇವೆ. ಬಿಜೆಪಿಗೆ ತನಗೆ ಯಾರಾದರೂ ವಿರೋಧಿಗಳಿದ್ದಾರೆ ಎಂದರೆ ಅವರ ಮೇಲೆ ಸಿಬಿಐ, ಇಡಿ, ಐಟಿ ಎಲ್ಲವನ್ನೂ ಛೂ ಬಿಡುತ್ತದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬಿಜೆಪಿ ದೇಶದಾದ್ಯಂತ 'ಮೋದಿ ರಾಜ್' ಆಳ್ವಿಕೆ ಹೇರಲು ಹೊರಟಿದೆ, ಅದೀಗ 'ಗೂಂಡಾ ರಾಜ್' ಆಗಿ ಬದಲಾಗುತ್ತಿದೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಹರಿಹಾಯ್ದಿದ್ದಾರೆ.












Click it and Unblock the Notifications