ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲಿ ಎಂದ ಒಕ್ಕಲಿಗ ಸ್ವಾಮೀಜಿ: ಡಿ ಕೆ ಶಿವಕುಮಾರ್ ಉತ್ತರ ಹೇಗಿತ್ತು ಗೊತ್ತಾ?
ನವದೆಹಲಿ, ಜೂನ್ 27: ಶೀಘ್ರದಲ್ಲಿಯೇ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆಯೇ? ಅಥವಾ ಸಿಎಂ ಬದಲಾವಣೆಯಾಗಲಿದ್ದಾರಾ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಸಿಎಂ ಸ್ಥಾನವನ್ನ ಬಿಟ್ಟುಕೊಡುವಂತೆ ವೇದಿಕೆಯ ಮೇಲೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿಯವರ ಹೇಳಿಕೆ ಕುರಿತು ಡಿ ಕೆ ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಉತ್ಸಾಹದಲ್ಲಿ ಕೆಲವರು ಹೀಗೆ ಮಾತನಾಡುತ್ತಾರೆ. ರಾಜಕಾರಣದಲ್ಲಿ ಅಭಿಮಾನಪೂರ್ವಕವಾಗಿ ಇಂತಹ ಹೇಳಿಕೆಗಳನ್ನು ಮದ್ಯೆ, ಮಧ್ಯೆ ನೀಡುವುದು ಸಹಜ. ಅವರ ಮಾತಿಗೆ ಹೆಚ್ಚು ಗಮನ ಕೊಡಬಾರದು. ಪಕ್ಷದ ತೀರ್ಮಾನವೇ ಅಂತಿಮ ಎಂದು ತಿಳಿಸಿದರು. ಸಚಿವ ಸ್ಥಾನ ಬಿಡಲು ಸಿದ್ಧ ನನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ" ಎಂಬ ರಾಜಣ್ಣ ಅವರ ಹೇಳಿಕೆ ಕುರಿತು ಮಾತನಾಡಿ, ಅದಕ್ಕೆ ಉತ್ತರ ಕೊಡುತ್ತೇವೆ ಎಂದರು.

ದೆಹಲಿ ಭೇಟಿಯ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಶಿವಕುಮಾರ್, "ಕರ್ನಾಟಕ ರಾಜ್ಯದಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದರು ಹಾಗೂ ರಾಜ್ಯಸಭಾ ಸದಸ್ಯರನ್ನು ಭೇಟಿ ಮಾಡಿ, ನಮ್ಮ ರಾಜ್ಯದಲ್ಲಿ ಬಾಕಿ ಉಳಿದಿರುವ ಕೇಂದ್ರದ ಯೋಜನೆಗಳು, ಅನುದಾನ ಬಾಕಿ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ಹಿತಕ್ಕಾಗಿ ಸಂಸತ್ ಕಲಾಪದಲ್ಲಿ ಹೋರಾಟ ಮಾಡುವಂತೆ ಚರ್ಚೆ ಮಾಡಲಾಗುವುದು" ಎಂದು ತಿಳಿಸಿದರು.
ಇಷ್ಟು ದಿನ ರಾಜಕಾರಣವಾಯಿತು. ಈಗ ರಾಜ್ಯದ ಅಭಿವೃದ್ಧಿಗಾಗಿ, ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಈ ವಿಚಾರವನ್ನು ಸಂಸದರ ಗಮನಕ್ಕೆ ತರಲಾಗುವುದು. ಒಗ್ಗಟ್ಟಿನಿಂದ ರಾಜ್ಯದ ಹಿತಕ್ಕಾಗಿ ದುಡಿಯುತ್ತಾರೆ ಎನ್ನುವ ನಂಬಿಕೆಯಿದೆ ಎಂದರು.
ಕೆಂಪೇಗೌಡರು ಒಕ್ಕಲಿಗರಾದರೂ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ವಿಶ್ವಮಾನ್ಯ ಬೆಂಗಳೂರನ್ನು ಕಟ್ಟಿದ ಅವರು ಎಲ್ಲಾ ಜಾತಿ, ಧರ್ಮಕ್ಕೂ ನಾಡಪ್ರಭುಗಳಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ನಾಡಪ್ರಭುಗಳ ಹೆಸರನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲೆಗಳಲ್ಲಿ ಕೆಂಪೇಗೌಡರ ಬಗ್ಗೆ ಚರ್ಚಾ ಸ್ಪರ್ಧೆ ನಡೆಸಲು ಹಾಗೂ ತಿಳುವಳಿಕೆ ನೀಡಲು ಪ್ರತಿ ತಾಲ್ಲೂಕಿಗೆ ಬಿಬಿಎಂಪಿಯಿಂದ ತಲಾ 1 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಗಳು ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ.
ಸರ್ಕಾರದಿಂದ ಸುಮಾರು 25 ಕ್ಕೂ ಹೆಚ್ಚು ಜಯಂತಿಗಳನ್ನು ಆಚರಿಸಲಾಗುತ್ತದೆ. ಈಗ ನೀಡುತ್ತಿರುವ ಹಣ ಕಡಿಮೆಯಾಗುತ್ತಿದ್ದು ಆದ ಕಾರಣ ನಾಡಪ್ರಭುಗಳ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಪ್ರತಿ ತಾಲ್ಲೂಕು ಮಟ್ಟಕ್ಕೂ ಬಿಬಿಎಂಪಿಯಿಂದ 1 ಲಕ್ಷ ರೂಪಾಯಿ ನೀಡಲು ಸೂಚನೆ ನೀಡಲಾಗಿದೆ.
ನಾಡಪ್ರಭು ಕೆಂಪೇಗೌಡರ ಜಯಂತಿಗೆ ಪ್ರತಿ ಸಮುದಾಯದ ಗುರುಗಳನ್ನು ಆಹ್ವಾನಿಸಿಬೇಕು. ಇವರು ಜಾತಿ- ಧರ್ಮಗಳನ್ನು ಮೀರಿದ ನಾಯಕ. ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಪ್ರತಿ ಆಚಾರ, ವಿಚಾರ ವೃತ್ತಿ, ಸಮಾಜ, ಸಮುದಾಯಗಳನ್ನು ಕಾಪಾಡಿಕೊಂಡು ಬರುತ್ತಿದ್ದವರು ಇವರು.
"ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳುತ್ತಾರೆ. ಅದೇ ರೀತಿ ನಾವು ಮತ್ತು ಮುಂದಿನ ಪೀಳಿಗೆ ಕೆಂಪೇಗೌಡರನ್ನು ಮರೆಯಬಾರದು. ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇರುತ್ತಾರೆ ಎನ್ನುವುದು ಮುಖ್ಯವಲ್ಲ. ಅವರ ಸಾಧನೆ ಹಾಗೂ ಎಷ್ಟು ಜನರ ಬದುಕನ್ನು ಬದಲಾಯಿಸಿದ್ದಾರೆ ಎನ್ನುವುದು ಮುಖ್ಯ. ಇದು ಕೆಂಪೇಗೌಡರ ಜೀವನದಲ್ಲಿ ನಿಜವಾಗಿದೆ."
ಅವರು ಕಟ್ಟಿಸಿದ ನಾಲ್ಕು ಗೋಪುರಗಳನ್ನು ಮೀರಿ ಬೆಂಗಳೂರು ಬೆಳೆಯುತ್ತದೆ ಎನ್ನುವ ಕಲ್ಪನೆಯೂ ಕೆಂಪೇಗೌಡರಿಗೆ ಇರಲಿಲ್ಲ. 1 ಕೋಟಿ 40 ಲಕ್ಷ ಜನರು ರಾಜ್ಯ ರಾಜಧಾನಿಯಲ್ಲಿ ವಾಸವಿದ್ದಾರೆ. ಇಲ್ಲಿನ ಜನರ ಬದುಕು ಹಸನಾಗಬೇಕು. ಬೆಂಗಳೂರಿನ ಸಂಸ್ಕೃತಿಯನ್ನು ಕಾಪಾಡಬೇಕು, ಬೆಂಗಳೂರಿಗೆ ಹೊಸ ದಿಕ್ಕನ್ನು ನೀಡಬೇಕು.












Click it and Unblock the Notifications