ಡಿಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ದೆಹಲಿ ಹೈಕೋರ್ಟ್ನಿಂದ ಇಡಿಗೆ ನೋಟಿಸ್
ನವದೆಹಲಿ, ನ.2: ಮಾಜಿ ಸಚಿವ, ಹಿರಿಯ ಕಾಂಗ್ರೆಸ ಮುಖಂಡ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ನಿಂದ ಜಾರಿ ನಿರ್ದೇಶನಾಲಯ(ಇಡಿ)ಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಮನವಿ ಮೇರೆಗೆ ಸದ್ಯ ದೆಹಲಿ ಹೈಕೋರ್ಟ್ನಿಂದ ಇಡಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 7ರಂದು ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಡಿಕೆ ಶಿವಕುಮಾರ್ ಮಾಡಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಇಡಿ ವಿಚಾರಣೆಗೆ ಹಾಜರಾಗಿದ್ದರು.
ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕಾರ್ಯಾಚರಣೆಗಳ ಬಗ್ಗೆ ನಡೆಯುತ್ತಿರುವ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಡಿಕೆ ಶಿವಕುಮಾರ್ ಮಾತ್ರವಲ್ಲದೆ ಅವರ ಸಹೋದರ ಹಾಗೂ ಸಂಸದ ಡಿಕೆ ಸುರೇಶ್ ಅವರಿಗೂ ಇಡಿ ಸಮನ್ಸ್ ನೀಡಿತ್ತು.
ನವದೆಹಲಿಯ ಜಾರಿ ನಿರ್ದೇಶನಾಲಯದ ಮುಂದೆ ಡಿಕೆಶಿ ಹಾಜರ್
ಸೆಪ್ಟೆಂಬರ್ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷ ಡಿಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ನವದೆಹಲಿಯ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು. ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷವು ಆಯೋಜಿಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದರು. ಈ ವೇಳೆಯಲ್ಲಿಯೇ ಇಡಿ ಸಮನ್ಸ್ ಅನ್ನು ನೀಡಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿತ್ತು. ಆದರೆ ಪದೇ ಪದೇ ಇಡಿ ವಿಚಾರಣೆಗಾಗಿ ಹಾಜರಾಗುವುದು ಕಿರುಕುಳುವೆನಿಸುತ್ತಿದೆ. ಇದು ನನ್ನ ಕಾರ್ಯಗಳನ್ನು ಅಡ್ಡಿಪಡಿಸುತ್ತಿದೆ ಎಂದು ಸ್ವತ: ಡಿಕೆಶಿ ಅವರೇ ಟ್ವೀಟ್ ಮಾಡಿದ್ದರು
ಇಡಿ ಸಮನ್ಸ್ ಜಾರಿ
ಡಿಕೆ ಶಿವಕುಮಾರ್ ಅವರಿಗೆ ಇಡಿ ಇದಕ್ಕೂ ಮೊದಲೇ ಸಮನ್ಸ್ ನೀಡಿತ್ತು. ಏಜೆನ್ಸಿಯ ಮುಂದೆ ಹಾಜರಾಗಲು ಕೇಳಲಾದ ಪ್ರಕರಣದ ಬಗ್ಗೆ ತನಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಶಿವಕುಮಾರ್ ಅವರ ವಿರುದ್ಧ ಸಿಬಿಐ ಅಕ್ರಮ ಆಸ್ತಿ ಹೊಂದಿರುವ ಆರೋಪದ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ನಂತರ ಇಡಿ ಸಮನ್ಸ್ ಜಾರಿ ಮಾಡಿತ್ತು.
ರಾಜಕೀಯ ಕರ್ತವ್ಯಗಳಿಗೆ ಇಡಿ ಅಡ್ಡಿ-ಡಿಕೆಶಿ
ಸೆಪ್ಟೆಂಬರ್ 15ರಂದು ಇಡಿ ಸಮನ್ಸ್ ನೀಡಿದಾಗ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ, "#BharatJodoYatra ಮತ್ತು ಅಸೆಂಬ್ಲಿ ಅಧಿವೇಶನದ ಮಧ್ಯೆ, ಅವರು ಮತ್ತೆ ನನಗೆ ಹಾಜರಾಗಲು ಇಡಿ ಸಮನ್ಸ್ ನೀಡಿದ್ದಾರೆ. ನಾನು ಸಹಕರಿಸಲು ಸಿದ್ಧನಿದ್ದೇನೆ. ಆದರೆ, ಈ ಸಮನ್ಸ್ನ ಸಮಯ ಮತ್ತು ನನಗೆ ನೀಡಲಾದ ಕಿರುಕುಳವು ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುತ್ತಿದೆ," ಎಂದು ಟ್ವೀಟ್ ಮಾಡಿದ್ದರು. ಜಾರಿ ನಿರ್ದೇಶನಾಲಯವು ಈ ಹಿಂದೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 3, 2019 ರಂದು ಮತ್ತೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು. ದೆಹಲಿ ಹೈಕೋರ್ಟ್ ಅದೇ ವರ್ಷ ಅಕ್ಟೋಬರ್ನಲ್ಲಿ ಡಿಕೆಶಿಗೆ ಜಾಮೀನು ನೀಡಿತ್ತು.
'ಸಾಕ್ಷ್ಯಗಳಿಗೆ ಹಾನಿ ಆತಂಕವಿಲ್ಲ'
ಜುಲೈ 30ರಂದು ನಡೆದಿದ್ದ ಜಾಮೀನು ಅರ್ಜಿ ವಿಚಾರಣೆಯ ವೇಳೆ, ಡಿ.ಕೆ.ಶಿವಕುಮಾರ್ ಅವರ ಪರವಾಗಿ ಹಿರಿಯ ವಕೀಲ ದಯಾಕೃಷ್ಣನ್ ವಾದ ಮಾಡಿದ್ದರು. 'ಮಧ್ಯಂತರ ಜಾಮೀನನ್ನು ನಿಯಮಿತ ಜಾಮೀನು ಆಗಿ ಪರಿವರ್ತಿಸಬೇಕು, ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಅವರು ಈಗ ಅಧಿಕಾರದಲ್ಲಿ ಇಲ್ಲ. ಸದ್ಯ ಅವರು ಕೇವಲ ಶಾಸಕ ಮಾತ್ರ. ಸಾಕ್ಷ್ಯಗಳಿಗೆ ಹಾನಿ ಮಾಡುವ ಆತಂಕ ಇಲ್ಲ' ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟಿದ್ದರು