ಗುಜರಾತ್ ಚುನಾವಣೆಗೂ ಮುನ್ನ ಭುಗಿಲೆದ್ದ ಅಸಮಾಧಾನ: ಪ್ರೀತಿಯಿಂದ ಅತೃಪ್ತರ ಮನವೊಲಿಸಲು ಶಾ ಸೂಚನೆ
ಅಹಮದಾಬಾದ್ ನವೆಂಬರ್ 15: ಬಿಜೆಪಿ ಭದ್ರಕೋಟೆಯಾದ ಗುಜರಾತ್ನಲ್ಲಿ ಚುನಾವಣೆ ಕಾವು ರಂಗೇರುತ್ತಿದೆ. ಈ ಬಾರಿ ಶತಾಯಗತಾಯ ಜಯ ಸಾಧಿಸುವ ಕಿಚ್ಚಿನಲ್ಲಿರುವ ಬಿಜೆಪಿಯ ಆಂತರಿಕ ವಲಯದಲ್ಲಿ ಟಿಕೆಟ್ಗಾಗಿ ಬಡಿದಾಟ ಶುರುವಾಗಿದೆ. ಹೀಗಾಗಿ ಅತೃಪ್ತರ ಪ್ರತಿಭಟನೆ ಮತ್ತು ಅವಾಚ್ಯ ಹೇಳಿಕೆಗಳಿಂದ ಬಿಜೆಪಿ ಕಂಗೆಟ್ಟಿದೆ. ಇದು ಮುಂದಿನ ಚುನಾವಣೆಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದ್ದು ನಾಯಕರ ಕಣ್ಣೊರೆಸುವ ಪ್ರಯತ್ನವನ್ನು ಹೈಕಮಾಂಡ್ ಮಾಡುತ್ತಿದೆ. ಜೊತೆಗೆ ಅತೃಪ್ತರ ಮನವೊಲಿಸಲು ಬಿಜೆಪಿ ನೇರಾನೇರ ಚರ್ಚೆ ನಡೆಸಲು ಯೋಜಿಸುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಟಿಕೆಟ್ ಹಂಚಿಕೆ ಬಿಜೆಪಿಗೆ ಬಹುದೊಡ್ಡ ಸವಾಲಾಗಿದೆ. ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರಿಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಮನಸ್ತಾಪಗಳು ಸೃಷ್ಟಿಯಾಗಿವೆ. ತಮ್ಮನ್ನು ಪಕ್ಷ ಕಡೆಗಣಿಸಿದೆ ಎಂದು ಹಲವಾರು ಶಾಸಕರು ಆರೋಪ ಮಾಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗಿದ್ದು ಪಕ್ಷದ ನಿರ್ಧಾರಗಳ ವಿರುದ್ಧ ಹಾಗೂ ಟಿಕೆಟ್ ನಿರಾಕರಿಸಿದ್ದಕ್ಕೆ ಹಲವಾರು ಶಾಸಕರು ಕಳೆದ ದಿನ ಪ್ರತಿಭಟನೆ ನಡೆಸಿದರು. ಹೀಗೆ ಪಕ್ಷಕ್ಕೆ ಸವಾಲಾಗಿರುವ ಅತೃಪ್ತರನ್ನು ಮನವೊಲಿಸಲು ಪಕ್ಷದ ಹಿರಿಯ ನಾಯಕರು ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಚುನಾವಣೆಗೆ ಟಿಕೆಟ್ ನೀಡಿಲ್ಲ ಎಂದು ಟವರ್ ಹತ್ತಿದ ಆಪ್ ನಾಯಕ!
ಅತೃಪ್ತರ ಮನವೊಲಿಕೆಗೆ ಹೈಕಮಾಂಡ್ ಬಿಗ್ ಪ್ಲ್ಯಾನ್
ಬಿಜೆಪಿ ಇದುವರೆಗೆ 182 ಅಭ್ಯರ್ಥಿಗಳ ಪೈಕಿ 178 ಅಭ್ಯರ್ಥಿಗಳನ್ನು ಘೋಷಿಸಿದೆ ಮತ್ತು ಈಗಾಗಲೇ 38 ಶಾಸಕರನ್ನು ಕೈಬಿಟ್ಟಿದೆ. ಹೀಗಾಗಿ ಕೆಲವು ಸ್ಥಾನಗಳ ಟಿಕೆಟ್ಗಾಗಿ ಒತ್ತಾಯಿಸಿ ಗಾಂಧಿನಗರದಲ್ಲಿರುವ ಪಕ್ಷದ ಕೇಂದ್ರ ಕಚೇರಿ ಕಮಲಂನಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಹೀಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಬೇಸರಗೊಂಡ ಅತೃಪ್ತರೊಂದಿಗೆ ಮಾತನಾಡಲು ರಾಜ್ಯ ನಾಯಕರ ತಂಡಕ್ಕೆ ಕೆಲಸ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗುಜರಾತಿನಲ್ಲಿ ಸತತ 27 ವರ್ಷಗಳ ಕಾಲ ಅಧಿಕಾರದಲ್ಲಿರು ಬಿಜೆಪಿ ಮತ್ತೆ ಅಧಿಕಾರ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ದಾರಿಯಲ್ಲಿ ಬರುವ ಅಡೆತಡೆಗಳ ನಿವಾರಣೆಗೆ ಬಿಜೆಪಿ ಹಿರಿಯ ನಾಯಕರು ಮುಂದಾಗಿದ್ದು, ಕಳೆದ ಕೆಲವು ದಿನಗಳಿಂದ ಪರಸ್ಪರ ಕಾಳಜಿ ಹಾಗೂ ಪ್ರೀತಿಯ ಮಾತುಕತೆ ಮೂಲಕ ಅತೃಪ್ತರ ಮನವೊಲಿಸುತ್ತಿದೆ. ಇದರ ಭಾಗವಾಗಿ ರಾಜ್ಯ ಗೃಹ ಸಚಿವ ಹರ್ಷ ಸಂಘವಿ ಕನಿಷ್ಠ ನಾಲ್ವರು ಬಂಡುಕೋರರೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ.
ಮಧುಭಾಯಿ ಶ್ರೀವಾಸ್ತವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ
ಈಗ ಅಮಿತ್ ಶಾ ಅವರು ಗುಜರಾತ್ನಲ್ಲಿದ್ದಾರೆ. ಗುಜರಾತ್ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ. ರಾಜ್ಯದ ಉನ್ನತ ನಾಯಕರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆ ಐದು ಗಂಟೆಗಳ ಕಾಲ ನಡೆಯಿತು ಎಂದು ಮೂಲಗಳು ತಿಳಿಸಿವೆ. ಬಂಡಾಯಗಾರರು ಬಿಜೆಪಿ ಕುಟುಂಬದೊಂದಿಗೆ ಬಹಳ ಹಿಂದಿನಿಂದಲೂ ನಂಟು ಹೊಂದಿದ್ದಾರೆ. ಪ್ರೀತಿ ಮತ್ತು ಸಹಾನುಭೂತಿಯಿಂದ ಅವರೊಂದಿಗೆ ವ್ಯವಹರಿಸಬೇಕು ಎಂದು ಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆಂದು ತಿಳಿದು ಬಂದಿದೆ.
ಆರು ಬಾರಿ ಶಾಸಕರಾದ ಮಧುಭಾಯಿ ಶ್ರೀವಾಸ್ತವ್ ಅವರು ಪಕ್ಷದ ವಿರುದ್ಧ ಕೋಪಗೊಂಡವರಲ್ಲಿ ಒಬ್ಬರು. ನಿನ್ನೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇವರು 20 ವರ್ಷಗಳ ಹಿಂದೆ "ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಒತ್ತಾಯದ ಮೇರೆಗೆ" ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಗುಜರಾತ್ ಚುನಾವಣೆಯಲ್ಲಿ ತ್ರಿಕೋನ ಹೋರಾಟ
ಗುಜರಾತ್ನಲ್ಲಿ ಬಿಜೆಪಿ "ಈ ರೀತಿಯ ಅಸಮಾಧಾನವನ್ನು ಎಂದಿಗೂ ನೋಡಿಲ್ಲ" ಮತ್ತು ಇದನ್ನು "ತಕ್ಷಣ ಬಗೆಹರಿಸಬೇಕು" ಎಂದು ಹೆಸರಿಸದ ಪ್ರಮುಖ ನಾಯಕರೊಬ್ಬರು ಹೇಳಿದ್ದಾರೆ.
ಈ ಬಾರಿಯ ಚುನಾವಣೆ ತ್ರಿಕೋನ ಹೋರಾಟವಾಗಿ ಪರಿಣಮಿಸಿರುವುದರಿಂದ ಪಕ್ಷವು ಯಾವುದೇ ಬಿಕ್ಕಟ್ಟನ್ನು ಎದುರಿಸಲು ಸಿದ್ಧವಿಲ್ಲ. ಕಳೆದ ಬಾರಿ ತನ್ನ ಮತ ಹಂಚಿಕೆ ಮತ್ತು ಸ್ಥಾನಗಳನ್ನು ಹೆಚ್ಚಿಸಿಕೊಂಡ ಕಾಂಗ್ರೆಸ್ ತನ್ನ ಪ್ರಚಾರವನ್ನು ಬಿಜೆಪಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಮಾಡಿದೆ. ಇನ್ನೂ ಆಮ್ ಆದ್ಮಿ ಪಕ್ಷ ಬಿಜೆಪಿಗೆ ಕಠಿಣ ಪೈಪೋಟಿ ನೀಡಲು ಸಿದ್ಧತೆ ನಡೆಸಿದೆ.
ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ (2017) ಬಿಜೆಪಿ 99 ಸ್ಥಾನಗಳನ್ನು ಗೆದ್ದಿತು ಮತ್ತು ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಎಎಪಿ ಕಳೆದ ಬಾರಿ ಸ್ಪರ್ಧಿಸಿರಲಿಲ್ಲ. ಆದರೆ ಮೊದಲ ಪ್ರಯತ್ನದಲ್ಲೇ ದೆಹಲಿ ಮತ್ತು ಪಂಜಾಬ್ನಲ್ಲಿ ಜಯ ಸಾಧಿಸಿದೆ. ಅದರಂತೆ ಗುಜರಾತ್ನಲ್ಲಿಯೂ ಜಯ ಸಾಧಿಸುವ ವಿಶ್ವಾಸವನ್ನು ಹೊಂದಿದೆ.
ಇನ್ನೂ ಹಿಮಾಚಲ ಪ್ರದೇಶದ ಸ್ಥಿತಿ ಹೇಳುವಂತಿಲ್ಲ. ಅಲ್ಲಿ ಬಿಜೆಪಿ ಒಳಜಗಳವನ್ನು ಎದುರಿಸುತ್ತಿದೆ. ಹಿಮಾಚಲದಲ್ಲಿ ನವೆಂಬರ್ 12 ರಂದು ಮತ ಚಲಾಯಿಸಿತು. ಹಿಮಾಚಲದಲ್ಲಿ 68 ಸ್ಥಾನಗಳಲ್ಲಿ ಬಿಜೆಪಿ 21ರಲ್ಲಿ ಬಂಡಾಯಗಾರರನ್ನು ಹೊಂದಿದೆ. ಪ್ರಧಾನಿ ಮೋದಿಯವರು ದೂರವಾಣಿ ಮೂಲಕ ಮಾಡಿದ ಮನವಿಯೂ ಬಂಡುಕೋರರಲ್ಲಿ ಒಬ್ಬರನ್ನೂ ಮನವೊಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು ಡಿಸೆಂಬರ್ 8 ರಂದು ಗುಜರಾತ್ ಮತ್ತು ಹಿಮಾಚಲ ಎರಡೂ ಮತಗಳ ಎಣಿಕೆ ನಡೆಯಲಿದೆ.