ಗಡುವು ಮುಗೀತಾ ಬಂತು, ರಾಜೀನಾಮೆ ನೀಡಿ: ಮೋದಿಗೆ ಮಮತಾ ಚಾಲೆಂಜ್
ಅಪನಗದೀಕರಣ: 50 ದಿನಗಳಲ್ಲಿ ಎಲ್ಲಾ ಸರಿಹೋಗುತ್ತೆ ಎಂದು ಹೇಳಿದ್ದ ಪ್ರಧಾನಿ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಮೋದಿ ರಾಜೀನಾಮೆ ನೀಡಲಿ ಎಂದು ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ನವದೆಹಲಿ, ಡಿ 27: ಅಪನಗದೀಕರಣದಿಂದ ಸಾರ್ವಜನಿಕರಿಗೆ ಆಗಿರುವ ತೊಂದರೆ ಸರಿಪಡಿಸಲು ಐವತ್ತು ದಿನದ ಸಮಯ ಕೇಳಿದ್ರಿ, ಈಗ ಆ ಗಡುವು ಮುಗೀತಾ ಬಂತು. ಆದರೆ ಜನರ ಬವಣೆ ಇನ್ನೂ ತಪ್ಪಿಲ್ಲ ಎಂದು ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೋದಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನೋಟು ಬ್ಯಾನ್ ಮಾಡಿರುವ ನಿರ್ಧಾರಕ್ಕೆ ಇನ್ನೆರಡು ದಿನಗಳಲ್ಲಿ ಐವತ್ತು ದಿನವಾಗುತ್ತಿದೆ. ನೋಟು ಮತ್ತು ಚಿಲ್ಲರೆ ಸಮಸ್ಯೆಯನ್ನು ಐವತ್ತು ದಿನದೊಳಗೆ ಸರಿದಾರಿಗೆ ತರುತ್ತೇನೆಂದು ವಾಗ್ದಾನ ಮಾಡಿದ್ರಿ, ಆದರೆ ಎಲ್ಲೂ ಪರಿಸ್ಥಿತಿ ಸುಧಾರಿಸಿಲ್ಲ. ನೀವು ರಾಜೀನಾಮೆ ನೀಡುವುದೇ ಸೂಕ್ತ ಎಂದು ಪ್ರಧಾನಿ ಮೋದಿಗೆ ಮಮತಾ ಆಗ್ರಹಿಸಿದ್ದಾರೆ. (ಮಂಗಳೂರಿನ ಸಹಕಾರಿ ಬ್ಯಾಂಕಿನ ಮೇಲೆ ಐಟಿ ದಾಳಿ)
ಬುಧವಾರ (ಡಿ 28) ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮಮತಾ, ಅಪನಗದೀಕರಣ ಎನ್ನುವುದು ಸ್ವಾತಂತ್ರ್ಯಾನಂತರ ಭಾರತ ಕಂಡ ಅತ್ಯಂತ ದೊಡ್ಡ ಹಗರಣ. ಬಡವರ ಹಣವನ್ನು ಶ್ರೀಮಂತರು ನುಂಗುವ ಪಾಪದ ಕೆಲಸ ಎಂದು ಮಮತಾ ಕಿಡಿಕಾರಿದ್ದಾರೆ.
ಐವತ್ತು ದಿನದಲ್ಲಿ ಎಲ್ಲಾ ಸರಿಹೋಗುತ್ತೆ ಎಂದು ಪ್ರಧಾನಿ ದೇಶದ ಜನಕ್ಕೆ ಹೇಳಿದ್ದಾರೆ. ಐವತ್ತಲ್ಲಾ, ನೂರು ದಿನವಾದರೂ ನೋಟಿನ ಸಮಸ್ಯೆ ಸರಿಹೋಗುವುದಿಲ್ಲ. ತನ್ನ ಮಾತು ಉಳಿಸಿಕೊಳ್ಳಲು ವಿಫಲರಾಗಿರುವುದರಿಂದ ಮೋದಿ ರಾಜೀನಾಮೆ ನೀಡುತ್ತಾರೆಯೇ ಎಂದು ಮಮತಾ ಪ್ರಶ್ನಿಸಿದ್ದಾರೆ.
ಅಪನಗದೀಕರಣ ಎನ್ನುವುದು ಮೋದಿ ಸರಕಾರಕ್ಕಾದ ಮುಖಭಂಗ, ನೋಟು ನಿಷೇಧಗೊಳಿಸಿ ಪ್ರಧಾನಿ ದೇಶದಲ್ಲಿ ಅನಧಿಕೃತ ಸೂಪರ್ ಎಮರ್ಜೆನ್ಸಿ ಸೃಷ್ಟಿಸಿದ್ದಾರೆಂದು ಮಮತಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಜೊತೆಗಿನ ಅಸಮಾಧಾನದ ಹಿನ್ನಲೆಯಲ್ಲಿ, ಎಡಪಕ್ಷಗಳು, ಎಸ್ಪಿ, ಬಿಎಸ್ಪಿ, ಜೆಡಿಯು, ಎನ್ಸಿಪಿ ಮುಂತಾದ ಪಕ್ಷಗಳು ಐಕ್ಯತೆ ಪ್ರದರ್ಶಿಸದೇ ಇದ್ದದ್ದು ಮಮತಾ ಮತ್ತು ರಾಹುಲ್ ಗಾಂಧಿಗೆ ಗೋಷ್ಠಿಯಲ್ಲಿ ಇರಿಸುಮುರಿಸು ತಂದಿತ್ತು.