ಅಪನಗದೀಕರಣ 2016ರ ಜನವರಿಯಿಂದಲೇ ಆರಂಭ: ಊರ್ಜಿತ್
ಕೇಂದ್ರ ಸರ್ಕಾರವು ಏಕಾಏಕಿ ಅಪನಗದೀಕರಣದ ನಿರ್ಧಾರ ಕೈಗೊಂಡು ಜನರನ್ನು ಪೇಚಿಗೆ ಸಿಲುಕಿಸಿತು ಎಂದು ದೂರುತ್ತಿದ್ದ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ್ದಾರೆ ಊರ್ಜಿತ್ ಪಟೇಲ್.
ನವದೆಹಲಿ, ಜನವರಿ 18: ಕಳೆದ ವರ್ಷಾಂತ್ಯಕ್ಕೆ ಕಾಳಧನಕೋರರನ್ನು ತಲ್ಲಣಗೊಳಿಸಿದ್ದ ಅಪನಗದೀಕರಣದ ನಿರ್ಧಾರ ಕೇಂದ್ರ ಸರ್ಕಾರವು ಏಕಾಏಕಿ ಕೈಗೊಂಡ ನಿರ್ಧಾರವಲ್ಲ. ಕಳೆದ ವರ್ಷ ಜನವರಿಯಿಂದಲೇ ಆ ಬಗೆಗಿನ ಪ್ರಕ್ರಿಯೆ ಜಾರಿಯಲ್ಲಿತ್ತು ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಅಲ್ಲದೆ, ಅಪನಗದೀಕರಣದ ನಂತರ ಉಂಟಾದ ಹೊಸ ನೋಟುಗಳ ಸಮಸ್ಯೆಯನ್ನು ಪರಿಹರಿಸಲು ಸುಮಾರು 9.2 ಲಕ್ಷ ಕೋಟಿ ರು. ಮೌಲ್ಯದ ಹೊಸ ನೋಟಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಅಪನಗದೀಕರಣದ ಬಗ್ಗೆ ಕೂಲಂಕಷ ವಿಚಾರಣೆ ನಡೆಸುತ್ತಿರುವ ಸಂಸತ್ತಿನ ಆರ್ಥಿಕ ಸ್ವಾಯತ್ತ ಸಮಿತಿಯ ಮುಂದೆ ಹಾಜರಾಗಿದ್ದ ಊರ್ಜಿತ್, ಸಮಿತಿಯಲ್ಲಿನ ಅನುಭವಿ ಹಾಗೂ ಹಿರಿಯ ಸಂಸದರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಮನಮೋಹನ್ ಸಿಂಗ್, ಕೇಂದ್ರ ಮಾಜಿ ಸಚಿವರಾದ ದಿಗ್ವಿಜಯ್ ಸಿಂಗ್ ಸೇರಿದಂತೆ ಅನೇಕ ಮುತ್ಸದ್ದಿಗಳಿರುವ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದ ಊರ್ಜಿತ್ ಅವರಿಗೆ ಅನೇಕ ಕ್ಲಿಷ್ಟಕರ ಪ್ರಶ್ನೆಗಳು ಎದುರಾದವು. ಮುತ್ಸದ್ದಿಗಳ ಜತೆಯಲ್ಲಿ ಆರ್ ಬಿಐನ ಮಾಜಿ ಗವರ್ನರ್ ಗಳಾದ ಆರ್. ಗಾಂಧಿ ಹಾಗೂ ಎಸ್ಎಸ್ ಮುದ್ರಾ ಕೂಡಾ ಇದ್ದರು.
ಈ ಸಂದರ್ಭದಲ್ಲಿ, ಅಪನಗದೀಕರಣ ಪ್ರಕ್ರಿಯೆಯು ಕಳೆದ ವರ್ಷ ಜನವರಿಯಲ್ಲೇ ಆರಂಭಗೊಂಡಿತ್ತು ಎಂದು ಊರ್ಜಿತ್ ತಿಳಿಸಿದ್ದಾರಾದರೂ, ಸಮಿತಿಯ ಕೆಲ ಪ್ರಶ್ನೆಗಳಿಗೆ ಅವರು ಸರಿಯಾದ ಉತ್ತರ ನೀಡಲಿಲ್ಲ ಎಂದು ಮೂಲಗಳು ಹೇಳಿವೆ. ಅಪನಗದೀಕರಣದಿಂದ ಎಷ್ಟು ಹಣ ಜಮೆಯಾಗಿದೆ, ಬ್ಯಾಂಕ್ ಗಳಲ್ಲಿ ಎಷ್ಟು ಮೌಲ್ಯದ 500 ರು. ಹಾಗೂ 1000 ರು. ನೋಟುಗಳು ಬಂದಿವೆ, ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿರುವ ಹಳೇ ನೋಟುಗಳ ವಿಲೇವಾರಿಗೆ ಎಷ್ಟು ಖರ್ಚಾಗಲಿದೆ, ಬ್ಯಾಂಕುಗಳು ಎಂದಿನಿಂದ ಸಹಜವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಊರ್ಜಿತ್ ಸರಿಯಾಗಿ ಉತ್ತರಿಸಲಿಲ್ಲ ಎನ್ನಲಾಗಿದೆ.