'ನೋಟು ನಿಷೇಧದಿಂದ ರಾಷ್ಟ್ರೀಯ ದುರಂತಕ್ಕಿಂತ ಹೆಚ್ಚಿನ ತೊಂದರೆ'
ನಾಗ್ಪುರ, ಡಿಸೆಂಬರ್ 13: ಕೇಂದ್ರ ಸರಕಾರದ ನೋಟು ನಿಷೇಧ ನಿರ್ಧಾರ 'ವರ್ಷದ ಅತಿ ದೊಡ್ಡ ಹಗರಣ' ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಇದರಿಂದ ಬಡವರ ಬೆನ್ನು ಮೂಳೆ ಮುರಿದಂತಾಗಿದೆ. ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ಕೂಡ ಈ ಪರಿಯ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಾಗುಪುರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಇದು ಅಸಂಬದ್ಧ ಹಾಗೂ ಆಲೋಚನಾರಹಿತವಾದ ನಡೆ. ಮತ್ತು ಇದನ್ನು ವಿವರಿಸುವುದಕ್ಕೆ ಜಗತ್ತಿನಲ್ಲಿ ಯಾರಿಗೂ ಒಳ್ಳೆ ಪದ ಸಿಗೋದಿಲ್ಲ. ಎಲ್ಲ ಪ್ರಮುಖ ಪತ್ರಿಕೆಗಳು ಹಾಗೂ ಆರ್ಥಿಕ ತಜ್ಞರು ಅಪನಗದೀಕರಣವನ್ನು ಖಂಡಿಸಿದ್ದಾರೆ ಎಂದು ಚಿದಂಬರಂ ಹೇಳಿದರು.[2 ಸಾವಿರ ರುಪಾಯಿ ನೋಟಿನ ಆಯುಷ್ಯ ಕೆಲವೇ ವರ್ಷ: ಗುರುಮೂರ್ತಿ]
ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಕಾರವು ಆರ್ಥಿಕ ತಜ್ಞರನ್ನು ಸಂಪರ್ಕಿಸಿ, ಚರ್ಚಿಸಬೇಕಿತ್ತು. ಬಿಜೆಪಿಯವರೇ ಆದ ಯಶವಂತ್ ಸಿನ್ಹಾ ಅವರ ಬಳಿ ಚರ್ಚಿಸಬಹುದಿತ್ತು. ಮನಮೋಹನ್ ಸಿಂಗ್ ಅವರ ಹತ್ತಿರ ಮಾತನಾಡಬಹುದಿತ್ತು. ಬಜೆಟ್ ನ ಸಿದ್ಧಪಡಿಸಲು ನೂರು ಅಧಿಕಾರಿಗಳು ಜತೆಗಿರುತ್ತಾರೆ, ಈವರೆಗೆ ಆ ವಿಚಾರ ಬಹಿರಂಗವಾಗಿಲ್ಲ. ಇನ್ನು ಇದರಲ್ಲೇನು ರಹಸ್ಯ? ಎಂದು ಚಿದಂಬರಂ ಪ್ರಶ್ನಿಸಿದರು.
ಈಗ ನೋಟು ರದ್ದು ಮಾಡಿದ್ದರಿಂದ ಭ್ರಷ್ಟಾಚಾರ, ಕಪ್ಪು ಹಣ ನಿಂತುಹೋಗುತ್ತಾ? ಇದರಿಂದ ಉದ್ದೇಶ ಪೂರ್ತಿ ಅಗಲೇ ಇಲ್ಲ. ಬಡವರಿಗಷ್ಟೇ ಶಿಕ್ಷೆ ಆಗುತ್ತಿದೆ. ಜನರಿಗೆ ಎಷ್ಟು ದುಡ್ಡು ಪೂರೈಸಬೇಕಾಗುತ್ತದೆ ಎಂಬ ಬಗ್ಗೆ ಏನಾದರೂ ಸರಕಾರದ ಹತ್ತಿರ ಲೆಕ್ಕವಿತ್ತಾ? ಯಾವ ಲೆಕ್ಕಾಚಾರದಲ್ಲಿ ವಾರಕ್ಕೆ ಇಪ್ಪತ್ನಾಲ್ಕು ಸಾವಿರ ಡ್ರಾ ಮಾಡಬಹುದು ಎಂಬ ನಿಯಮ ಮಾಡಿದರು?[ನೋಟು ನಿಷೇಧ: ಬೆಟ್ಟವನ್ನು ಅಗೆದು ಇಲಿಯನ್ನು ಹಿಡಿದರೇ ಮೋದಿ?]
ಅದೂ ಬ್ಯಾಂಕಿನಲ್ಲೇ ಅಗತ್ಯವಾದ ಹಣ ಇಲ್ಲ. 45 ಕೋಟಿ ಜನಕ್ಕೆ ಇದರಿಂದ ತೊಂದರೆಯಾಗಿದೆ. ಅವರಿಗೆ ಪರಿಹಾರ ನೀಡೋರು ಯಾರು? ಜಿಲ್ಲಾ ಕೋ ಅಪರೇಟಿವ್ ಸೆಂಟ್ರಲ್ ಬ್ಯಾಂಕ್ ಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದು ಏಕೆ? ಆ ಕಾರಣಕ್ಕೆ ಬೀಜ ಖರೀದಿಸುವುದಕ್ಕೆ, ಕೂಲಿ ಹಣ ನೀಡುವುದಕ್ಕೆ, ಗೊಬ್ಬರ ಖರೀದಿಗೆ ರೈತರಿಗೆ ತೊಂದರೆಯಾಯಿತು ಎಂದು ಚಿದಂಬರಂ ಆರೋಪಿಸಿದರು.
ಐವತ್ತು ದಿನದೊಳಗೆ ಸಮಸ್ಯೆ ಸರಿಹೋಗುತ್ತದೆ ಅಂತ ಪ್ರಧಾನಿ ಹೇಳಿದ್ದಾರೆ. ಆದರೆ ತಜ್ಞರು ಹೇಳೋ ಪ್ರಕಾರ ಕನಿಷ್ಠ ಮೂರು ತಿಂಗಳು ಸಮಯ ಬೇಕು ಎಂದು ಅವರು ಹೇಳಿದರು.