ನೋಟು ರದ್ದು ದೊಡ್ಡ ಮಟ್ಟದಲ್ಲಿ ಯಶಸ್ಸು: ಅಟಾರ್ನಿ ಜನರಲ್
ಡಿಸೆಂಬರ್ 31ರೊಳಗೆ 10 ಲಕ್ಷ ಕೋಟಿ ರುಪಾಯಿ ಜಮೆಯಾಗುವ ನಿರೀಕ್ಷೆಯಿದೆ. ಜನರು ಡಿಜಿಟಲ್ ಹಣ ವರ್ಗಾವಣೆಯನ್ನು ರೂಢಿಸಿಕೊಳ್ಳಲಿ ಎಂಬುದು ಸಹ ನೋಟು ರದ್ದು ಹಿಂದಿನ ಉದ್ದೇಶದಲ್ಲಿ ಒಂದಾಗಿತ್ತು.
ನವದೆಹಲಿ, ನವೆಂಬರ್ 23: ನೋಟು ಹಿಂಪಡೆಯುವ ನಿರ್ಧಾರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದು ಬುಧವಾರ ಅಟಾರ್ನಿ ಜನರಲ್ (ಎಜಿ) ಸುಪ್ರೀಂ ಕೋರ್ಟ್ ನಲ್ಲಿ ತಿಳಿಸಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಹತ್ತು ಲಕ್ಷ ಕೋಟಿ ರುಪಾಯಿ ಜಮೆಯಾಗುವ ನಿರೀಕ್ಷೆ ಸರಕಾರಕ್ಕೆ ಇದೆ ಎಂದು ಅವರು ಕೋರ್ಟ್ ಗೆ ಹೇಳಿದ್ದಾರೆ.
ನೋಟು ರದ್ದು ನಿರ್ಧಾರದ ವಿರುದ್ಧ ಹೈ ಕೋರ್ಟ್ ನಲ್ಲಿ ಹಾಕಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ವರ್ಗಾವಣೆ ಮಾಡಬೇಕು ಎಂದು ನಿರ್ದೇಶಿಸಲು ಕೋರಲಾಯಿತು. ಇದೇ ವೇಳೆ ಹೈ ಕೋರ್ಟ್ ನ ಮುಂದೆ ವಿಚಾರಣೆಗೆ ಬಂದಿರುವ ಎಲ್ಲ ಅರ್ಜಿಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು.[ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]

ಎಲ್ಲ ಅರ್ಜಿಗಳನ್ನು ಸುಪ್ರೀಂಗೆ ವರ್ಗಾವಣೆ ಮಾಡಲು ಒಪ್ಪಿದ ಕೋರ್ಟ್, ತಡೆಯಾಜ್ಞೆ ನೀಡಲು ನಿರಾಕರಿಸಿತು. ಈ ಬಗ್ಗೆ ಡಿಸೆಂಬರ್ 2ರಂದು ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ನೋಟು ರದ್ದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ ಎಂದ ಎಜಿ, ನಿರ್ಧಾರ ಘೋಷಣೆಯಾದ ಹತ್ತೇ ದಿನದಲ್ಲಿ ಬ್ಯಾಂಕ್ ಗಳಲ್ಲಿ 6 ಲಕ್ಷ ಕೋಟಿ ಜಮೆಯಾಗಿದೆ ಎಂದರು.
ಡಿಸೆಂಬರ್ 31ರೊಳಗೆ 10 ಲಕ್ಷ ಕೋಟಿ ರುಪಾಯಿ ಜಮೆಯಾಗುವ ನಿರೀಕ್ಷೆಯಿದೆ. ಜನರು ಡಿಜಿಟಲ್ ಹಣ ವರ್ಗಾವಣೆಯನ್ನು ರೂಢಿಸಿಕೊಳ್ಳಲಿ ಎಂಬುದು ಸಹ ನೋಟು ರದ್ದು ಹಿಂದಿನ ಉದ್ದೇಶದಲ್ಲಿ ಒಂದಾಗಿತ್ತು. ದೇಶದಲ್ಲಿ ನಗದು ವ್ಯವಹಾರವನ್ನು ಶೇ 8ಕ್ಕೆ ಇಳಿಸುವ ಗುರಿ ಇದೆ. ಜಿಡಿಪಿಯ ಶೇ 4ಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಯಬಾರದು ಎಂಬುದು ಸಾಮಾನ್ಯ ನಿಯಮ. ಸದ್ಯಕ್ಕೆ ಅದು ಶೇ 12ರಷ್ಟಿದೆ ಎಂದು ಎಜಿ ಹೇಳಿದರು.[ಸಮೀಕ್ಷೆ : ಅಪನಗದೀಕರಣದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ]
ಕರೆನ್ಸಿ ನೋಟುಗಳಿಗೆ ಯಾವುದೇ ಅಭಾವವಿಲ್ಲ. ಅದರೆ ಸಾಗಣೆಯಷ್ಟೇ ಸಮಸ್ಯೆಯಾಗಿದೆ. ದೇಶದ ಮೂಲೆಮೂಲೆಗೆ ಹಣ ತಲುಪಿಸುವುದಕ್ಕೆ ಸಮಯ ಹಿಡಿಯುತ್ತಿದೆ. ಕೇಂದ್ರದಿಂದ ಸಮಿತಿ ರಚನೆಯಾಗಿದ್ದು, ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ತಿಳಿಯಲಿದೆ ಎಂದು ಸುಪ್ರೀಂ ಕೋರ್ಟ್ ಗೆ ಅಟಾರ್ನಿ ಜನರಲ್ ತಿಳಿಸಿದರು.












Click it and Unblock the Notifications