ಲಾತೂರಿಗೆ ನೀರುಣಿಸಿದ ಕೇಂದ್ರ ಸರ್ಕಾರ, ಕೇಜ್ರಿವಾಲ್ ಮೆಚ್ಚುಗೆ
ನವದೆಹಲಿ, ಏಪ್ರಿಲ್, 12: ಅದು ಸಂಪೂರ್ಣ ಬರಕ್ಕೆ ತುತ್ತಾದ ಪ್ರದೇಶ. ವ್ಯವಸಾಯಕ್ಕೆ ಇರಲಿ, ಕುಡಿಯಲು ಸಹ ನೀರಿಲ್ಲ. ಅಂಥ ಪ್ರದೇಶಕ್ಕೆ ಕೇಂದ್ರ ಸರ್ಕಾರ ರೈಲಿನ ಮೂಲಕ ನೀರು ಸರಬರಾಜು ಮಾಡಿದೆ. "ನೀರಿನ ರೈಲು" ಕಂಡ ಜನರ ಕಣ್ಣಲ್ಲಿ ಆನಂದಭಾಷ್ಪ.
ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಪೂರ್ವ ಮಹಾರಾಷ್ಟ್ರದ ಮರಾಠಾವಾಡದ ಲಾತೂರ್ ಪ್ರದೇಶಕ್ಕೆ 'ನೀರು ರೈಲು' ಮೂಲಕ ಮೀರಜ್ ನಿಂದ ಸೋಮವಾರ ನೀರು ಪೂರೈಕೆ ಮಾಡಲಾಯಿತು.[ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಾವು ಸಹಾಯ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಲಾತೂರ್ ಗೆ ಸರಕು ಸಾಗಣೆ ರೈಲಿನ 50 ಬೋಗಿಗಳಲ್ಲಿ ನೀರು ಪೂರೈಕೆ ಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ಲಾತೂರ್ ನೀರು ಪೂರೈಕೆಗೆ ನಾವು ಪ್ರತಿ ದಿನ 10 ಲಕ್ಷ ಲೀಟರ್ ನೀರು ಪೂರೈಕೆ ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ. ನೀರು ರವಾನೆಗೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದರೆ ಸಾಕು ಎಂದು ಮನವಿ ಮಾಡಿಕೊಂಡಿದ್ದಾರೆ.[ಕ್ರಿಕೆಟ್ಗಿಂತ ಜನರೇ ಮುಖ್ಯ ಎಂದ ಮುಂಬೈ ಹೈ ಕೋರ್ಟ್]
ದೆಹಲಿಯಲ್ಲೂ ನೀರಿನ ಸಮಸ್ಯೆಯಿದೆ. ಆದರೆ, ಲಾತೂರ್ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡರೆ ನಮ್ಮ ಸಂಕಷ್ಟ ಏನೂ ಅಲ್ಲ. ಅಲ್ಲಿನ ಜನರಿಗೂ ನಾವು ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.