ಪ್ರೇಯಸಿಯ ಕೊಲೆ ಮಾಡಲು ಅಮೆರಿಕದ ಕ್ರೈಂ ಶೋ ಸ್ಫೂರ್ತಿ ಪಡೆದಿದ್ದ ಆರೋಪಿ
ನವದೆಹಲಿ, ನ.15: ದೆಹಲಿ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಯ ಕೃತ್ಯ ಎಂಥವರನ್ನು ನಡುಗಿಸುವಂಥದ್ದು. ಈ ಆರೋಪಿಗೆ ಕೊಲೆ ಮಾಡಲು ಅಮೆರಿಕದ ಕ್ರೈಂ ಶೋ ಒಂದು ಪ್ರೇರಣೆಯಾಗಿದೆ ಎಂಬುದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.
28 ವರ್ಷದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ 26 ವರ್ಷದ ಲಿವ್-ಇನ್ ಸಂಗಾತಿಯಾಗಿದ್ದ ಶ್ರದ್ಧಾ ವಾಲ್ಕರ್ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಕಾಲ ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಚ್ಚಿಬಿದ್ದ ದೆಹಲಿ: ಪ್ರೇಯಸಿಯನ್ನೇ ಕೊಂದು, 18 ದಿನ ದೇಹದ ಭಾಗಗಳನ್ನು ಎಸೆದ ಆರೋಪಿ
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆತನ ಒಂದೊಂದೆ ಲಕ್ಷಣಗಳು ಹೊರ ಬರುತ್ತಿವೆ. ಕೊಲೆ ಮಾಡಲು ಆತ ನರಹತ್ಯೆಯ ಕಥೆ ಹೇಳುವ ಅಮೆರಿಕದ ಕ್ರೈಂ ಶೋ ಡೆಕ್ಸ್ಟರ್ನಿಂದ ಸ್ಪೂರ್ತಿ ಪಡೆದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮದುವೆಯಾಗುವಂತೆ ಒತ್ತಾಯಿಸಿದ್ದ ಕಾರಣ ಕೊಲೆ!
ಮೇ 18 ರಂದು ಪೂನಾವಾಲಾ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ್ದಾರೆ. ವಿಚಾರಣೆ ವೇಳೆ ಆಕೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾಣ್ ಹೇಳಿದ್ದಾರೆ.
ಜೊತೆಗೆ ಕೊಲೆ ಆರೋಪಿ ಶ್ರದ್ಧಾರನ್ನು ಹತ್ಯೆ ಮಾಡಲು ನರಹತ್ಯೆಯ ಕಥೆ ಹೇಳುವ ಅಮೆರಿಕದ ಕ್ರೈಂ ಶೋ 'ಡೆಕ್ಸ್ಟರ್' ನಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಮುಂಬೈ ಬಿಟ್ಟು ದೆಹಲಿಗೆ ಶಿಫ್ಟ್
2019ರಲ್ಲಿ ಡೇಟಿಂಗ್ ಆಪ್ ಒಂದರ ಮೂಲಕ ಪರಿಚಯವಾಗಿದ್ದ ಇಬ್ಬರು ಮುಂಬೈನ ಡೆಕಾಥ್ಲಾನ್ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. 2019 ರ ಅಂತ್ಯದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಇವರ ಸಂಬಂಧಕ್ಕೆ ಎರಡೂ ಕುಟುಂಬಗಳ ವಿರೋಧವಿತ್ತು. ಬಳಿಕ ಇಬ್ಬರು ಮುಂಬೈನ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವರ್ಷದ ಮಾರ್ಚ್-ಏಪ್ರಿಲ್ನಲ್ಲಿ ಇಬ್ಬರು ಹಿಮಾಚಲ ಪ್ರದೇಶ, ಉತ್ತರಾಖಂಡಗೆ ಪ್ರವಾಸಕ್ಕೆ ತೆರಳಿ ಮೇ ತಿಂಗಳಲ್ಲಿ ದೆಹಲಿಗೆ ಬಂದಿದ್ದರು. ಬಳಿಕ ಮೇ 15 ರಂದು ಇಬ್ಬರು ದಕ್ಷಿಣ ದೆಹಲಿಯ ಛತ್ತರ್ಪುರ ಪಹಾಡಿಯ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆ ಮನೆಯಲ್ಲಿದ್ದರು.
ಕೊಲೆ ಮಾಡಿ ತಪ್ಪಿಸಿಕೊಳ್ಳುವುದು ಹೇಗೆ ಎಂದು ಗೂಗಲ್ನಲ್ಲಿ ಸರ್ಚ್
ಶ್ರದ್ಧಾ ವಾಲ್ಕರ್ರನ್ನು ಕೊಂದ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಆರೋಪಿ, ಅದನ್ನು ಇರಿಸಲು ಹೊಸ ಫ್ರಿಡ್ಜ್ ಖರೀದಿಸಿದ್ದನು. ನಂತರ ಒಂದೊಂದೆ ತುಂಡುಗಳನ್ನು ಎಸೆಯಲು ಪ್ರತಿದಿನ ಮೆಹ್ರೌಲಿ ಅರಣ್ಯಕ್ಕೆ ತೆರಳಿದ್ದಾನೆ.
ಇದರ ಜೊತೆಗೆ ಅಪಾರ್ಟ್ಮೆಂಟ್ನಲ್ಲಿ ದುರ್ವಾಸನೆ ಬರದೆ ಇರದಂತೆ ತಡೆಯಲು ಅಗರಬತ್ತಿಗಳನ್ನು ಹಚ್ಚುತ್ತಿದ್ದರು ಎಂದು ಮಾಹಿತಿ ದೊರೆತಿದೆ. ಇನ್ನು, ಕೊಲೆ ಮಾಡಿ ತಪ್ಪಿಸಿಕೊಳ್ಳೂವುದು ಹೇಗೆ, ರಕ್ತದ ಕಲೆ ಕಾಣದಂತೆ ಮಾಡುವುದು ಹೇಗೆ, ಪೊಲೀಸರಿಂದ ತಪ್ಪಿಸಿಕೊಳ್ಳುವುದೆ ಹೇಗೆ ಎಂಬೆಲ್ಲಾ ಮಾಹಿತಿಯನ್ನು ಗೂಗಲ್ನಲ್ಲಿ ಸಚ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಐದು ತಿಂಗಳ ಹಿಂದೆ ಮಾಡಿದ್ದ ಕೊಲೆ ಈಗ ಬೆಳಕಿಗೆ
ಶ್ರದ್ಧಾ ತನ್ನ ಕುಟುಂಬದವರ ಜೊತೆಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡಿದ್ದರು. ಅವರ ಕರೆಗೂ ಉತ್ತರಿಸುತ್ತಿರಲಿಲ್ಲ. ಹೀಗಾಗಿ ಮಗಳನ್ನು ನೋಡಲು ತಂದೆ ದೆಹಲಿಗೆ ಬಂದಿದ್ದರು. ಮಗಳು ಕಾಣದ ಕಾರಣ ಅಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು.
ಪೊಲಿಸರು ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಐದು ತಿಂಗಳ ಹಿಂದೆ, ಮೇ 18 ರಂದು ಕೊಲೆಯಾಗಿರುವ ಸಂಗತಿ ಹೊರಬಿದ್ದಿದೆ. ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಕೊಲೆ ಮಾಡಿರುವುದಾಗಿ ಪೂನಾವಾಲಾ ಒಪ್ಪಿಕೊಂಡಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇನ್ನು, ಪ್ರಕರಣದ ಬಗ್ಗೆ ನ್ಯಾಯಯುತ ಮತ್ತು ಆದಷ್ಟು ಬೇಗ ತನಿಖೆ ನಡೆಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ.