ಲೋಕಪಾಲ್: ಧೃತಿಗೆಡುವುದು ಬೇಡ, ಬಿಜೆಪಿ ಬೆಂಬಲಿಸುತ್ತೆ
ಅಸಲಿಗೆ ಜನ ಲೋಕಪಾಲ್ ವಿಧೇಯಕದ ಬಗ್ಗೆ ಒಂದೇ ಸಮನೆ ಬೊಬ್ಬೆ ಹಾಕುತ್ತಿರುವ ಕೇಜ್ರಿವಾಲಾ, ಪ್ರತಿಪಕ್ಷವಾದ ನಮಗಿನ್ನೂ ಅದರ ಪ್ರತಿಯನ್ನೇ ಕಳುಹಿಸಿಲ್ಲ. ಜನ ಲೋಕಪಾಲ್ ವಿಧೇಯಕ ಜಾರಿಯಾಗಬೇಕು ಎಂಬುದು ಬಿಜೆಪಿಯ ಆಶಯವೂ ಆಗಿದೆ. ಹಾಗಾಗಿ ಸರಕಾರ ಅಲ್ಪಮತಕ್ಕೆ ಕುಸಿದಿದೆ. ರಾಜ್ಯಪಾಲರು ವಿಧೇಯಕಕ್ಕೆ ಸಮ್ಮತಿ ಸೂಚಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಕೇಜ್ರಿವಾಲಾ ಧೃತಿಗೆಡುವುದು ಬೇಡ. ನೀವು ಮಂಡಿಸಿ, ನಾವು ಬೆಂಬಲಿಸಿ ಅದಕ್ಕೆ ಅನುಮೋದನೆ ನೀಡುತ್ತೇವೆ' ಎಂದು ದಿಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದ ಹರ್ಷವರ್ಧನ ಅವರು ಖಡಕ್ಕಾಗಿ ಸವಾಲೆಸೆದಿದ್ದಾರೆ.
ಡಾ. ಹರ್ಷವರ್ಧನ ಅವರು ಎರಡನೆಯ ಬಾರಿಗೆ ಹೀಗೆ ದಿಟ್ಟತನ ತೋರಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ, ತಮ್ಮ ಪಕ್ಷಕ್ಕೆ ಅಲ್ಪಾಂತರದಲ್ಲಿ ಸರಳ ಬಹುಮತ ತಪ್ಪಿದಾಗ ಸರಕಾರ ರಚಿಸುವ ಉಮೇದಿ ನಮಗಿಲ್ಲ. ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ' ಎಂದು ತಮ್ಮ ಪಕ್ಷ ಹೇಳುವ ಮೊದಲೇ ವೈಯಕ್ತಿಕವಾಗಿ ಡಾ. ಹರ್ಷವರ್ಧನ ಹೇಳಿದರು.
ಇದೀಗ ಲೋಕಪಾಲ್ ವಿಧೇಯಕ ಜಾರಿಗೊಳಿಸಲು ಇಲ್ಲಸಲ್ಲದ ನೆಪ ಹೇಳಿ ಕೇಜ್ರಿವಾಲಾ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ, ರಾಜೀನಾಮೆ ನೀಡುವ ಮಾತನ್ನಾಡಿದ್ದಾರೆ. ಆದರೆ ಅದರ ಜರೂರತ್ತು ಇಲ್ಲ. ನಾವು ಆಪ್ ಸರಕಾರಕ್ಕೆ ಸಪೋರ್ಟ್ ಮಾಡುತ್ತೇವೆ. ನೀವು ವಿಧೇಯಕ ಮಂಡಿಸಿ ಎಂದು ಡಾ. ಹರ್ಷವರ್ಧನ ಹೇಳಿದ್ದಾರೆ.
ಲೋಕಪಾಲ್ ವಿಧೇಯಕ ಜಾರಿಗೆ ಸಾಥ್ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮೇಲೆ ಗೂಬೆ ಕೂರಿಸಿ, ರಾಜೀನಾಮೆ ಲೋಕಸಭಾ ಚುನಾವಣೆಯತ್ತ ಮುಖ ಮಾಡುವುದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾರ ಆಶಯವಾಗಿದೆ. ಸ್ವತಃ ಕೇಜ್ರಿವಾಲಾರೇ ತಾವು ಲೋಕಸಭಾ ಚುನಾವಣೆ ಸ್ಪರ್ಧೆಗೆ ಸಿದ್ಧ ಎಂದೂ ಘೋಷಿಸಿದ್ದಾರೆ.
ಆದರೆ ಒಂದೊಮ್ಮೆ ಈಗ ಲೋಕಪಾಲ್ ವಿಧೇಯಕ ಮಂಡನೆಯಾಗಿ ಅದಕ್ಕೆ ವಿಧಾನಸಭೆ ಅಂಕಿತ ಹಾಕಿದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲಾರ ಸರಕಾರ ಚಾಲ್ತಿಯಲ್ಲಿರುತ್ತದೆ. ಅದರೊಂದಿಗೆ ಮತ್ತೆ ಜನರ ಮುಂದೆ ಅನುಕಂಪ ಗಳಿಸಲು ಕೇಜ್ರಿವಾಲಾಗೆ ಅವಕಾಶ ಇಲ್ಲವಾಗುತ್ತದೆ ಎಂಬುದು ಬಿಜೆಪಿ ಎಣಿಕೆಯಾಗಿದೆ.