Delhi Exit Poll Results 2025: ಪೋಲ್ ಡೈರಿ ಪ್ರಕಾರ ದೆಹಲಿಯಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಇಂದು ಏಕಕಾಲದಲ್ಲಿ ಚುನಾವಣೆ ನಡೆದಿದೆ. ರಾಷ್ಟ್ರ ರಾಜಧಾನಿಯ ಸುಮಾರು 1.55 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ದೆಹಲಿಯ ರಾಜಕೀಯ ಭವಿಷ್ಯ ನಿರ್ಧರಿಸಲು ಮತದಾನದಲ್ಲಿ ಭಾಗಿಯಾಗಿದ್ದಾರೆ. ಫೆಬ್ರವರಿ 8ರಂದು ಶನಿವಾರ ಫಲಿತಾಂಶ ಹೊರಬೀಳಲಿದೆ. ಇದಕ್ಕೂ ಮುನ್ನ ಇಂದೇ ಚುನಾವಣೋತ್ತರ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಫಲಿತಾಂಶ ಪ್ರಕಟಿಸಿವೆ. ಪೋಲ್ ಡೈರಿ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ.
ಪೋಲ್ ಡೈರಿ ಸಮೀಕ್ಷೆ ಪ್ರಕಾರ ದೆಹಲಿಯ 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ (ಆಮ್) 18ರಿಂದ 25 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ ಬರೋಬ್ಬರಿ 42ರಿಂದ 50 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಲಿದೆ. ಬಿಜೆಪಿಗೆ ಪೂರ್ಣ ಬಹುಮತ ಸಿಗುವ ಲಕ್ಷಣಗಳಿದ್ದು, ಇನ್ನು ಕಾಂಗ್ರೆಸ್ ಪಕ್ಷಕ್ಕೆ 2 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಇಂದು ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಇದೆ ಎನ್ನಲಾಗಿದೆ. ಮತ್ತೊಂದೆಡೆ ಆಪ್ ಎರಡನೇ ಬಾರಿ ಅಧಿಕಾರಕ್ಕೇರುವ ಉತ್ಸಾಹದಲ್ಲಿದ್ದು, ಇದಕ್ಕೆ ಪೂರಕವಾದ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿಲ್ಲ. ಹಲವು ಸಂಸ್ಥೆಗಳು ಪ್ರಕಟಿಸಿರುವ ಎಕ್ಸಿಟ್ ಪೋಲ್ನಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ದೆಹಲಿಯನ್ನೂ ಈ ಬಾರಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂಬ ಸುಳಿವು ಕೊಟ್ಟಿವೆ. ಆದರೆ ಫೆಬ್ರವರಿ 8ರಂದು ಅಂತಿಮ ಫಲಿತಾಂಶ ದೆಹಲಿಯ ಭವಿಷ್ಯ ನಿರ್ಧರಿಸಲಿದೆ.
ಬಿಜೆಪಿ ಕಳೆದ 10 ವರ್ಷಗಳಿಂದ ಆಪ್ನ ಭ್ರಷ್ಟತನ ಮುಖವನ್ನು ಬಹಿರಂಗಪಡಿಸುತ್ತಿದೆ. ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ದೆಹಲಿಯ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಸಾರ್ವಜನಿಕರು ಅರ್ಥಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ. ಎಎಪಿ ಈಗ ಚುನಾವಣೆಯಲ್ಲಿ ಸೋಲಲಿದೆ ಎಂದು ಎಕ್ಸಿಟ್ ಪೋಲ್ ಬಗ್ಗೆ ಬಿಜೆಪಿ ಸಂಸದ ಹರ್ಷ್ ಮಲ್ಹೋತ್ರಾ ಪ್ರತಿಕ್ರಿಯಿಸಿದ್ದಾರೆ.

ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ದೆಹಲಿ ಜನರಿಗೆ ನಾನು ಅಭಿನಂದಿಸುತ್ತೇನೆ. ದೆಹಲಿಯ ಜನರು ಇಂದು ಬಿಜೆಪಿಗೆ ತುಂಬಾ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಾರೆ. ದೆಹಲಿಯಲ್ಲಿ ಯಾರಾದರೂ ನಕಲಿ ಮತದಾನ ಮಾಡಿದರೆ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯ ಕುರಿತು ಮಾತನಾಡಿದ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್, "ನನ್ನ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಮತಗಟ್ಟೆಗಳಲ್ಲಿ ಸರತಿ ಸಾಲುಗಳಿವೆ. ದೆಹಲಿಯಲ್ಲಿ ಶೇ 60ರಷ್ಟು ಮತದಾನದ ಪ್ರಮಾಣವನ್ನು ನಾವು ದಾಟುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.
ಎಎಪಿ ನಾಯಕ ಸುಶೀಲ್ ಗುಪ್ತಾ ಪ್ರತಿಕ್ರಿಯಿಸಿ, ಇದು ನಮ್ಮ ನಾಲ್ಕನೇ ಚುನಾವಣೆ. ಪ್ರತಿ ಬಾರಿ ಎಕ್ಸಿಟ್ ಪೋಲ್ಗಳು ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ಮಾಡುತ್ತಿದೆ ಎಂದು ತೋರಿಸಲಿಲ್ಲ. ಅರವಿಂದ್ ಕೇಜ್ರಿವಾಲ್ ದೆಹಲಿಯ ಜನರಿಗಾಗಿ ಕೆಲಸ ಮಾಡಿದ್ದಾರೆ. ನಾವು ಆಮ್ ಆದ್ಮಿ ಪಕ್ಷದ ಪರವಾಗಿ ಫಲಿತಾಂಶಗಳನ್ನು ನೋಡುತ್ತಿದ್ದೇವೆ. ನಾವು ಖಂಡಿತವಾಗಿಯೂ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications