ದೆಹಲಿ ಮದ್ಯ ಪ್ರಕರಣ; ಸಿಬಿಐ ಕಚೇರಿಗೆ ಹಾಜರಾಗಲಿರುವ ಮನೀಶ್ ಸಿಸೋಡಿಯಾ
ನವದೆಹಲಿ, ಅ.17: ರಾಷ್ಟ್ರ ರಾಜಧಾನಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದೆ ಹಾಜರಾಗಲಿದ್ದಾರೆ.
ವಿಚಾರಣೆಗಾಗಿ ತನಿಖಾ ಸಂಸ್ಥೆ ಮನೀಶ್ ಸಿಸೋಡಿಯಾ ಅವರಿಗೆ ಸಮನ್ಸ್ ನೀಡಿದ್ದು, ಸೋಮವಾರ ಬೆಳಗ್ಗೆ 11 ಗಂಟೆಗೆ ದೆಹಲಿಯ ಸಿಬಿಐ ಪ್ರಧಾನ ಕಚೇರಿಗೆ ಹಾಜರಾಗುವಂತೆ ಹೇಳಿದೆ.
ದೆಹಲಿ ಮದ್ಯ ನೀತಿ ಪ್ರಕರಣ: ಹೈದರಾಬಾದ್ ಉದ್ಯಮಿ ಅಭಿಷೇಕ್ ಬೋನಿಪಲ್ಲಿ ಬಂಧನ
ಇನ್ನು, ಮನೀಶ್ ಸಿಸೋಡಿಯಾ ಅವರ ಬೆಂಬಲಿಗರಿಂದ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ಅವರ ನಿವಾಸದ ಸುತ್ತಲೂ ಸೆಕ್ಷನ್ 144 ವಿಧಿಸಲಾಗಿದೆ.
ಸಮನ್ಸ್ ಬಳಿಕ ದೆಹಲಿಯಲ್ಲಿ ರಾಜಕೀಯ ಬೆಳವಣಿಗೆ ತೀವ್ರವಾಗಿದೆ. ರಾಜಕೀಯ ನಾಯಕರು ತನಿಖೆಯನ್ನು ರಾಜೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಆಪ್ ಮುಖಂಡರು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದಿದ್ದಾರೆ.
ಸಿಬಿಐ ಸಮನ್ಸ್ ನೀಡಿದೆ, ವಿಚಾರಣೆಗೆ ಹೋಗುತ್ತೇನೆ!
"14 ಗಂಟೆಗಳ ಕಾಲ ನನ್ನ ಮನೆಯಲ್ಲಿ ಸಿಬಿಐ ದಾಳಿ ನಡೆಸಿ, ಶೋಧ ಕಾರ್ಯ ಮಾಡಿದೆ. ಆದರೆ, ಏನೂ ಹೊರಬರಲಿಲ್ಲ, ನನ್ನ ಬ್ಯಾಂಕ್ ಲಾಕರ್ನಲ್ಲಿ ಹುಡುಕಲಾಯಿತು, ಅದರಲ್ಲಿಯೂ ಏನೂ ಹೊರಬಂದಿಲ್ಲ. ಅವರಿಗೆ ನನ್ನ ಗ್ರಾಮದಲ್ಲಿಯೂ ಏನೂ ಸಿಗಲಿಲ್ಲ. ಈಗ ಅವರು ನನ್ನನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಗೆ ಕರೆದಿದ್ದಾರೆ. ಹೋಗಿ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ. ಸತ್ಯಮೇವ ಜಯತೆ'' ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ ಬಲ್ಜಿತ್ ನಗರದಲ್ಲಿ ನಡೆದ ಕೊಲೆ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಸಿಸೋಡಿಯಾ ಅವರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಅರಿತುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಗುಜರಾತ್ ಪ್ರಚಾರಕ್ಕೆ ಹೋಗದಂತೆ ತಡೆಯುವ ಉದ್ದೇಶ!
"ನನ್ನ ವಿರುದ್ಧ ಸಂಪೂರ್ಣ ನಕಲಿ ಕೇಸ್ ಹಾಕಿ ಬಂಧಿಸಲು ತಯಾರಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಚುನಾವಣಾ ಪ್ರಚಾರಕ್ಕಾಗಿ ಗುಜರಾತ್ಗೆ ಹೋಗಬೇಕಿತ್ತು. ಈ ಜನರು ಗುಜರಾತ್ ಅನ್ನು ಹೀನಾಯವಾಗಿ ಕಳೆದುಕೊಳ್ಳುತ್ತಿದ್ದಾರೆ. ನಾನು ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯುವುದು ಅವರ ಉದ್ದೇಶವಾಗಿದೆ" ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ತನ್ನ ಉಪ ಮುಖ್ಯಮಂತ್ರಿಗೆ ಅರವಿಂದ್ ಕೇಜ್ರಿವಾಲ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸಿಸೋಡಿಯಾ ಬಂಧನವಾಗಲಿದೆ; ಎಎಪಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಉಪಮುಖ್ಯಮಂತ್ರಿ ಮತ್ತು ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರನ್ನು ಭಗತ್ ಸಿಂಗ್ಗೆ ಹೋಲಿಸಿದ್ದಾರೆ. ಜೊತೆಗೆ ಕೇಂದ್ರದೊಂದಿಗಿನ ಎಎಪಿ ಸರ್ಕಾರದ ಹೋರಾಟವನ್ನು "ಎರಡನೇ ಸ್ವಾತಂತ್ರ್ಯ ಹೋರಾಟ" ಎಂದು ಕರೆದಿದ್ದಾರೆ.
ಮನೀಶ್ ಸಿಸೋಡಿಯಾ ಅವರನ್ನು ಸೋಮವಾರ ಬಂಧಿಸಲಾಗುವುದು ಎಂದು ಎಎಪಿ ಹೇಳಿಕೊಂಡಿದೆ. ಗುಜರಾತ್ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅಲ್ಲಿ ಎಎಪಿಗೆ ಬಿಜೆಪಿಯೊಂದಿಗೆ ನೇರ ಸ್ಪರ್ಧೆ ಇದೆ ಎಂದು ಆರೋಪಿಸಿದೆ.
"ಜೈಲು ಕಂಬಿ, ನೇಣು ಕುಣಿಕೆಗಳು ಭಗತ್ ಸಿಂಗ್ ಅವರ ದೃಢ ಸಂಕಲ್ಪವನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ಸ್ವಾತಂತ್ರ್ಯಕ್ಕಾಗಿ ಎರಡನೇ ಹೋರಾಟ. ಮನೀಶ್ ಮತ್ತು ಸತ್ಯೇಂದ್ರ ಇಂದಿನ ಭಗತ್ ಸಿಂಗ್. 75 ವರ್ಷಗಳ ನಂತರ ಬಡವರಿಗೆ ಉತ್ತಮ ಶಿಕ್ಷಣ ನೀಡಿ, ಉಜ್ವಲ ಭವಿಷ್ಯದ ಭರವಸೆ ಮೂಡಿಸಿದ ಶಿಕ್ಷಣ ಮಂತ್ರಿ ದೇಶಕ್ಕೆ ಸಿಕ್ಕಿದ್ದಾರೆ. ಕೋಟಿಗಟ್ಟಲೆ ಬಡವರ ಪ್ರಾರ್ಥನೆ ನಿಮ್ಮೊಂದಿಗಿದೆ" ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ಎಫ್ಐಆರ್
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡೋ ಸ್ಪಿರಿಟ್ಸ್ ಮಾಲೀಕ ಸಮೀರ್ ಮಹೇಂದ್ರು, ಗುರುಗ್ರಾಮ್ನ ಬಡ್ಡಿ ರಿಟೇಲ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಅಮಿತ್ ಅರೋರಾ ಸೇರಿದಂತೆ ಹಲವರನ್ನು ಸಿಬಿಐ ಇದುವರೆಗೆ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎಪಿ ಕಾರ್ಯಕರ್ತ ಮತ್ತು ಓನ್ಲಿ ಮಚ್ ಲೌಡರ್ ಎಂಬ ಮನರಂಜನಾ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಮಾಜಿ ಸಿಇಒ ವಿಜಯ್ ನಾಯರ್ ಮತ್ತು ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಬೋನಿಪಲ್ಲಿ ಅವರನ್ನು ಏಜೆನ್ಸಿ ಬಂಧಿಸಿದೆ.
ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ಆಗಸ್ಟ್ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ, ಭಾರತೀಯ ದಂಡ ಸಂಹಿತೆ (IPC), 120B (ಕ್ರಿಮಿನಲ್ ಪಿತೂರಿ) ಮತ್ತು 477A (ದಾಖಲೆಗಳ ಸುಳ್ಳುಗೊಳಿಸುವಿಕೆ), ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7 ಸೇರಿದಂತೆ, ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ ಅಥವಾ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರಲು ಅನಗತ್ಯ ಲಾಭವನ್ನು ಪಡೆಯುವ ಪಡೆಯುವ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.