ಬಿಗಿ ಭದ್ರತೆಯಲ್ಲಿ ಕನ್ಹಯ್ಯಾ ಕುಮಾರ್ ಬಿಡುಗಡೆ
ನವದೆಹಲಿ, ಮಾರ್ಚ್, 03: ದೇಶದ್ರೋಹದ ಆರೋಪದ ಮೇಲೆ ಜೈಲು ಸೇರಿದ್ದ ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ನನ್ನು ಗುರುವಾರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಬುಧವಾರ ಕನ್ಹಯ್ಯಾ ಕುಮಾರ್ ಗೆ ದೆಹಲಿ ಹೈಕೋರ್ಟ್ ಆರು ತಿಂಗಳ ಕಾಲ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿತ್ತು..ಅಲ್ಲದೇ 10 ಸಾವಿರ ರು. ಬಾಂಡ್ ನೀಡುವಂತೆ ತಿಳಿಸಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕನ್ಹಯ್ಯಾ ಕುಮಾರ್ ನನ್ನು ಗುರುವಾರ ಭಾರೀ ಭದ್ರತೆಯಲ್ಲಿ ಬಿಡುಗಡೆ ಮಾಡಲಾಗಿದೆ. [ಕನ್ಹಯ್ಯಾ ಕುಮಾರ್ ಘೋಷಣೆ ಕೂಗಿದ 2 ವಿಡಿಯೋ ನಕಲಿ!]

ಮೊದಲು ಕನ್ಹಯ್ಯಾ ಕುಮಾರ್ ಗೆ ಜಾಮೀನು ನೀಡಲು ದೆಹಲಿ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು. ನಮ್ಮ ಬಳಿ ದೇಶದ್ರೋಹದ ಘೋಷಣೆ ಕೂಗಿದ ದಾಖಲೆಗಳಿವೆ ಎಂದು ಹೇಳಿದ್ದರು. ಆದರೆ ದೆಹಲಿ ಸರ್ಕಾರ ಜಾಮೀನು ನೀಡಲು ಅಡ್ಡಿ ಇಲ್ಲ ಎಂದು ವರದಿ ಸಲ್ಲಿಕೆ ಮಾಡಿತ್ತು.
ಈ ಪ್ರಕರಣ ದೇಶದೆಲ್ಲೆಡೆ ಪ್ರತಿಭಟನೆಗೆ ಕಾರಣವಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳ ಸರಮಾಲೆ ನಡೆದಿತ್ತು. ಅಲ್ಲದೇ ದೆಹಲಿ ಹೈಕೋರ್ಟ್ ಗೆ ಕನ್ಹಯ್ಯಾ ಕುಮಾರ್ ನನ್ನು ಹಾಜರು ಪಡಿಸಿದಾಗ ವಕೀಲರು ಕನ್ಹಯ್ಯಾ ಕುಮಾರ್ ಮತ್ತು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದರು. ಈ ಬಗ್ಗೆಯೂ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆ ನೀಡಿ ಬಿಡುಗಡೆ ಮಾಡಲಾಗಿದೆ.[ಅಫ್ಜಲ್ ಗುರು ಈತನ ಹೃದಯಕ್ಕೆ ಹತ್ತಿರವಾಗಿದ್ದನಂತೆ!]
ಯಾಕೆ ಬಂಧನಾಗಿತ್ತು?
ಫೆಬ್ರವರಿ 9 ರಂದು ಜವಾಹರಲಾಲ್ ನೆಹರು ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಉಗ್ರ ಅಫ್ಜಲ್ ಗುರು ಪರ ಮತ್ತು ಭಾರತದ ವಿರುದ್ಧ ಘೋಷಣೆ ಕೂಗಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಪ್ರಕರಣದ ನಂತರ ದೆಹಲಿ ಪೊಲೀಸರು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯಾ ಕುಮಾರ್ ನನ್ನು ಬಂಧಿಸಿದ್ದರು.












Click it and Unblock the Notifications