ದೆಹಲಿ ವಾಯುಮಾಲಿನ್ಯ: ನ.26ರವರೆಗೂ ಟ್ರಕ್ಗಳಿಗೆ ನಿರ್ಬಂಧ, WFH ವಿಸ್ತರಣೆ
ನವದೆಹಲಿ, ನವೆಂಬರ್ 22: ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಮತ್ತೊಮ್ಮೆ ಶಿಸ್ತುಕ್ರಮಗಳನ್ನು ಜಾರಿಗೊಳಿಸಿದೆ. ನವೆಂಬರ್ 26ರವರೆಗೂ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಸೂಚಿಸಲಾಗಿದೆ. ನವದೆಹಲಿಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿದಂತೆ ಇತರೆ ಸರಕುಗಳನ್ನು ಹೊತ್ತು ಬರುವ ಎಲ್ಲಾ ಟ್ರಕ್ ಸಂಚಾರಕ್ಕೆ ನಿರ್ಬಂಧವನ್ನು ವಿಸ್ತರಿಸಲಾಗಿದೆ.
"ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಸರ್ಕಾರಿ ಕಚೇರಿಗಳು 26 ನವೆಂಬರ್ 2021ರವರೆಗೆ ಬಂದ್ ಆಗಿರುತ್ತವೆ. ಖಾಸಗಿ ಕಚೇರಿಗಳು ತಮ್ಮ ಸಿಬ್ಬಂದಿಗೆ 26 ನವೆಂಬರ್ 2021ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸಲಾಗಿದೆ," ಎಂದು ಕೇಜ್ರಿವಾಲ್ ಸರ್ಕಾರದ ಆದೇಶದಲ್ಲಿ ತಿಳಿಸಿದೆ.
ದೆಹಲಿ ಎನ್ಸಿಆರ್ನಲ್ಲಿ ಶಾಲೆ-ಕಾಲೇಜು ಬಂದ್, ಶೇ.50ರಷ್ಟು ಸಿಬ್ಬಂದಿಗೆ WFH, ಕಾಮಗಾರಿಗಳಿಗೆ ಫುಲ್ ಸ್ಟಾಪ್!
ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ನವೆಂಬರ್ 26ರವರೆಗೂ ಯಾವುದೇ ರೀತಿ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗದಂತೆ ನಿರ್ಬಂಧ ವಿಧಿಸಲಾಗಿದೆ. ಇದರ ಜೊತೆಗೆ ತೆರವು ಕಾರ್ಯಾಚರಣೆಗಳಿಗೂ ಕಡಿವಾಣ ಹಾಕಲಾಗಿದೆ. ಆ ಮೂಲಕ ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಮುಂದಾಗಿದೆ.
ಮುಂದಿನ ಆದೇಶವರೆಗೂ ಶಾಲಾ-ಕಾಲೇಜು ಬಂದ್
ದೆಹಲಿಯ ವಾಯುಮಾಲಿನ್ಯದ ಕುರಿತು ಕೇಂದ್ರ ವಾಯು ಗುಣಮಟ್ಟ ನಿರ್ವಹಣಾ ಸಮಿತಿ(CAQM) ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳನ್ನು ಮುಂದಿನ ಆದೇಶವರೆಗೂ ಬಂದ್ ಮಾಡುವಂತೆ ಆದೇಶಿಸಲಾಗಿತ್ತು.
ಪರಿಸರ ಇಲಾಖೆ ಆದೇಶ ಹೇಳುವುದೇನು?
"ವಾಹನಗಳಿಂದ ವ್ಯಾಪಕವಾದ ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಹಾನಿಕಾರಕ ವಾಯು ಮಾಲಿನ್ಯಕಾರಕಗಳು ಬಿಡುಗಡೆ ಆಗುತ್ತವೆ, ವಿಶೇಷವಾಗಿ ಗಾಳಿ ಗುಣಮಟ್ಟ ತುಂಬಾ ಕಳಪೆ ಆಗಿರುವಾಗ ದೆಹಲಿಯಲ್ಲಿನ ಅತ್ಯಂತ ಕಳಪೆ ಗಾಳಿಯ ಗುಣಮಟ್ಟದ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ವಾಹನಗಳ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಅವಶ್ಯಕತೆಯಿದೆ. ನವೆಂಬರ್ 26 ರವರೆಗೆ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ಗಳನ್ನು ಹೊರತುಪಡಿಸಿ ದೆಹಲಿಯಲ್ಲಿ ಟ್ರಕ್ಗಳ ಪ್ರವೇಶವನ್ನು ನಿಲ್ಲಿಸಿ," ಎಂದು," ದೆಹಲಿಯ ಪರಿಸರ ಇಲಾಖೆ ಆದೇಶದಲ್ಲಿ ಹೇಳಿತ್ತು.
ದೆಹಲಿಯಲ್ಲಿ ನ.26ರವರೆಗೂ ಕಚೇರಿಗಳು ಬಂದ್
"ದೆಹಲಿಯಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಜಿಎನ್ಸಿಟಿಯ ಎಲ್ಲಾ ಕಚೇರಿಗಳು/ಸ್ವಾಯತ್ತ ಸಂಸ್ಥೆಗಳು/ಕಾರ್ಪೊರೇಷನ್ಗಳು ನವೆಂಬರ್ 26ರವರೆಗೆ ಬಂದ್ ಆಗಿರುತ್ತವೆ. ಆದಾಗ್ಯೂ, ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ವಾಯು ಗುಣಮಟ್ಟ ನಿರ್ವಹಣಾ ಸಮಿತಿ ಸಲಹೆಯ ಪ್ರಕಾರ, ದೆಹಲಿ ಸರ್ಕಾರವು ಕಳೆದ ಬುಧವಾರ ನಗರದೊಳಗೆ ಅನಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ಗಳ ಪ್ರವೇಶವನ್ನು ನಿಷೇಧಿಸುವುದು ಮತ್ತು ಮುಂದಿನ ಆದೇಶದವರೆಗೆ ಶಾಲಾ-ಕಾಲೇಜುಗಳನ್ನು ಮುಚ್ಚುವುದು ಸೇರಿದಂತೆ 10 ನಿರ್ದೇಶನಗಳನ್ನು ಹೊರಡಿಸಿತ್ತು.
ಜನರಿಗಾಗಿ ಬಸ್ ಬಾಡಿಗೆ ಪಡೆದ ದೆಹಲಿ ಸರ್ಕಾರ
ಸೋಮವಾರದಿಂದ "ಪರ್ಯಾವರಣ್ ಸೇವಾ" ಅಡಿಯಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸಲು ಖಾಸಗಿ ನಿರ್ವಾಹಕರಿಂದ ಸುಮಾರು 550 ಬಸ್ಗಳನ್ನು ಬಾಡಿಗೆಗೆ ಪಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಪಾಯಕಾರಿ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಜನರು ಖಾಸಗಿ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆ ಬಳಸುವುದಕ್ಕೆ ಅನುಕೂಲವಾಗಲೆಂದು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.
ಖಾಸಗಿ ನಿರ್ವಾಹಕರಿಂದ 1,000 ಸಿಎನ್ಜಿ ಬಸ್ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ದೆಹಲಿ ಸರ್ಕಾರ ಇತ್ತೀಚೆಗೆ ನಿರ್ಧರಿಸಿತ್ತು. "ಇದುವರೆಗೆ, 750ಕ್ಕೂ ಹೆಚ್ಚು ಬಸ್ಗಳನ್ನು ನೋಂದಾಯಿಸಲಾಗಿದೆ, ಅದರಲ್ಲಿ ಸುಮಾರು 550 ಬಸ್ಗಳನ್ನು ಸೋಮವಾರದಿಂದ ವಿವಿಧ ಮಾರ್ಗಗಳಲ್ಲಿ ಪರ್ಯಾವರಣ್ ಸೇವಾ ಅಡಿಯಲ್ಲಿ ಸೇವೆಗೆ ಒದಗಿಸುತ್ತವೆ. ಈ ಬಸ್ಗಳು ಹೆಚ್ಚಿನ ಪ್ರಯಾಣಿಕರನ್ನು ಹೊತ್ತು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ,"ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಗಾಳಿ ಗುಣಮಟ್ಟ ಅತ್ಯಂತ ಕಳಪೆ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ದೆಹಲಿಯಲ್ಲಿ ಸೋಮವಾರ ಗಾಳಿ ಗುಣಮಟ್ಟ ಸೂಚ್ಯಂಕವು 235ರಷ್ಟಿದೆ. ಭಾನುವಾರ 229ರಷ್ಟಿದ್ದ ಗಾಳಿ ಗುಣಮಟ್ಟ ಸೂಚ್ಯಂಕವು ಶನಿವಾರ 273ರಷ್ಟಿತ್ತು. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟವು ಕಳಪೆಯಾಗಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಹಂತಕ್ಕೆ ತಲುಪಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ. ದೆಹಲಿಯಲ್ಲಿ ಪ್ರಸ್ತುತ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟದಿಂದ ಅತಿ ಕಳಪೆ ಮಟ್ಟಕ್ಕೆ ತಲುಪಿದೆ.