50 ವರ್ಷಗಳ ಅಸ್ಸಾಂ-ಮೇಘಾಲಯದ ಗಡಿ ಸಮಸ್ಯೆ ಶೇ.70ರಷ್ಟು ಇತ್ಯರ್ಥ
ನವದೆಹಲಿ, ಮಾರ್ಚ್ 29: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವಿನ ಗಡಿ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಒಪ್ಪಂದಕ್ಕೆ ಮಂಗಳವಾರ ಅಂಕಿತ ಬಿದ್ದಿದೆ. ಆ ಮೂಲಕ ಉಭಯ ರಾಜ್ಯಗಳ ನಡುವಿನ 50 ವರ್ಷಗಳ ಗಡಿ ವಿವಾದವು ಶೇ.70ರಷ್ಟು ಇತ್ಯರ್ಥವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಗೃಹ ಸಚಿವಾಲಯದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಕಾನ್ರಾಡ್ ಸಂಗ್ಮಾ ಒಪ್ಪಂದಕ್ಕೆ ಸಹಿ ಹಾಕಿದರು.
ದಶಕಗಳ ಗಡಿ ವಿವಾದವನ್ನು ಅಂತ್ಯಗೊಳಿಸಲು ಮಂಗಳವಾರ ಸಹಿ ಹಾಕಲಾದ ಒಪ್ಪಂದವು ಈಶಾನ್ಯ ರಾಜ್ಯಗಳ ಪಾಲಿನ ಐತಿಹಾಸಿಕ ದಿನವಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು. ಕೇಂದ್ರ ಗೃಹ ಸಚಿವಾಲಯದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೇಘಾಲಯ ಸರ್ಕಾರದ 11 ಪ್ರತಿನಿಧಿಗಳು ಮತ್ತು ಅಸ್ಸಾಂನ ಒಂಬತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ:
''ವಿವಾದ ಮುಕ್ತ ಈಶಾನ್ಯಕ್ಕೆ ಇಂದು ಮಹತ್ವದ ದಿನ. ಮೋದಿಯವರು ಪ್ರಧಾನಿಯಾದಾಗಿನಿಂದ ಈಶಾನ್ಯ ಭಾಗದ ಹೆಮ್ಮೆಗಾಗಿ ನಿರಂತರವಾಗಿ ಕೆಲಸ ಮಾಡಿದ್ದಾರೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
''ನಾನು ಈಶಾನ್ಯ ಗಡಿ ಸಮಸ್ಯೆಯ ಬಗ್ಗೆ ಪ್ರಧಾನಿ ಜೊತೆ ಮಾತನಾಡಿದ್ದೇನೆ. 2019ರಲ್ಲಿ ತ್ರಿಪುರಾದಲ್ಲಿ ಸಶಸ್ತ್ರ ಗುಂಪುಗಳ ನಡುವೆ ಒಪ್ಪಂದವಿತ್ತು. ಜನವರಿ 16, 2020ರಂದು ಸಹಿ ಮಾಡಿದ ಬ್ರೂ ರಿಯಾಂಗ್ ಒಪ್ಪಂದವು 34,000ಕ್ಕೂ ಹೆಚ್ಚು ಜನರಿಗೆ ಪ್ರಯೋಜನಕಾರಿಯಾಗಿದೆ. ಐತಿಹಾಸಿಕ ಬೋಡೋ ಒಪ್ಪಂದಕ್ಕೆ 27 ಜನವರಿ, 2020ರಂದು ಸಹಿ ಹಾಕಲಾಯಿತು, ಅಸ್ಸಾಂನ ಸ್ವರೂಪಕ್ಕೆ ತೊಂದರೆಯಾಗದಂತೆ ಮತ್ತು ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ 50 ವರ್ಷಗಳ ಸಮಸ್ಯೆಯನ್ನು ಕೊನೆಗೊಳಿಸಲಾಯಿತು. ಕಾರ್ಬಿ ಆಂಗ್ಲಾಂಗ್ ಒಪ್ಪಂದವನ್ನು ಸೆಪ್ಟೆಂಬರ್, 2021ರಲ್ಲಿ ಮತ್ತು ಇಂದು ಈ ಒಪ್ಪಂದವನ್ನು ಇತ್ಯರ್ಥಗೊಳಿಸುವ ಮೂಲಕ 70ರಷ್ಟು ಗಡಿ ವಿವಾದ ಬಗೆಹರಿದಿದೆ," ಎಂದು ಹೇಳಿದರು.
ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅಭಿಪ್ರಾಯ:
ಒಪ್ಪಂದದ ಬಗ್ಗೆ ಮಾತನಾಡಿದ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ,''12 ಪ್ರದೇಶಗಳಲ್ಲಿ ವ್ಯತ್ಯಾಸಗಳ ಪೈಕಿ ನಾವು ಆರು ಪ್ರದೇಶಗಳಿಗೆ ಸಂಬಂಧಿಸಿದಂತೆ ಒಂದು ಒಪ್ಪಂದಕ್ಕೆ ಬರಲಾಗಿದೆ. ಸರ್ವೇ ಆಫ್ ಇಂಡಿಯಾ ಮತ್ತು ಎರಡೂ ರಾಜ್ಯಗಳು ನಡೆಸುವ ಸಮೀಕ್ಷೆ ಆಧಾರದ ಮೇಲೆ ಉಳಿದ ಆರು ಪ್ರದೇಶಗಳಲ್ಲಿನ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಳ್ಳಲಾಗುವುದು'' ಎಂದರು.
''ಅಸ್ಸಾಂ ಮತ್ತು ಮೇಘಾಲಯ ಎರಡರಲ್ಲೂ ಸರಿಸುಮಾರು 18 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಂತೆ ಒಟ್ಟು 36 ಚದರ ಕಿಮೀ 'ವ್ಯತ್ಯಾಸಗಳ ಪ್ರದೇಶ' ಅಡಿಯಲ್ಲಿ ಬರುತ್ತದೆ" ಎಂದು ಸಂಗ್ಮಾ ತಿಳಿಸಿದರು.
ಅಸ್ಸಾಂ ಮತ್ತು ಮೇಘಾಲಯ 885-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈ ಪೈಕಿ ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ತಮ್ಮ ರಾಜ್ಯದ ಗಡಿಯಲ್ಲಿರುವ 12 ಪ್ರದೇಶಗಳಲ್ಲಿ ಆರರಲ್ಲಿನ ಗಡಿ ವಿವಾದಗಳನ್ನು ಪರಿಹರಿಸಲು ಕರಡು ನಿರ್ಣಯವನ್ನು ಮಂಡಿಸಿದ್ದವು. ಒಪ್ಪಂದವು ಒಟ್ಟು ಗಡಿಯ ಸುಮಾರು 70 ಪ್ರತಿಶತವನ್ನು ಒಳಗೊಂಡಿರುವ ಆರು ಪ್ರದೇಶಗಳ ವ್ಯತ್ಯಾಸವನ್ನು ಪರಿಹರಿಸುವ ಗುರಿ ಹೊಂದಿದೆ.












Click it and Unblock the Notifications