ಕೆಸಿಆರ್ ಪ್ರಶ್ನೆಗೆ ಅಸ್ಸಾಂ ಸಿಎಂ ಉತ್ತರ; ಸರ್ಜಿಕಲ್ ಸ್ಟೈಕ್ ಬಗ್ಗೆ ಸಾಕ್ಷ್ಯ ಬಿಡುಗಡೆ
ನವದೆಹಲಿ, ಫೆಬ್ರವರಿ 14: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ನ ವಿಡಿಯೋವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸೋಮವಾರ ಬಿಡುಗಡೆ ಮಾಡಿದರು. ಭಯೋತ್ಪಾದಕರ ವಿರುದ್ಧದ ಕ್ರಮಗಳನ್ನು ಪ್ರಶ್ನಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಅಸ್ಸಾಂ ಸಿಎಂ ತರಾಟೆ ತೆಗೆದುಕೊಂಡಿದ್ದಾರೆ.
"ಪ್ರೀತಿಯ ಕೆಸಿಆರ್ ಗಾರು, ನಮ್ಮ ವೀರ ಸೇನೆಯ ಸರ್ಜಿಕಲ್ ಸ್ಟ್ರೈಕ್ನ ವೀಡಿಯೋಗ್ರಾಫಿಕ್ ಪುರಾವೆ ಇಲ್ಲಿದೆ. ಹೀಗಿದ್ದರೂ ನೀವು ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸುತ್ತೀರಿ ಮತ್ತು ಅವರನ್ನು ಅವಮಾನಿಸುತ್ತಿದ್ದೀರಿ. ನಮ್ಮ ಸೇನೆಯ ಮೇಲಿನ ದಾಳಿಯನ್ನು ನೀವು ಏಕೆ ಹತಾಶರಾಗಿ ಕೆರಳುವಂತೆ ಮಾಡುತ್ತೀರಿ. ನವ ಭಾರತ ನಮ್ಮ ಸೇನೆಯ ವಿರುದ್ಧದ ಅವಮಾನಗಳನ್ನು ಸಹಿಸುವುದಿಲ್ಲ," ಎಂದು ಹಿಮಂತ್ ಬಿಸ್ವಾ ಶರ್ಮಾ ಕೂ ಮಾಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಂದ್ರ ಪುರಾವೆ ತೋರಿಸಲಿ: ಕೆಸಿಆರ್
ಸೋಮವಾರ ಹಿಮಂತ್ ಬಿಸ್ವಾ ಶರ್ಮಾ ಶೇರ್ ಮಾಡಿರುವ ವೀಡಿಯೋದಲ್ಲಿ ನಕ್ಷೆಗಳ ಸ್ಕ್ರೀನ್ಶಾಟ್ಗಳು, ಉಪಗ್ರಹ ಚಿತ್ರಗಳು ಮತ್ತು ವಿವಿಧ ವೀಡಿಯೊಗಳ ಕಟ್ ಶಾಟ್ಗಳನ್ನು ಹೊಂದಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, 2016ರ ಸರ್ಜಿಕಲ್ ಸ್ಟ್ರೈಕ್ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೆಸಿಆರ್ ಹೇಳಿದ್ದೇನು?:
ಕಳೆದ 2016ರ ಸರ್ಜಿಕಲ್ ಸ್ಟ್ರೈಕ್ನ ಪುರಾವೆಯನ್ನು ಕೇಳುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಕೆಸಿಆರ್ ಹೇಳಿದರು. ಅವರು ಸ್ಟ್ರೈಕ್ಗಳ ಪುರಾವೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಈಗಲಾದರೂ ಸರಕಾರವೇ ಸಾಕ್ಷಿ ತೋರಿಸಲಿ ಎಂದು ಕೇಳುತ್ತಿದ್ದೇನೆ. ಜನರಲ್ಲಿ ಆತಂಕವಿರುವ ಹಿನ್ನೆಲೆ ಇದು ಅವರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
"ಇಲ್ಲಿಯವರೆಗೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಂದ್ರ ಸರ್ಕಾರದ ಬಳಿ ಪುರವೆ ಕೇಳುತ್ತಲೇ ಇದ್ದೇನೆ'' ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದರು. 2019 ರ ಸೆಪ್ಟೆಂಬರ್ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ ಎಂಬ ಭಾರತೀಯ ಸೇನೆಯ ಪ್ರತಿಪಾದನೆಗೆ ಕೇಂದ್ರ ಸರ್ಕಾರದ ಬಳಿ ಸಾಕ್ಷಿ ಏನಿದೆ," ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪ್ರಶ್ನಿಸಿದ್ದರು.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ:
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸೆಪ್ಟೆಂಬರ್ 29, 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಜಮ್ಮು-ಕಾಶ್ಮೀರದ ಉರಿಯ ಮೂಲ ಶಿಬಿರದಲ್ಲಿ 19 ಮಂದಿ ಭಾರತೀಯ ಯೋಧರು ಪಾಕ್ ಬೆಂಬಲಿತ ಉಗ್ರರಿಂದ ಹುತಾತ್ಮರಾಗಿದ್ದಕ್ಕೆ ಪ್ರತೀಕಾರವಾಗಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.