2024ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ಪ್ರಾಕೃತಿಕ ವಿಕೋಪಗಳಿವು
2024ರ ವರ್ಷ ಮುಗಿಯುತ್ತಾ ಬಂದಿದ್ದು 2025ರ ಹೊಸ ವರ್ಷವನ್ನು ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ಪ್ರತಿ ವರ್ಷ ಆರಂಭದಲ್ಲೂ ಈ ವರ್ಷ ಎಲ್ಲ ಒಳ್ಳೆಯದಾಗಲಿ ಎನ್ನುವ ಪ್ರಾರ್ಥನೆಯೊಂದಿಗೆ ಆರಂಭಿಸುತ್ತೇವೆ. ಆದರೆ ಪ್ರಾಕೃತಿಕ ವಿಕೋಪಗಳಿಗೆ ಅಂತಹ ಯಾವುದೇ ವಾರ, ದಿನ ವರ್ಷದ ಹಂಗಿಲ್ಲ, ಕೆಲವೊಮ್ಮೆ ಪ್ರಕೃತಿಯ ಮುನಿಸೋ ಅಥವಾ ಮಾನವನ ಸ್ವಯಂಕೃತ ಅಪರಾಧವೋ ಹಲವು ದುರಂತಗಳು ನಡೆಯುತ್ತವೇ. 2024ರಲ್ಲಿ ಕೂಡ ದೇಶದಲ್ಲಿ ಹಲವು ಪ್ರವಾಹ, ಭೂಕುಸಿದ, ಚಂಡಮಾರುತಗಳು ಅಪಾರ ಹಾನಿ ಮಾಡಿವೆ.
ವಯನಾಡು ಭೂಕುಸಿತ ಈ ವರ್ಷದ ಮಹಾ ದುರಂತಗಳಲ್ಲಿ ಒಂದು, ಪ್ರಕೃತಿ ಮುನಿದರೆ ಹೇಗಿರುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಹಲವು ಚಂಡಮಾರುತಗಳು ದೇಶದ ವಿವಿಧ ಭಾಗಗಳಿಗೆ ಅಪ್ಪಳಿಸಿವೆ. ಅಂತಹ ಪ್ರಮುಖ ಪ್ರಾಕೃತಿಕ ವಿಕೋಪಗಳ ಪಟ್ಟಿ ಇಲ್ಲಿದೆ.

ಹಿಮಾಚಲ ಪ್ರದೇಶ ಮಹಾಮಳೆ, ಪ್ರವಾಹ
ಪ್ರತಿವರ್ಷ ಹಿಮಾಚಲ ಪ್ರದೇಶದಲ್ಲಿ ಮಳೆ, ಪ್ರವಾಹ ಸಾಮಾನ್ಯ ಎನ್ನುವಂತಾಗಿದೆ. 2024ರಲ್ಲಿ ಕೂಡ ಪ್ರಕೃತಿ ಹಿಮಾಚಲ ಪ್ರದೇಶದಲ್ಲಿ ರುದ್ರಾವತಾರ ತೋರಿಸಿದೆ. ಜೂನ್ ತಿಂಗಳಿನಿಂದ ಆಗಸ್ಟ್ ವೇಳೆಗೆ ರಾಜ್ಯದಲ್ಲಿ 51 ಮೇಘಸ್ಫೋಟ ಮತ್ತು ಹಠಾತ್ ಪ್ರವಾಹ ಉಂಟಾಗಿದೆ. ವಿವಿಧ ದುರ್ಘಟನೆಗಳಲ್ಲಿ 31 ಮಂದಿ ಸಾವನ್ನಪ್ಪಿದ್ದು, 33 ಜನ ಕಾಣೆಯಾಗಿದ್ದಾರೆ. ಕನಿಷ್ಠ 121 ಮನೆಗಳಿಗೆ ಹಾನಿಯಾಗಿದ್ದು, 35 ಭೂಕೂಸಿತ ಘಟನೆಗಳು ಸಂಭವಿಸಿವೆ. ಪ್ರಕೃತಿ ವಿಕೋಪದಿಂದಾಗಿ ರಾಜ್ಯದಲ್ಲಿ ಸುಮಾರು 1140 ಕೋಟಿ ರೂಪಾಯಿ ನಷ್ಟವಾಗಿದೆ.
ಅಸ್ಸಾಂ ಪ್ರವಾಹದಲ್ಲಿ 117 ಸಾವು
ಅಸ್ಸಾಂನಲ್ಲಿ ಕೂಡ ಈ ವರ್ಷ ಪ್ರವಾಹ ಎಡಬಿಡದೆ ಕಾಡಿದೆ. 2024ರಲ್ಲಿ ಅಸ್ಸಾಂನಲ್ಲಿ ಪ್ರವಾಹದಿಂದಾಗಿ 117 ಮಂದಿ ಮೃತಪಟ್ಟಿದ್ದಾರೆ. 2019ರಿಂದ ಇದುವರೆಗೂ ಪ್ರವಾಹದಿಂದಾಗಿ 880 ಮಂದಿ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿಯಲ್ಲಿ ತಿಳಿಸಿದೆ. ಪ್ರತಿ ವರ್ಷ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರ ನಷ್ಟ ಉಂಟಾಗುತ್ತಲೇ ಇರುತ್ತದೆ.
ಪ್ರವಾಹಕ್ಕೆ ನಲುಗಿದ ವಿಜಯವಾಡ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಭಾರಿ ಮುಂಗಾರು ಮಳೆ ಅಬ್ಬರಿಸಿತ್ತು. ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ 45 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 9ರವರೆಗೆ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಮಳೆಯ ಅಬ್ಬರಕ್ಕೆ ಬುಡಮೇರು ಮತ್ತು ಕೃಷ್ಣಾ ನದಿ ಉಕ್ಕಿ ಹರಿದ ಕಾರಣ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದವು. 44,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದರು.
ರೆಮಲ್ ಚಂಡಮಾರುತದ ಅಬ್ಬರ
2024ರ ಮೊದಲ ಚಂಡಮಾರುತ ರೆಮಲ್ ಮೇ26ರಂದು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಸುಂದರಬನ್ ಪ್ರದೇಶಕ್ಕೆ ಅಪ್ಪಳಿಸಿತ್ತು, ಗಂಟೆಗೆ 100-135 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಬಂಗಾಳ, ಮಿಜೋರಾಂ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರಿ ಬಿರುಗಾಳಿ ಮಳೆಯಿಂದಾಗಿ ಕನಿಷ್ಠ 33 ಮಂದಿ ಮೃತಪಟ್ಟಿದ್ದರು.
ವಯನಾಡ್ ಭೂಕುಸಿತದ ದುರಂತ
ಈ ವರ್ಷದ ಮಹಾ ದುರಂತವೆಂದರೆ ಅದು ವಯನಾಡ್ ಭೂಕುಸಿತ. ಜುಲೈ 30ರಂದು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ 420ಕ್ಕೂ ಹೆಚ್ಚಿನ ಜೀವಗಳನ್ನು ಬಲಿ ಪಡೆದಿತ್ತು. ಭೀಕರ ದುರಂತದಲ್ಲಿ 397 ಮಂದಿ ಗಾಯಗೊಂಡು, 47 ಮಂದಿ ನಾಪತ್ತೆಯಾಗಿದ್ದರು. ಭೂಕುಸಿತದ ದುರಂತದ ಭೀಕರತೆ ಹೇಗಿತ್ತು ಎಂದರೆ 1500 ಕ್ಕೂ ಹೆಚ್ಚಿನ ಮನೆಗಳು ಹಾನಿಯಾಗಿದ್ದಲ್ಲದೆ, ಒಂದಿಡೀ ಊರಿನ ಕುರುಹೇ ಇಲ್ಲದಂತೆ ಕೊಚ್ಚಿಹೋಗಿತ್ತು. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದ್ದು ಇನ್ನೂ ದುರಂತದಿಂದ ಈ ಪ್ರದೇಶ ಸುಧಾರಿಸಿಕೊಂಡಿಲ್ಲ.
ಸೈಕ್ಲೋನ್ ಫೆಂಗಲ್
ನವೆಂಬರ್ 30ರಂದು ಪುದುಚೆರಿ ಬಳಿ ಅಪ್ಪಳಿಸಿದ ಫೆಂಗಲ್ ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿಯಲ್ಲಿ ಅವಾಂತರಕ್ಕೆ ಕಾರಣವಾಗಿತ್ತು. ಈ ಚಂಡಮಾರುತದ ಪರಿಣಾಮ 19 ಜನ ಮೃತಪಟ್ಟಿದ್ದಾರೆ. ಪುದುಚೆರಿಯಲ್ಲಿ 46 ಸೆಂ.ಮೀ ಮಳೆಯಾಗಿದ್ದು ದಾಖಲೆ ಬರೆಯಿತು. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗಿತ್ತು.












Click it and Unblock the Notifications