Gujarat Election: ಸಿಬಿಐ ವಿಚಾರಣೆ ಮರುದಿನವೇ ಮನೀಶ್ ಸಿಸೋಡಿಯಾ ಪ್ರಚಾರ
ನವದೆಹಲಿ, ಅಕ್ಟೋಬರ್ 18: ಸಿಬಿಐ ವಿಚಾರಣೆ ನಡೆಸಿದ ಮರುದಿನವೇ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುಜರಾತ್ಗೆ ಭೇಟಿ ನೀಡಿದ್ದಾರೆ. ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಕೈಗೊಂಡಿದ್ದಾರೆ.
ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರ ವಿಚಾರಣೆಯನ್ನು ಸಿಬಿಐ ಸೋಮವಾರ ನಡೆಸಿತ್ತು.
ಸತತ 9 ಗಂಟೆಗಳ ಕಾಲ ವಿಚಾರಣೆಗೆ ಹಾಜರಾದ ನಂತರ ಹೊರಬಂದ ಸಿಸೋಡಿಯಾ ಸಿಬಿಐ ವಿರುದ್ಧ ಗುರುತರ ಆರೋಪ ಮಾಡಿದ್ದರು. 'ಎಎಪಿ ತೊರೆದು ಬಿಜೆಪಿ ಸೇರುವಂತೆ ಸಿಬಿಐ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದಾರೆ' ಎಂದು ಅವರು ತಿಳಿಸಿದರು. ಇದನ್ನು ಸಿಬಿಐ ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ವಿಚಾರಣೆಯಿಂದ ಸಿಸೋಡಿಯಾ ಹೊರಬಂದ ನಂತರ ಟ್ವೀಟ್ ಮಾಡಿದ್ದ ಕೇಜ್ರಿವಾಲ್, 'ನಾಳೆ(ಮಂಗಳವಾರ) ಮನೀಶ್ ಸಿಸೋಡಿಯಾ ಗುಜರಾತ್ಗೆ ತೆರಳಿ ಪ್ರಚಾರ ನಡೆಸಲಿದ್ದಾರೆ' ಎಂದು ಹೇಳಿದ್ದರು.
ಗುಜರಾತ್ ಪ್ರಚಾರದಲ್ಲಿ ಪಾಲ್ಗೊಳ್ಳುವ ವಿಚಾರವಾಗಿ ಟ್ವೀಟ್ ಮಾಡಿರುವ ಸಿಸೋಡಿಯಾ, 'ನಾನು ಮುಂದಿನ ಎರಡು ದಿನಗಳ ಕಾಲ ಗುಜರಾತ್ಗೆ ಹೋಗುತ್ತಿದ್ದೇನೆ. ಗುಜರಾತ್ನಲ್ಲಿ ಮಕ್ಕಳಿಗೆ ಉತ್ತಮ ಶಾಲೆಗಳು ಬೇಕು. ಒಳ್ಳೆಯ ಶಿಕ್ಷಣ ಬೇಕು. ಇದೆಲ್ಲವನ್ನೂ ನೀಡುವ ಸರ್ಕಾರಕ್ಕೆ ಗುಜರಾತಿಗಳು ಮತ ಚಲಾಯಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

ಬಿಜೆಪಿ ಹೀನಾಯವಾಗಿ ಸೋಲಲಿದೆ
ಮುಂದಿನ ಐದು ವರ್ಷಗಳಲ್ಲಿ ದೆಹಲಿ ಶಾಲೆಗಳಂತೆ ಗುಜರಾತ್ನ ಎಲ್ಲಾ ಶಾಲೆಗಳನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಸೋಮವಾರ ಸಿಬಿಐ ವಿಚಾರಣೆಗೆ ತೆರಳುವ ಮುನ್ನ ಟ್ವೀಟ್ ಮಾಡಿದ್ದ ಸಿಸೋಡಿಯಾ, 'ನಾನು ಗುಜರಾತ್ ವಿಧಾನಸಭೆ ಚುನಾವಣೆಗೆ ತೆರಳುವವನಿದ್ದೆ. ಇದೇ ಸಮಯದಲ್ಲಿ ನನ್ನನ್ನು ಬಂಧಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ನಾನಿಲ್ಲದಿದ್ದರೂ ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರ ಮುಂದುವರಿಯಲಿದೆ. ಗುಜರಾತ್ನಲ್ಲಿ ಬಿಜೆಪಿ ಹೀನಾಯವಾಗಿ ಸೋಲಲಿದೆ. ಗುಜರಾತಿಗಳು ತೀರ್ಮಾನ ಮಾಡಿ ಆಗಿದೆ' ಎಂದು ತಿಳಿಸಿದ್ದರು.
ಎಎಪಿಯನ್ನು ತೊರೆಯುವಂತೆ ಅಧಿಕಾರಿಗಳು ನನಗೆ ಆದೇಶಿಸಿದರು
ಸತತ ಒಂಬತ್ತು ತಾಸುಗಳ ಕಾಲ ವಿಚಾರಣೆ ನಡೆಸಿರುವ ಸಿಬಿಐ ಅಧಿಕಾರಿಗಳ ವಿರುದ್ಧ ಮನೀಶ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.
'ಸಿಬಿಐ ಕಚೇರಿಯೊಳಗೆ ನನ್ನನ್ನು ವಿಚಾರಣೆ ಮಾಡಲಾಯಿತು. ಆ ವೇಳೆ, ಎಎಪಿಯನ್ನು ತೊರೆಯುವಂತೆ ಅಧಿಕಾರಿಗಳು ನನಗೆ ಆದೇಶಿಸಿದರು. ಇಲ್ಲದಿದ್ದರೆ, ಇಂತಹ ಪ್ರಕರಣಗಳು ನನ್ನ ವಿರುದ್ಧ ದಾಖಲಾಗುತ್ತಲೇ ಇರುತ್ತವೆ ಎಂಬುದಾಗಿ ಬೆದರಿಸಿದರು' ಎಂದು ತಿಳಿಸಿದ್ದಾರೆ.'ಪ್ರಸ್ತುತ ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ನಿಜವಾದ ಪ್ರಕರಣಗಳು ಯಾವುದಿದೆ ಹೇಳಿ? ಆದರೂ, ಅವರನ್ನು ಬಂಧಿಸಿಲ್ಲವೇ? ಎಂದು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದರು. ನಾನು ಎಎಪಿ ತೊರೆದರೆ ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿದರು. ಅದಕ್ಕೆ ನಾನು, ಬಿಜೆಪಿಗಾಗಿ ಎಎಪಿಯನ್ನು ಬಿಡಲಾರೆ ಎಂಬುದಾಗಿ ಹೇಳಿದೆ' ಎಂದಿದ್ದಾರೆ.

ಸಿಬಿಐ ಬಲವಾಗಿ ನಿರಾಕರಿಸುತ್ತದೆ
ಸಿಸೋಡಿಯಾ ಮಾಡಿರುವ ಗಂಭೀರ ಆರೋಪಕ್ಕೆ ಸಿಬಿಐ ಪ್ರತಿಕ್ರಿಯಿಸಿದೆ. ಈ ಕುರಿತು ಹೇಳಿಕೆ ನೀಡಿರುವ ತನಿಖಾ ಸಂಸ್ಥೆಯು, 'ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾಡಿರುವ ಆರೋಪಗಳನ್ನು ಸಿಬಿಐ ಬಲವಾಗಿ ನಿರಾಕರಿಸುತ್ತದೆ. ಅವರ ವಿಚಾರಣೆಯನ್ನು ವೃತ್ತಿಪರ ಹಾಗೂ ಕಾನೂನು ರೀತಿಯಲ್ಲಿಯೇ ನಡೆಸಲಾಗಿದೆ. ಕಾನೂನು ಪ್ರಕಾರವೇ, ತನಿಖೆ ಮುಂದುವರಿಯಲಿದೆ' ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ
ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಎಎಪಿ ಪೈಪೋಟಿ ನೀಡಲಿದೆ ಎಂದು ಎಎಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಪ್ರಚಾರಕ್ಕೆ ತೆರಳದಂತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಎಎಪಿ ಆರೋಪಿಸಿದೆ. ಎಎಪಿ ನಾಯಕರ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ.












Click it and Unblock the Notifications