'ಕರಾಳ ದಿನಗಳನ್ನು' ಎಂದಿಗೂ ಮರೆಯಲಾಗದು: ತುರ್ತು ಪರಿಸ್ಥಿತಿಯ 46 ನೇ ವರ್ಷದಂದು ಮೋದಿ ಟ್ವೀಟ್
ನವದೆಹಲಿ, ಜೂ. 25: ಭಾರತದಲ್ಲಿ ಐತಿಹಾಸಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ತುರ್ತು ಪರಿಸ್ಥಿತಿಗೆ 2021 ಜೂನ್ 25 ರಂದು 46 ವರ್ಷಗಳು ಸಂದಿವೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ 'ಕರಾಳ ದಿನಗಳನ್ನು' ಎಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ.
1975 ರಲ್ಲಿ ಈ ದಿನದಂದು ಆಗಿನ ಭಾರತದ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಕೇಂದ್ರದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಶಿಫಾರಸ್ಸಿನ ಮೇರೆಗೆ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ತುರ್ತು ಪರಿಸ್ಥಿತಿಯು 1975 ರ ಜೂನ್ 25 ರಿಂದ 1977 ರ ಮಾರ್ಚ್ 21 ರವರೆಗೆ ಜಾರಿಯಲ್ಲಿತ್ತು.
ಭಾರತ ದೇಶದ ಆಧುನಿಕ ಇತಿಹಾಸದ ಬಗ್ಗೆ ಮಾತನಾಡುವಾಗ ಶೈಕ್ಷಣಿಕ ಮತ್ತು ರಾಜಕೀಯ ವಲಯಗಳಲ್ಲಿ ಹೆಚ್ಚು ಚರ್ಚಾಸ್ಪದ ಅಧ್ಯಾಯಗಳಲ್ಲಿ ಒಂದಾಗಿದೆ ಈ ತುರ್ತು ಪರಿಸ್ಥಿತಿ ಘೋಷಣೆ. ಗುಜರಾತ್ ಹತ್ಯಾಕಾಂಡ, ಬಾಬ್ರಿ ಮಸೀದಿ ಧ್ವಂಸ ಸೇರಿದಂತೆ ಭಾರತ ದೇಶದ ಕರಾಳ ಅಧ್ಯಾಯಗಳಲ್ಲಿ ಇಂದಿರಾಗಾಂಧಿ ಆಡಳಿತಾವಧಿಯ ತುರ್ತು ಪರಿಸ್ಥಿತಿಯು ಒಂದಾಗಿದೆ.
|
'ಕರಾಳ ದಿನ' ಎಂದಿಗೂ ಮರೆಯಲಾಗದು: ಮೋದಿ ಟ್ವೀಟ್
ತುರ್ತು ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ''ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. 1975 ರಿಂದ 1977 ರವರೆಗಿನ ಅವಧಿಯು ಸಂಸ್ಥೆಗಳ ವ್ಯವಸ್ಥಿತ ನಾಶಕ್ಕೆ ಸಾಕ್ಷಿಯಾಯಿತು. ಭಾರತದ ಪ್ರಜಾಪ್ರಭುತ್ವ ಮನೋಭಾವವನ್ನು ಬಲಪಡಿಸಲು ಸಾಧ್ಯವಿರುವ ಎಲ್ಲ ಕಾರ್ಯವನ್ನು ಮಾಡುವುದಾಗಿ ನಾವು ಪ್ರತಿಜ್ಞೆ ಮಾಡೋಣ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಅನುಗುಣವಾಗಿ ಬದುಕೋಣ,'' ಎಂದಿದ್ದಾರೆ. ''ನಮ್ಮ ಪ್ರಜಾಪ್ರಭುತ್ವದ ನೀತಿಗಳನ್ನು ಕಾಂಗ್ರೆಸ್ ಮೆಟ್ಟಿದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಲ್ಲ ಶ್ರೇಷ್ಠರನ್ನು ನಾವು ನೆನಪಿಸಿಕೊಳ್ಳುತ್ತೇವೆ,'' ಎಂದು ಕೂಡಾ ಹೇಳಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಇನ್ಫೋಗ್ರಾಫಿಕ್ಸ್ ಸರಣಿಯ ಲಿಂಕ್ ಟ್ವೀಟ್ ಮಾಡಿದ್ದಾರೆ.
ತುರ್ತು ಪರಿಸ್ಥಿತಿ ಬಗ್ಗೆ ಬಿಜೆಪಿ ಇನ್ಸ್ಟಾಗ್ರಾಂನಲ್ಲಿ ಏನಿದೆ?
"1975 ರಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ: ಭಾರತದ ಪ್ರಜಾಪ್ರಭುತ್ವದಲ್ಲಿ ನಂಬಲಾಗದ ಹಂತ" ಎಂಬ ಶೀರ್ಷಿಕೆಯಡಿ ಬಿಜೆಪಿಯು ಚಿತ್ರ ಸರಣಿಯನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಈ ಸರಣಿಯಲ್ಲಿ ತುರ್ತುಪರಿಸ್ಥಿತಿಗೆ ಸಂಬಂಧಿಸಿದ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಇಂದಿರಾಗಾಂಧಿ ಹೇರಿದ ತುರ್ತು ಸಂದರ್ಭದಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಭಗತ್ ಸಿಂಗ್ ಚಲನಚಿತ್ರಗಳನ್ನು ನಿಷೇಧಿಸಲಾಗಿದೆ ಎಂದು ಬಿಜೆಪಿ ಪೋಸ್ಟ್ ಮಾಡಿದ ಈ ಚಿತ್ರ ಸರಣಿಯಲ್ಲಿದೆ. "ಇದನ್ನು ನಿಷೇಧಿಸಲಾಗಿದೆ ಎಂದು ನೀವು ನಂಬಬಹುದೇ?" ಎಂದು ಬಿಜೆಪಿ ಪ್ರಶ್ನಿಸಿದೆ.
|
ಇನ್ನು ತುರ್ತು ಪರಿಸ್ಥಿತಿ ಬಗ್ಗೆ ಟ್ವೀಟ್ ಮಾಡಿರುವ
"1975 ರಲ್ಲಿ ಈ ದಿನ, ಅಧಿಕಾರದ ಸ್ವಾರ್ಥ ಮತ್ತು ದುರಹಂಕಾರದಲ್ಲಿ ಕಾಂಗ್ರೆಸ್ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಕೊಂದಿತು. ಅಸಂಖ್ಯಾತ ಸತ್ಯಾಗ್ರಹಿಗಳನ್ನು ಜೈಲಿನ ಕತ್ತಲಕೋಣೆಯಲ್ಲಿ ರಾತ್ರಿಯಿಡೀ ಕಳೆಯಬೇಕಾದ ಸ್ಥಿತಿ ಬಂದಿತ್ತು. ಮುದ್ರಣಾಲಯಕ್ಕೆ ಬೀಗ ಹಾಕಲಾಗಿತ್ತು. ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡು ಸಂಸತ್ತು ಮತ್ತು ನ್ಯಾಯಾಲಯವನ್ನು ಮೂಕಪ್ರೇಕ್ಷಕರನ್ನಾಗಿ ಮಾಡಿತ್ತು," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. "ತುರ್ತು ಪರಿಸ್ಥಿತಿಯನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಹಂತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ಸರ್ಕಾರ ದಬ್ಬಾಳಿಕೆ ನಡೆಸಿದೆ. ಆಗಾಗ್ಗೆ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪತ್ರಿಕಾ ಮಾಧ್ಯಮಗಳ ಮೇಲೆ ದಮನಕಾರಿ ನೀತಿ ಪಾಲಿಸಲಾಗಿದೆ," ಎಂದು ಕೂಡಾ ಹೇಳಿದ್ದಾರೆ.
ತುರ್ತುಪರಿಸ್ಥಿತಿ ಸಂದರ್ಭದ ಭಾರತ
ಭಾರತದ ಇತಿಹಾಸದಲ್ಲೇ ಕರಾಳ ಅಧ್ಯಾಯವಾಗಿರುವ ತುರ್ತು ಪರಿಸ್ಥಿತಿಯ ಸಂದರ್ಭ ಸರ್ಕಾರವು ಹಲವಾರು ದಮನಕಾರಿ ನೀತಿಗಳನ್ನು ಪಾಲಿಸಿದೆ. ಭಾರತದಲ್ಲಿ ಸುಮಾರು 21 ತಿಂಗಳುಗಳ ಕಾಲ ಹೇರಲಾಗಿದ್ದ ತುರ್ತು ಪರಿಸ್ಥಿತಿ ಸಂದರ್ಭ ಹಲವಾರು ರಾಜಕೀಯ ನಾಯಕರು ಸೆರೆವಾಸ ಅನುಭವಿಸಿದ್ದಾರೆ. ಹಲವಾರು ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಸರ್ಕಾರದ ವಿರುದ್ದ ಪ್ರತಿಭಟಿಸಿದ್ದು, ಆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾದ ಹಲವು ನಾಯಕರು ಲಾಕಪ್ ಡೆತ್ ಆಗಿದ್ದಾರೆ. ಈ ತುರ್ತು ಪರಿಸ್ಥಿತಿ ಆದೇಶವು ಚುನಾವಣೆಗಳನ್ನು ರದ್ದುಗೊಳಿಸಲು ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಅಮಾನತುಗೊಳಿಸಲು ಅವಕಾಶ ಮಾಡಿಕೊಟ್ಟಿತ್ತು. ಇಂಧಿರಾ ಗಾಂಧಿಯ ರಾಜಕೀಯ ವಿರೋಧಿಗಳಲ್ಲಿ ಹೆಚ್ಚಿನವರನ್ನು ಆ ಕಾಲಘಟ್ಟದಲ್ಲಿ ಜೈಲಿನಲ್ಲಿಡಲಾಗಿತ್ತು. ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೃಷಿ ಮತ್ತು ಕೈಗಾರಿಕಾ ಉತ್ಪಾದನೆ, ಸಾರ್ವಜನಿಕ ಸೇವೆಯ ಅಭಿವೃದ್ದಿ,ಅನಕ್ಷರತೆ ಮತ್ತು ಬಡತನದ ನಿವಾರಣೆಗಾಗಿ ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು.