ಮಳೆ- ಚಂಡಮಾರುತದ ಜುಗಲ್ ಬಂದಿಗೆ ತತ್ತರಿಸಿದ ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಚಂಡಮಾರುತಕ್ಕೆ ಜನರು ತತ್ತರಿಸಿದ್ದಾರೆ. ಮನೆಗಳು ಹಾನಿಯಾಗಿವೆ. ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಮೊಬೈಲ್ ಸೇವೆ ಕೂಡ ನಿಂತುಹೋಗಿದೆ
ಇಟಾನಗರ, ಮೇ 17: ಮಳೆ ಹಾಗೂ ಚಂಡಮಾರುತದ ಜುಗಲ್ ಬಂದಿಗೆ ಅರುಣಾಚಲ ಪ್ರದೇಶದಲ್ಲಿ ಒಬ್ಬರು ಮೃತಪಟ್ಟು, ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ನಮ್ಸಾಯ್ ಜಿಲ್ಲೆಯ ನ್ಯೂ ಮೊಹೊಂಗ್ ಪ್ರದೇಶದ ಖೊನಿಲ್ ಗೊಗೊಯ್ ಕಟ್ಟಡ ಕುಸಿದು ಗಾಯಗೊಂಡಿದ್ದವರು ಮೃತಪಟ್ಟಿದ್ದಾರೆ. ಸುಮಾರು ತೊಂಬತ್ತು ನಿಮಿಷದ ಅವಧಿಯಲ್ಲಿ ನೂರೆಂಬತ್ತು ಮನೆಗಳು ಸಂಪೂರ್ಣ ನಾಶವಾಗಿವೆ. ಹಲವು ಮನೆಗಳು ಭಾಗಶಃ ಹಾನಿಯಾಗಿವೆ.
ಹಲವು ಮರಗಳು ಧರೆಗುರುಳಿವೆ. ಜಾನುವಾರುಗಳ ಕೊಟ್ಟಿಗೆ-ದೊಡ್ಡಿಗಳಿಗೆ ಹಾನಿಯಾಗಿವೆ. ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಮರಗಳು ನೆಲಕ್ಕೆ ಉರುಳಿದ್ದರಿಂದ ಹಲವು ಹಳ್ಳಿಗಳ ಮಧ್ಯೆ ಸಂಪರ್ಕವೇ ಇಲ್ಲದಂತಾಗಿದೆ. ರಸ್ತೆ ಸಂಚಾರಕ್ಕೆ ಆಗಿರುವ ತಡೆ ನಿವಾರಿಸುವಲ್ಲಿ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ನಿರತವಾಗಿದೆ. ಉಪಮುಖ್ಯಮಂತ್ರಿ ಚೌನಾ ಮೇನ್ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.[ಮೇ 29ರಂದು ಕರ್ನಾಟಕಕ್ಕೆ ಮುಂಗಾರಿನ ಆಗಮನ]

ತಕ್ಷಣವೇ ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆಗೆ ಪಶ್ಚಿಮ ಕಮೆಂಗ್ ಜಿಲ್ಲೆಯ ದಿರಾಂಗ್ ನಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಇದರಿಂದ ಸ್ಥಳೀಯ ಶಾಸಕ ಫುರ್ಪ ತ್ಸೆರಿಂಗ್ ಮನೆ ಭಾಗಶಃ ಹಾನಿಯಾಗಿದೆ. ಬಿಎಸ್ ಎನ್ ಎಲ್ ಕಚೇರಿ ಹಾನಿಯಾಗಿದ್ದು, ಮೊಬೈಲ್ ಸೇವೆ ವ್ಯತ್ಯಯವಾಗಿದೆ. ವಿದ್ಯುತ್ -ನೀರಿನ ಸಂಪರ್ಕ, ರಸ್ತೆ ಸಂಪರ್ಕ ಮತ್ತೆ ಮೊದಲಿನಂತೆ ಆಗಲು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.












Click it and Unblock the Notifications