ತೌಕ್ತೆ ಚಂಡಮಾರುತ: ಹಲವು ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಭಾರೀ ಪ್ರಮಾಣದಲ್ಲಿ ಅಬ್ಬರಿಸಿ ಸಾಕಷ್ಟು ಆತಂಕ ಸೃಷ್ಟಿಸಿದ್ದ ತೌಕ್ತೆ ಚಂಡಮಾರುತ ದುರ್ಬಲವಾಗಿದೆ. "ಚಂಡಮಾರುತದ ಕನಿಷ್ಟ ಸ್ಥಿತಿಯಾದ 'ಡಿಪ್ರೆಶನ್' ಹಂತಕ್ಕೆ ತೌಕ್ತೆ ಚಂಡಮಾರುತ ದುರ್ಬಲವಾಗಿದೆ, ಬುಧವಾರ ಬೆಳಗ್ಗೆ ದಕ್ಷಿಣ ರಾಜಸ್ಥಾನ ಹಾಗೂ ಗುಜರಾತ್ ಗಡಿಭಾಗವನ್ನು ಕೇಂದ್ರೀಕರಿಸಿದೆ" ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುಜರಾತ್ನಲ್ಲಿ ಇದರ ಪರಿಣಾಮವಾಗಿ ಮಳೆ ಮುಂದುವರಿದಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ತೌಕ್ತೆ; ಭಟ್ಕಳ, ಅಂಕೋಲಾದಲ್ಲಿ ಹಾನಿ ಪರಿಶೀಲಿಸಿದ ಸಚಿವರು
ಬುಧವಾರ ಮುಂಜಾನೆ ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ನಲ್ಲಿ ಮತ್ತಷ್ಟು ವಿವರಗಳನ್ನು ನೀಡಿದೆ. ರಾಜಸ್ಥಾನದ ಉದಯಪುರಕ್ಕಿಂತ ಪಶ್ಚಿಮ ನೈಋತ್ಯ ಭಾಗದಿಂದ 60 ಕಿ.ಮೀ ದೂರದಲ್ಲಿ ಮತ್ತು ಗುಜರಾತ್ನ ದೀಸಾ ಭಾಗಕ್ಕಿಂತ 110 ಕಿ.ಮೀ ದೂರದಲ್ಲಿ 'ಡಿಪ್ರಶನ್' ಹಂತಕ್ಕೆ ಈ ಚಂಡಮಾರುತ ದುರ್ಬಲಗೊಂಡಿದೆ ಎಂದು ವಿವರಿಸಲಾಗಿದೆ.
ಇದೇ ಸ್ಥಿತಿಯಲ್ಲಿ ಮುಂದಿನ ಎರಡು ದಿನಗಳಲ್ಲಿ ರಾಜಸ್ಥಾನದಿಂದ ಪಶ್ಚಿಮ ಉತ್ತರ ಪ್ರದೇಶಕ್ಕೆ ಚಲಿಸುವ ಸಾಧ್ಯತೆಯಿದೆ. ಹೀಗಾಗಿ ಪೂರ್ವ ರಾಜಸ್ಥಾನದ ಒಳಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಬುಧವಾರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಮುಂದಿನ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಡ್, ದೆಹಲಿ, ಪಶ್ಚಿಮ ಉತ್ತರ ಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.