ಅಂಫಾನ್ ಚಂಡಮಾರುತ ಭೀತಿಯಲ್ಲಿ ಕರಾವಳಿ ಪ್ರದೇಶದ ಜನ ಶಿಫ್ಟ್!
ನವದೆಹಲಿ, ಮೇ.19: ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಅಂಫಾನ್ ಚಂಡ ಮಾರುತವು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾದ ಕರಾವಳಿ ಪ್ರದೇಶದಲ್ಲಿನ 11 ಲಕ್ಷ ಜನರನ್ನು ಸರ್ಕಾರವೇ ಸ್ಥಳಾಂತರಿಸಿದೆ.
ಸೋಮವಾರ ರಾತ್ರಿ 11.30ರ ವೇಳೆಗೆ ಅಂಫಾನ್ ಚಂಡ ಮಾರುತವು ಒಡಿಶಾದ ಪಾರದೀಪ್ ನಿಂದ ದಕ್ಷಿಣಕ್ಕೆ 600 ಕಿ.ಮೀ ಹಾಗೂ ಪಶ್ಚಿಮ ಬಂಗಾಳದ ದಿಘಾ ನೈಋತ್ಯ ದಿಕ್ಕಿನಿಂದ 750 ಕಿಲೋ ಮೀಟರ್ ದೂರದಲ್ಲಿ ಕಾಣಿಸಿಕೊಂಡಿದೆ.
ಮುಂದಿನ 6 ಗಂಟೆಗಳಲ್ಲಿ ತೀವ್ರಗೊಳ್ಳಲಿದೆ 'ಅಂಫಾನ್' ಚಂಡಮಾರುತ
ಮೇ.20ರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಅಂಫಾನ್ ಚಂಡ ಮಾರುತವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಸಮುದ್ರ ತೀರದಿಂದ ಭೂಪ್ರದೇಶವನ್ನು ಪ್ರವೇಶಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಒಡಿಶಾದ ಕರಾವಳಿ ಪ್ರದೇಶದ ಜನರು ಶಿಫ್ಟ್:
ಒಡಿಶಾದಲ್ಲಿ ವಿಶೇಷ ಪರಿಹಾರ ಆಯುಕ್ತರು ಕರಾವಳಿ ಪ್ರದೇಶದ ಜನರ ಸ್ಥಳಾಂತರ ಹಾಗೂ ಬೇರೆಡೆಗೆ ತಾತ್ಕಾಲಿಕ ಸೂರು ಕಲ್ಪಿಸಿಕೊಂಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬಾಲಸೋರ್, ಭದ್ರಕ್, ಕೇಂದ್ರಪಾದ್, ಜಗತ್ ಸಿಂಗ್ ಪುರ್, ಪುರಿ, ಖೋದ್ರಾ, ಕಟ್ಟಕ್, ಜಜ್ಪುರ್, ಮಯೂರ್ ಬಂಜ್ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಅಂಫಾಲ್ ಚಂಡಮಾರುತದ ಭೀತಿ ಹಿನ್ನೆಲೆ ಕರಾವಳಿ ಜನರನ್ನು ಸ್ಥಳಾಂತರಿಸುವುದರ ಜೊತೆಗೆ ಕೊರೊನಾ ವೈರಸ್ ಸೋಂಕು ಹರಡುವಿಕೆ ಬಗ್ಗೆಯೂ ನಿಗಾ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಜನರ ಸ್ಥಳಾಂತರ:
ಪಶ್ಚಿಮ ಬಂಗಾಳದ ಸುಂದರ್ ಬನ್ಸ್ ಮತ್ತು ದಿಘಾ ಕರಾವಳಿ ಪ್ರದೇಶದಲ್ಲಿ ವಾಸವಿದ್ದ ಜನರನ್ನು ಈಗಾಗಲೇ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಅಂಫಾನ್ ಚಂಡಮಾರುತದ ಬಗ್ಗೆ ಜನರಿಗೆ ಮಾಹಿತಿ ನೀಡುವುದಕ್ಕಾಗಿ ವಿಶೇಷ ಮಾಹಿತಿ ಕೇಂದ್ರಗಳನ್ನು ಕೂಡಾ ತೆರೆಯಲಾಗಿದೆ.