ಬಿಜೆಪಿ Vs ಕಾಂಗ್ರೆಸ್ 'ಸೈಬರ್ ಯುದ್ದ': ದಿನದಿಂದ ದಿನಕ್ಕೆ ಯಾರಿಗೆ ಮೇಲುಗೈ
Recommended Video

ರಾಜಕೀಯವಾಗಿ ಒಬ್ಬರನ್ನು ಹೊಗಳಲು, ಇನ್ನೊಬ್ಬರನ್ನು ತೆಗಳಲು, ಸಾಮಾಜಿಕ ಜಾಲತಾಣ ಅತ್ಯಂತ ಪ್ರಮುಖ ವೇದಿಕೆಯಾಗಿ ರೂಪುಗೊಂಡಾಗಿ ಹೋಗಿದೆ. ನಮ್ಮ ಸಾಧನೆ ಅಪಾರ, ಇನ್ನೊಬ್ಬರ ಸಾಧನೆ ಶೂನ್ಯ ಎನ್ನುವುದನ್ನು ವ್ಯವಸ್ಥಿತವಾಗಿ ಜನರ ಮುಂದೆ ತಲುಪಿಸಲು ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಪೈಪೋಟಿಯಲ್ಲಿದೆ. ಜೊತೆಗೆ, ಎರಡೂ ರಾಷ್ಟ್ರೀಯ ಪಕ್ಷಗಳ ಸಾಮಾಜಿಕ ತಾಣದ ಮುಖ್ಯಸ್ಥರು ಭಾರೀ ಹುಮ್ಮಸ್ಸಿನವರು ಬೇರೆ.
ಬಿಜೆಪಿಯ ಅಮಿತ್ ಮಾಳವೀಯ ಹಗಲಿರುಳು ದುಡಿದು ಪ್ರಧಾನಿ ಮೋದಿಯ ಚರಿಸ್ಮಾ ಮತ್ತು ಪಕ್ಷದ ವರ್ಚಸ್ಸನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವುದು ಒಂದೆಡೆಯಾದರೆ, ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಪಕ್ಷವನ್ನು ಮತ್ತೆ ದಡ ತಲುಪಿಸಲು ಮಂಡ್ಯ ಕಡೆ ತಲೆಹಾಕದೆ ಕೆಲಸ ಮಾಡುತ್ತಿರುವುದು ಇನ್ನೊಂದೆಡೆ.
ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಅತ್ಯಂತ ನಿರ್ಣಾಯಕವಾಗಿರುವ ನಾಲ್ಕು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಹೊಸ್ತಿಲಲ್ಲಿ, ಎರಡೂ ಪಕ್ಷಗಳ ಸಾಮಾಜಿಕ ಜಾಲತಾಣದ ಕಟ್ಟಾಳುಗಳು ಯುದ್ದಕ್ಕೆ ಹೊರಟಂತೆ ಕೆಲಸ ಮಾಡುತ್ತಾ, ಕೆಲವೊಮ್ಮೆ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ.
ಪ್ರಮುಖವಾಗಿ ಮಧ್ಯಪ್ರದೇಶದಲ್ಲಿ ಯಾವಮಟ್ಟಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಂತರ್ಜಾಲದಲ್ಲಿ ಪೈಪೋಟಿ ನಡೆಯುತ್ತಿದೆ ಎಂದರೆ, 'ಬಿಜೆಪಿಯ ಸೈಬರ್ ಯೋಧ ವರ್ಸಸ್ ಕಾಂಗ್ರೆಸ್ಸಿನ ರಾಜೀವ್ ಗಾಂಧಿ ಸಿಪಾಯಿ' ಎಂದು ನಾಮಕರಣ ಮಾಡಿಕೊಂಡು, ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ಆಡಳಿತದ ಪರ, ವಿರೋಧದ ಕಾಮೆಂಟುಗಳನ್ನು ಹಿಂದೆ ಮುಂದೆ ನೋಡದೇ ಪೋಸ್ಟ್ ಹಾಕುವಲ್ಲಿ ಒಬ್ಬರಿಗೊಬ್ಬರು ಮೀರಿಸುವಂತೆ ಕೆಲಸ ಮಾಡುತ್ತಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ಎಷ್ಟರ ಮಟ್ಟಿಗೆ ಕಾರ್ಯನಿರತವಾಗಿದೆಯೆಂದರೆ, ಜಿಲ್ಲಾ ಮಟ್ಟದಲ್ಲಿ ನಡೆಯುವ ರಾಜಕೀಯವನ್ನು ಪ್ರಮುಖ ವಿಷಯವನ್ನಾಗಿ ಬಿಂಬಿಸುತ್ತಾ, ಒಬ್ಬರು ಇನ್ನೊಬ್ಬರನ್ನು ಟೀಕಿಸುವುದರಲ್ಲೇ ನಿರತರಾಗಿರುತ್ತಾರೆಯೇ ಹೊರತು, ವಾಸ್ತವಿಕ ಅಂಶಗಳು ಇವರಿಗೆ ಅಷ್ಟೊಂದು ಅವಶ್ಯಕತೆಯಾಗಿ ಕಾಣಿಸದೇ ಇರುವುದು. ಪ್ರತೀ ರಾಜ್ಯದ ಸಾಮಾಜಿಕಜಾಲ ತಾಣದ ಮುಖ್ಯಸ್ಥರು ನೇರವಾಗಿ ವರದಿ ಒಪ್ಪಿಸಬೇಕಾಗಿರುವುದು ಮಾಳವೀಯ ಮತ್ತು ರಮ್ಯಾಗೆ. ಮುಂದಿದೆ ಅಂಕಿಅಂಶ,

ಫೋಟೋಶಾಪ್ ಯಾಕೆ ಬೇಕೇಬೇಕು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ
ಸಾಮಾಜಿಕ ತಾಣದಲ್ಲಿ ಯಾವುದು ಜನರನ್ನು ಆಕರ್ಷಿಸುತ್ತದೆ, ಯಾವ ವಿಚಾರ ಹಾಕಿದರೆ ಟ್ರೆಂಡ್ ಆಗುತ್ತೆ ಎನ್ನುವ ಅರಿವಿರುವ ಯುವಕರನ್ನು ಪ್ರತೀ ಜಿಲ್ಲೆಗೆ ಹನ್ನೊಂದು ಜನರಂತೆ (ಮಧ್ಯಪ್ರದೇಶ ಒಂದರಲ್ಲೇ) ಎರಡೂ ಪಕ್ಷಗಳು ಈಗಾಗಲೇ ನೇಮಕ ಮಾಡಿಕೊಂಡಿವೆ. ಅತ್ಯಂತ ಆಕರ್ಷಕ ಸಂಬಳ ನೀಡುವ ಎರಡೂ ಪಕ್ಷಗಳು, ಫೋಟೋಶಾಪ್ ಅನುಭವ ಇರುವವರನ್ನೇ ಈ ಹುದ್ದೆಗೆ ಆಯ್ಕೆ ಮಾಡುತ್ತವೆ. ಪ್ರತೀ ಜಿಲ್ಲೆಗೆ ಇವರಿಗೆಲ್ಲರಿಗೂ ಒಬ್ಬರು ಲೀಡರ್, ಅವರು ರಾಜ್ಯದ ಸಾಮಾಜಿಕ ತಾಣದ ಮುಖ್ಯಸ್ಥರಿಗೆ, ಇವರು ನೇರವಾಗಿ ದೆಹಲಿಗೆ ರಿಪೋರ್ಟ್ ಮಾಡುವಂತಹ ಕಾರ್ಯವೈಖರಿಯನ್ನು ಸದ್ಯದ ಮಟ್ಟಿಗೆ ಹೊಂದಿದ್ದಾರೆ. ಫೋಟೋಶಾಪ್ ಯಾಕೆ ಬೇಕೇಬೇಕು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

65 ಸಾವಿರ ಬಿಸಿರಕ್ತದವರನ್ನು ನೇಮಕಮಾಡಿಕೊಂಡಾಗಿದೆ
ಇನ್ನೊಂದು ಮಾಹಿತಿಯ ಪ್ರಕಾರ, ರಾಜೀವ್ ಕಿ ಸಿಪಾಯಿ ಸೈಬರ್ ತಂಡವನ್ನು ಎದುರಿಸಲು, ಬಿಜೆಪಿ ಈಗಾಗಲೇ 65 ಸಾವಿರ ಬಿಸಿರಕ್ತದವರನ್ನು ನೇಮಕಮಾಡಿಕೊಂಡಾಗಿದೆ. ಇನ್ನೂ ಐದು ಸಾವಿರ ಯುವಕರನ್ನು ಚುನಾವಣೆಗೆ ಒಂದು ತಿಂಗಳು ಹತ್ತಿರ ಇರುವಾಗ ನೇಮಕ ಮಾಡಿಕೊಳ್ಳಲಿದ್ದೇವೆ ಎನ್ನುವ ಮಾಹಿತಿಯನ್ನು ನೀಡುತ್ತಾರೆ, ಮಧ್ಯಪ್ರದೇಶ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಶಿವರಾಜ್ ಸಿಂಗ್ ದಬಿ.

ಕಾಂಗ್ರೆಸ್ ನಾಲ್ಕು ಸಾವಿರ ಸೈಬರ್ ಯೋಧರನ್ನು ನೇಮಕ ಮಾಡಿಕೊಂಡಿದೆ
ಇತ್ತ ಕಾಂಗ್ರೆಸ್ ನಾಲ್ಕು ಸಾವಿರ ಸೈಬರ್ ಯೋಧರನ್ನು ನೇಮಕ ಮಾಡಿಕೊಂಡಿದೆ. ಇನ್ನೂ ಐದು ಸಾವಿರ ಯುವಕರನ್ನು ನೇಮಕ ಮಾಡಿಕೊಳ್ಳಲಿದೆ. ಫೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸಾಪ್ ಮೂಲಕ, ಕಾಂಗ್ರೆಸ್ಸಿನ ಧ್ಯೇಯೋದ್ದೇಶವನ್ನು ತಲುಪಿಸುವ ಕೆಲಸವನ್ನು ಇವರು ಮಾಡಲಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ನಮ್ಮ ದೊಡ್ಡ ಅಸ್ತ್ರವೆಂದರೆ ಅದು ವಾಟ್ಸಾಪ್, ಅದನ್ನು ಇನ್ನೂ ಹೇಗೆ ಪ್ರಬಲವಾಗಿ ಬಳಸಬಹುದು ಎನ್ನುವುದಕ್ಕೆ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಐಟಿ ಘಟಕದ ಮುಖ್ಯಸ್ಥ ಧರ್ಮೇಂದ್ರ ಬಾಜಪೇಯಿ ಹೇಳಿದ್ದಾರೆ.

ಆಗಿಂದಾಗಲೇ ಜನರಿಗೆ ತಲುಪಿಸುವ ಕೆಲಸ
ರಾಜಸ್ಥಾನ, ಛತ್ತೀಸಗಢದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಇದೇ ಕಾರ್ಯತಂತ್ರವನ್ನು ಬಳಸಿಕೊಳ್ಳುತ್ತಿದೆ. ಪ್ರಮುಖವಾಗಿ, ರಾಷ್ಟ್ರೀಯ ನಾಯಕರ ಸಾರ್ವಜನಿಕ ಸಭೆಯ ದಿನಾಂಕದ ಬಗ್ಗೆ ಮುಂಚಿತವಾಗಿಯೇ ಜನರಿಗೆ ಮಾಹಿತಿ ನೀಡಿ, ಸಭೆಯನ್ನು ಯಶಸ್ವಿಗೊಳಿಸುವ ಮತ್ತು ಸಭೆಯಲ್ಲಿನ ಭಾಷಣದ ಪ್ರಮುಖಾಂಶವನ್ನು ಆಗಿಂದಾಗಲೇ ಜನರಿಗೆ ತಲುಪಿಸುವ ಕೆಲಸವನ್ನು ಎರಡೂ ರಾಷ್ಟ್ರೀಯ ಪಕ್ಷಗಳ ಸೈಬರ್ ತಂಡಗಳು ಮಾಡುತ್ತಿವೆ.

ಬಿಜೆಪಿ ಮತ್ತು ಟಿಎಂಸಿ ನಡುವೆ ಸೈಬರ್ ವಾರ್
ಪಶ್ಚಿಮ ಬಂಗಾಳದಲ್ಲಿ ಸದ್ಯ ಅಸೆಂಬ್ಲಿ ಚುನಾವಣೆ ಇಲ್ಲದಿದ್ದರೂ, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ, ಬಿಜೆಪಿ ಮತ್ತು ಟಿಎಂಸಿ ನಡುವೆ ಸೈಬರ್ ವಾರ್ ಆರಂಭವಾಗಿದೆ. ಸಾಮಾಜಿಕ ತಾಣ ಬಳಕೆಯಲ್ಲಿ ಹಿಂದಿರುವ ಮಮತಾ ಬ್ಯಾನರ್ಜಿ ಎಂಡ್ ಟೀಂ, ಡಿಜಿಟಲ್ ಕಲ್ಕೇವ್ ಇತ್ತೀಚೆಗೆ ನಡೆಸಿ, ಸಾಮಾಜಿಕ ತಾಣದ ಬಳಕೆಯ ಜವಾಬ್ದಾರಿಯನ್ನು ಮಮತಾ, ತನ್ನ ಸೋದರಳಿಯ ಮತ್ತು ಯುವ ಮುಖಂಡ ಅಭಿಶೇಕ್ ಬ್ಯಾನರ್ಜಿಗೆ ವಹಿಸಿದ್ದಾರೆ.

ಅಮಿತ್ ಮಾಳವೀಯ ಮತ್ತು ದಿವ್ಯ
ಅಮಿತ್ ಮಾಳವೀಯ ಮತ್ತು ದಿವ್ಯ ನಡುವಿನ ಸೈಬರ್ ಸಮರದಲ್ಲಿ ದಿವ್ಯ ಮುಂದಿದ್ದಾರೆಂದು ನಿರೀಕ್ಷೆಯಂತೆ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಸೈಬರ್ ವಾರ್ ರೂಂನಲ್ಲಿರುವ ಯುವಕರ ಸಂಖ್ಯೆಯನ್ನು ನೋಡಿ ಹೇಳುವುದಾದರೆ, ಬಿಜೆಪಿ ಕಾಂಗ್ರೆಸ್ಸಿಗಿಂತ ಭಾರೀ ಮುಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಸಾಮಾಜಿಕ ಜಾಲತಾಣ ಬಳಕೆಯ ವಿಚಾರದಲ್ಲಿ ತೀವ್ರ ಪೈಪೋಟಿ ನೀಡುತ್ತಿದೆ. ರಮ್ಯಾ, ಇದರ ಉಸ್ತುವಾರಿ ವಹಿಸಿಕೊಂಡ ನಂತರ, ಕಾಂಗ್ರೆಸ್ಸಿನ ಐಟಿ ವಿಂಗ್ ಬಲಾಢ್ಯಗೊಳ್ಳುತ್ತಿರುವುದು ಸ್ಪಷ್ಟ.












Click it and Unblock the Notifications