ನೋಟು ನಿಷೇಧ : ಹುಂಡಿಯಲ್ಲಿ ಬೀಳುತ್ತಿರುವುದು ಯಾರಪ್ಪನ ದುಡ್ಡು?
ಐನೂರು, ಸಾವಿರ ರೂಪಾಯಿ ನೋಟು ಬ್ಯಾನ್ ಆದ ನಂತರ ದೇವಾಲಯದ ಹುಂಡಿಯ ಕಲೆಕ್ಷನ್ ಒಂದೇ ಸಮನೆ ಏರುತ್ತಿದೆ.
ಐನೂರು, ಸಾವಿರ ರೂಪಾಯಿ ನೋಟು ಬ್ಯಾನ್ ಆದ ನಂತರ ದೇವಾಲಯದ ಹುಂಡಿಯ ಕಲೆಕ್ಷನ್ ಒಂದೇ ಸಮನೆ ಏರುತ್ತಿದೆ. ಅದ್ಯಾಕೆ ಕಾರ್ತಿಕ ಮಾಸದಲ್ಲಿ ಜನರಿಗೆ ದೇವರ ಮೇಲೆ ಭಯಭಕ್ತಿ ಹೆಚ್ಚಾಗುತ್ತಿದೆಯೋ ಎನ್ನುವುದಕ್ಕಿಂತ 'ಮೋದಿ ಎಫೆಕ್ಟ್'ಎನ್ನುವುದೇ ಸೂಕ್ತ.
ಭಕ್ತರು ಏನು ಕೊಟ್ಟರೂ ದೇವರು ಸ್ವೀಕರಿಸುತ್ತಾನಂತೆ, ಆದರೆ ಇಂತಹ ದುಡ್ಡು ನಮಗೆ ಬೇಡವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ರಾಜ್ಯದ ದೇವರ ಖಾತೆಯ ಸಚಿವ ರುದ್ರಪ್ಪ ಲಮಾಣಿ. (100ರ ನಕಲಿ ನೋಟು ಮುದ್ರಿಸಲು ದಾವೂದ್ ಆಲೋಚನೆ)
ಉತ್ತರಪ್ರದೇಶದ ಕೆಲವು ಕಡೆ ದುಡ್ಡನ್ನು ಭಸ್ಮ ಮಾಡಲಾಗುತ್ತಿದೆ ಎನ್ನುವ ಸುದ್ದಿ ಒಂದೆಡೆಯಾದರೆ, ನಮ್ಮ ರಾಜ್ಯದ ದೇಗುಲಗಳ ಹುಂಡಿಯಲ್ಲಿ ಕಂತೆ ಕಂತೆ ದುಡ್ಡು ಬೀಳುತ್ತಿದೆಯಂತೆ, ಅಲ್ಲದೇ ದೇಣಿಗೆ ರೂಪದಲ್ಲಿ ಟ್ರಸ್ಟ್ ಗಳಿಗೆ ಅಪಾರ ಪ್ರಮಾಣದ ಹಣ ಹರಿದುಬರುತ್ತಿದೆ.
ದೇವಸ್ಥಾನದಲ್ಲಿ ಈಗ ಬೀಳುತ್ತಿರುವ ದುಡ್ಡುಗಳು ಪಾಪದ ಹಣಗಳು, ಆ ಪಾಪದ ದುಡ್ಡು ನಮಗೆ ಬೇಕಾಗಿಲ್ಲ ಮತ್ತು ನಾವು ಪಾಪ ಕಟ್ಟಿಕೊಳ್ಳಲು ಸಿದ್ದರಿಲ್ಲ ಎನ್ನುವುದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿಯವರ ಖಡಕ್ ನಿರ್ಧಾರ.
ಮಂಗಳವಾರ (ನ 8) ಪ್ರಧಾನಿ ಘೋಷಿಸಿದ ಐತಿಹಾಸಿಕ ನಿರ್ಧಾರದ ನಂತರ, ಹಣ ಹೊಂದಿಸಿಕೊಳ್ಳಲು ಸಾರ್ವಜನಿಕರು ಸಾಕಷ್ಟು ಪರದಾಡುತ್ತಿದ್ದರೂ ಒಟ್ಟಾರೆಯಾಗಿ ಮೋದಿ ಜನಪ್ರಿಯತೆ ಗಗನಕ್ಕೇರುತ್ತಿದೆ.
ನೋಟು ನಿಷೇಧದ ನಂತರ ಕೆಲವೊಂದು ಅಪ್ಡೇಟ್ ಗಳು ನಮ್ಮ ಓದುಗರಿಗಾಗಿ, ಮುಂದೆ ಓದಿ..
ಗೃಹಸಾಲದ ಬಡ್ಡಿ
ಭಾರೀ ಪ್ರಮಾಣದಲ್ಲಿ 500,1000 ರೂಪಾಯಿ ನೋಟುಗಳು ಬ್ಯಾಂಕುಗಳಲ್ಲಿ ಜಮಾವಣೆ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಭೂಮಿ ಬೆಲೆಯಲ್ಲಿ ಇಳಿಕೆ ಮತ್ತು ಗೃಹ ಸಾಲದ ಬಡ್ಡಿ ಕಮ್ಮಿಯಾಗುವ ಸಾಧ್ಯತೆಯಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.
ಸಿದ್ದರಾಮಯ್ಯಗೆ ಜೇಟ್ಲಿ ಕರೆ
ನೋಟು ಬ್ಯಾನ್ ಆದ ನಂತರ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಸಹಕಾರ ನೀಡುವಂತೆ ಪ್ರಧಾನಿ ಪತ್ರ ಬರೆದಿದ್ದಾರೆ. ಜೊತೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸಿಎಂ ಸಿದ್ದರಾಮಯ್ಯನವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ, ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಸಿದ್ದರಾಮಯ್ಯ ವಿತ್ತ ಸಚಿವರಿಗೆ ಹೇಳಿದ್ದಾರೆ ಎನ್ನುವ ಸುದ್ದಿಯಿದೆ.
ದಾನಿಗಳ ಹೆಸರು ಗೌಪ್ಯ
ಹುಂಡಿಗೆ ಅಪಾರ ಪ್ರಮಾಣದಲ್ಲಿ ದುಡ್ಡು ಬೀಳುತ್ತಿರುವುದು ಒಂದೆಡೆಯಾದರೆ, ದೇಣಿಗೆಯೂ ಹರಿದು ಬರುತ್ತಿದೆ. ಮಹಾರಾಷ್ಟ್ರದ ದೇವಾಲಯಗಳಲ್ಲಿ ದಾನಿಗಳ ಹೆಸರನ್ನು ದೇವಾಲಯದ ಆಡಳಿತ ಮಂಡಳಿ ಬಹಿರಂಗಗೊಳಿಸದೇ, ಬೇರೊಬ್ಬರ ಹೆಸರಲ್ಲಿ ರಸೀದಿ ನೀಡುತ್ತಿದ್ದಾರೆ.
ಎಟಿಎಂ ಶುಲ್ಕವಿಲ್ಲ
ಡಿಸೆಂಬರ್ 31,2016ರ ವರೆಗೆ ಎಟಿಎಂ ಬಳಕೆ ಶುಲ್ಕವನ್ನು ಬ್ಯಾಂಕುಗಳು ರದ್ದುಗೊಳಿಸಿವೆ. ಬೇರೆ ಬ್ಯಾಂಕಿನ ಎಟಿಎಂ ನಿಂದ ನಾಲ್ಕು ಬಾರಿ ಹಣ ತೆಗೆದರೆ ಶುಲ್ಕ ವಿಧಿಸಲಾಗುತ್ತಿತ್ತು.
ಅನಗತ್ಯ ರಜೆ ತೆಗೆದುಕೊಳ್ಳಬೇಡಿ
ಇದೇ ಶನಿವಾರ ಮತ್ತು ಭಾನುವಾರ (ನ 12, 13) ಬ್ಯಾಂಕುಗಳಲ್ಲಿ ರಾತ್ರಿ ಒಂಬತ್ತು ಗಂಟೆಯವರೆಗೆ ಸೇವೆ ನೀಡಲು ಸೂಚನೆ ನೀಡಲಾಗಿದೆ. ಜೊತೆಗೆ ವರ್ಷಾಂತ್ಯದವರೆಗೆ ತೀರಾ ಎಮರ್ಜೆನ್ಸಿ ಇದ್ದರೆ ಮಾತ್ರ ರಜೆ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.
ಬೆಂಗಳೂರು ಜಲಮಂಡಳಿ
ಬ್ಯಾನ್ ಆಗಿರುವ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳನ್ನು ಇಂದು ಒಂದು ದಿನಕ್ಕೆ (ನ 11) ಅನ್ವಯವಾಗುವಂತೆ ಮಾತ್ರ ಬೆಂಗಳೂರು ಜಲಮಂಡಳಿಯ ಎಲ್ಲಾ ಶಾಖೆಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದು BWSSB ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನಷ್ಟು ದಿನ ಪರದಾಟ ತಪ್ಪಿದ್ದಲ್ಲ
ಎಟಿಎಂ ಶುಕ್ರವಾರ ತೆರೆಯುತ್ತದೆ ಎಂದು ಹೇಳಿದ್ದರೂ, ಬಹುತೇಕ ಎಟಿಎಂಗಳು ಇನ್ನೂ ಕಾರ್ಯನಿರ್ವಹಿಸಲು ಆರಂಭಿಸಿಲ್ಲ. ಎಟಿಎಂ ವ್ಯವಸ್ಥೆ ಸರಿದಾರಿಗೆ ಬರಲು ಇನ್ನು ಹತ್ತು ದಿನ ತಗಲುವ ಸಾಧ್ಯತೆ ಇರುವುದರಿಂದ ಜನರು ಪರದಾಟ ಸದ್ಯಕ್ಕೆ ತಪ್ಪಿದ್ದಲ್ಲ.
ಮುಜರಾಯಿ ಸಚಿವ ರುದ್ರಪ್ಪ ಲಮಾಣಿ
ದೇವಾಲಯದ ಕಲೆಕ್ಷನ್ ಜೋರಾಗಿದೆ. ಇಂತಹ ಪಾಪದ ದುಡ್ಡಿನಿಂದ ದೇವಸ್ಥಾನ ನಡೆಸಿದ ಪಾಪ ನಮಗೆ ಬೇಕಾಗಿಲ್ಲ. ಈ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು - ರುದ್ರಪ್ಪ ಲಮಾಣಿ.