ಅಕ್ಟೋಬರ್ ಅಪಾಯ: ಭಾರತದಲ್ಲಿ ಪ್ರತಿನಿತ್ಯ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾವೈರಸ್!
ನವದೆಹಲಿ, ಆಗಸ್ಟ್ 2: ಭಾರತದಲ್ಲಿ ತಗ್ಗಿದ್ದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೆ ಹಿಗ್ಗುತ್ತಿದೆ. ದೇಶದಲ್ಲಿ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ಪ್ರಸ್ತುತ ಕಡಿಮೆ ಮಟ್ಟದಲ್ಲಿದ್ದರೂ, ಅಕ್ಟೋಬರ್ ವೇಳೆಗೆ ಹೆಚ್ಚಾಗುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ.
"ಆಗಸ್ಟ್ ತಿಂಗಳ ಆರಂಭದಿಂದಲೇ ಕೊವಿಡ್-19 ಸೋಂಕಿನ ತೀವ್ರತೆ ಹೆಚ್ಚಾಗಲಿದ್ದು, ಮುಂದಿನ ತಿಂಗಳ ಹೊತ್ತಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಅಪಾಯವಿದೆ. ಪ್ರತಿನಿತ್ಯ 1 ಲಕ್ಷದಿಂದ 1.50 ಲಕ್ಷ ಹೊಸ ಸೋಂಕಿತ ಪ್ರಕರಣಗಳು ವರದಿಯಾಗುವ ನಿರೀಕ್ಷೆಯಿದೆ," ಎಂದು ಹೈದ್ರಾಬಾದ್ ಮೂಲದ ಭಾರತೀಯ ತಾಂತ್ರಿಕ ಸಂಸ್ಥೆ ಸಂಶೋಧಕ ಮಥುಕುಮಲ್ಲಿ ವಿದ್ಯಾಸಾಗರ್ ಮತ್ತು ಕಾನ್ಪುರ್ ಭಾರತೀಯ ತಾಂತ್ರಿಕ ಸಂಸ್ಥೆಯ ಸಂಶೋಧಕ ಮಣೀಂದ್ರ ಅಗರ್ವಾಲ್ ಅಂದಾಜಿಸಿದ್ದಾರೆ.
60 ವರ್ಷ ಮೇಲ್ಪಟ್ಟವರಲ್ಲಿ ಕೊವಿಶೀಲ್ಡ್ ಪರಿಣಾಮ ಎಷ್ಟು ವಾರ ಇರುತ್ತೆ!?
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಕೊರೊನಾವೈರ್ ಸೋಂಕಿತ ಪ್ರಕರಣಗಳು ಮತ್ತು ಪ್ರಮಾಣ ದಾಖಲಾಗಲಿದೆ ಎಂದು ವಿದ್ಯಾಸಾಗರ್ ಎಚ್ಚರಿಸಿದ್ದಾರೆ. ಕೊವಿಡ್-19 ಮೂರನೇ ಅಲೆಯು ಎರಡನೇ ಅಲೆಗಿಂತ ಚಿಕ್ಕದಾಗಿರುವ ಸಾಧ್ಯತೆಯಿರುತ್ತದೆ. ಎರಡನೇ ಅಲೆಯು ಮೇ 7ರ ಹೊತ್ತಿಗೆ ಪ್ರತಿನಿತ್ಯ 4 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳನ್ನು ವರದಿ ಮಾಡುತ್ತಿದ್ದು, ನಂತರದಲ್ಲಿ ಇಳಿಮುಖವಾಯಿತು. ಆದರೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ಮೂನ್ಸೂಚನೆ ಭವಿಷ್ಯಕ್ಕೆ ನೆರವಾಗಲಿದೆ.
ಭಾರತದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನದ ವೇಗ ಹೆಚ್ಚಿಸುವುದು. ಹಾಟ್ಸ್ಪಾಟ್ಗಳನ್ನು ಪತ್ತೆ ಮಾಡುವ ಕಣ್ಗಾವಲು ವಿಧಾನಗಳ ನಿಯೋಜನೆ. ಹೊಸ ರೂಪಾಂತರ ತಳಿಗಳ ಬಗ್ಗೆ ಜಾಗರೂಕತೆ ವಹಿಸುವ ಬಗ್ಗೆ ಒತ್ತಿ ಹೇಳುತ್ತದೆ.
ವಿಶ್ವದ ಬಲಿಷ್ಠ ರಾಷ್ಟ್ರಗಳನ್ನೇ ಬೆಚ್ಚಿ ಬೀಳಿಸಿದ ಡೆಲ್ಟಾ ವೈರಸ್
ಭಾರತದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಡೆಲ್ಟಾ ರೂಪಾಂತರ ವೈರಸ್ ಇಂದಿ ಇಡೀ ಜಗತ್ತಿನ ಬಲಿಷ್ಛ ರಾಷ್ಟ್ರಗಳನ್ನೇ ಬೆಚ್ಚಿ ಬೀಳಿಸುತ್ತಿದೆ. ದೇಶದಲ್ಲಿ ಅಕ್ಟೋಬರ್ ವೇಳೆಗೆ ಮೊದಲು ಕಾಣಿಸಿಕೊಂಡ ಡೆಲ್ಟಾ ವೈರಸ್ ಎರಡನೇ ಅಲೆಗೆ ಪ್ರಮುಖ ಕಾರಣವಾಗಿತ್ತು. ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು ತೆರೆದುಕೊಂಡವು. ಭಾರತದಲ್ಲಿ ಕೊವಿಡ್-19 ಮೊದಲ ಅಲೆಯು ಸೀಮಿತ ಪ್ರಮಾಣದಲ್ಲಿ ಅಪಾಯ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸಾರ್ವಜನಿಕವಾಗಿ ಆಚರಿಸಿದ ಹಬ್ಬ ಹರಿದಿನಗಳಿಂದಾಗಿ ಮಾರ್ಚ್ ವೇಳೆಗೆ ಎರಡನೇ ಅಲೆಯು ಶುರುವಾಯಿತು.
ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಆಸ್ಪತ್ರೆಗಳು, ಸ್ಮಶಾನಗಳು ಭರ್ತಿಯಾಗಲು ಶುರುವಾಯಿತು. ಸಂಶೋಧಕರ ಒಂದು ಅಂದಾಜಿನ ಪ್ರಕಾರ, ಎರಡನೇ ಅಲೆಯ ಸಂದರ್ಭದಲ್ಲೇ 50 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಆದರೆ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಈವರೆಗೂ 4,24,773 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.
ಕೊರೊನಾವೈರಸ್ ಮೂರನೇ ಅಲೆಗೆ 5 ತಿಂಗಳು
ಕಳೆದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗೂ ಮುಂದಿನ ಅಲೆಗೂ ನಡುವೆ ಕೇವಲ 5 ತಿಂಗಳ ಅಂತರವಿದೆ. ದೇಶದಲ್ಲಿ ಇದೀಗ ಮತ್ತೆ ಪ್ರತಿನಿತ್ಯ 40,000ಕ್ಕಿಂತಲೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿನಿತ್ಯ 40,000ಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಈ ಪೈಕಿ ಅರ್ಧದಷ್ಟು ಪ್ರಕರಣಗಳು ಕೇರಳದಲ್ಲೇ ಪತ್ತೆಯಾಗುತ್ತಿವೆ. ಕೇರಳ ಕೊವಿಡ್-19 ಮೂರನೇ ಅಲೆಯಲ್ಲೂ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದೆ.
"ಜುಲೈ ತಿಂಗಳಿನಲ್ಲಿ ಕೇರಳ ಮತ್ತು ಈಶಾನ್ಯದ ಕೆಲವು ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಕಂಡು ಬಂದಿದೆ," ಎಂದು ಕೊವಿಡ್-19 ಟ್ರ್ಯಾಕರ್ ಅಭಿವೃದ್ಧಿಪಡಿಸಿರುವ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೌಲ್ ಕುಟ್ಟುಮಾನ್ ಹೇಳಿದ್ದಾರೆ. "ಆದರೆ ಕೆಲವು ರಾಜ್ಯಗಳು ಜುಲೈನಲ್ಲಿ ಅಲ್ಪಾವಧಿಯಲ್ಲೇ ಉಲ್ಬಣಗೊಂಡ ಕೊರೊನಾವೈರಸ್ ಪ್ರಕರಣಗಳ ಪ್ರಮಾಣ ತ್ವರಿತ ಗತಿಯಲ್ಲಿ ಕಡಿಮೆಯಾಯಿತು, ಇದರಿಂದಾಗಿ ದೇಶದ ಒಟ್ಟಾರೆ ಸ್ಥಿತಿ ಸ್ಥಿರವಾಗಿದೆ," ಎಂದು ತಿಳಿಸಿದ್ದಾರೆ.
ಕೊವಿಡ್-19 ಸೋಂಕಿತ ಪ್ರಕರಣಗಳ ಹೆಚ್ಚುವ ಅಪಾಯ
ಕೆಲವು ದೊಡ್ಡ ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆಯಾದಲ್ಲಿ ಪ್ರಸ್ತುತ ಸಮತೋಲನದ ಸ್ಥಿತಿಯಲ್ಲಿ ಇರುವ ದೇಶದಲ್ಲಿ ಒಟ್ಟಾರೆ ಸೋಂಕಿತ ಪ್ರಕರಣಗಳ ಪ್ರಮಾಣವು ಮತ್ತೆ ಏರುಮುಖವಾಗಿ ಸಾಗುತ್ತದೆ. ದೇಶದಲ್ಲಿ ಒಂದು ಹಂತದವರೆಗೂ ಸೋಂಕು ನಿಧಾನಗತಿಯಲ್ಲಿ ಸೋಂಕು ಹರಡುತ್ತದೆ. ಲಸಿಕೆ ವಿತರಣೆ ವ್ಯಾಪ್ತಿ ಹೆಚ್ಚಿಸುವವರೆಗೂ ಇದು ಹಾಗೆಯೇ ಮುಂದುವರಿಯುತ್ತದೆ ಎಂದು ನಿರೀಕ್ಷಿಸಬಹುದು, ಎಂದು ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೌಲ್ ಕುಟ್ಟುಮಾನ್ ಹೇಳಿದ್ದಾರೆ.
ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ ಹೇಗಿದೆ?
ಕಳೆದ 24 ಗಂಟೆಗಳಲ್ಲಿ 40,134 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 36,946 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 422 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,16,95,958ಕ್ಕೆ ಏರಿಕೆಯಾಗಿದೆ. ಈವರೆಗೂ 3,08,57,467 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 4,24,773 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 4,13,718 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಶೇ. 7.6ರಷ್ಟು ಫಲಾನುಭವಿಗಳಿಗೆ ಲಸಿಕೆ
ಸುಮಾರು 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.7.6ರಷ್ಟು ಜನರಿಗೆ ಮಾತ್ರ ಲಸಿಕೆ ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 17,06,598 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದ್ದು, ಈವರೆಗೂ 47,22,23,639 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಲಸಿಕೆ ವಿತರಣೆಯಲ್ಲಿನ ವಿಳಂಬವು ಕೊರೊನಾವೈರಸ್ ಮೂರನೇ ಅಲೆಗೆ ಮುಖ್ಯ ಕಾರಣವಾಗಲಿದೆ. ಇದರ ಮಧ್ಯೆ ದೇಶದಲ್ಲಿ 18 ವರ್ಷ ಮೇಲ್ಪಟ್ಟ 96 ಲಕ್ಷ ಫಲಾನುಭವಿಗಳಿಗೆ ಡಿಸೆಂಬರ್ ಅಂತ್ಯದ ವೇಳೆಗೆ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.
ಭಾರತದಲ್ಲಿ 4 ಹಂತಗಳ ಲಸಿಕೆ ವಿತರಣೆ ಅಭಿಯಾನ
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.
ದೇಶದ ಆರ್ಥಿಕತೆಯ ಮೇಲೆ ಮೂರನೇ ಅಲೆಯ ಪ್ರಭಾವ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಈ ಮೊದಲಿನಂತೆ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಇದರ ಮಧ್ಯೆ ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಸಲಹೆಗಾರ ರಾಮ್ ವಿಶ್ವಕರ್ಮ ಪ್ರಕಾರ, "ನಗರ ಹಾಗೂ ನೆರೆಹೊರೆ ಪ್ರದೇಶಗಳಿಗೆ ವೈರಸ್ ಹರಡಲು ಮೂಲ ಕಾರಣವಾಗಿರುವ ಗಾಳಿ ಮತ್ತು ಕೊಳಚೆ ನೀರಿನ ಮೇಲೆ ಹೆಚ್ಚು ನಿಗಾ ವಹಿಸಬೇಕಿದೆ. ಮುಂದಿನ ಅಲೆಯ ವೇಳೆಗೆ ಜೀವ ಮತ್ತು ಜೀವನವನ್ನು ರಕ್ಷಿಸಿಕೊಳ್ಳುವುದಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರ ಜೊತೆಗೆ ಈ ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಗೊಳ್ಳಬೇಕು," ಎಂದು ಸಲಹೆ ನೀಡಿದ್ದಾರೆ.