ಕೋವಿಡ್ ಪರಿಸ್ಥಿತಿ; ಕೇಂದ್ರದ ವಿರುದ್ಧ ಹಲವು ಆರೋಪ ಮಾಡಿದ ಸೋನಿಯಾ ಗಾಂಧಿ
ನವದೆಹಲಿ, ಮೇ 10; "ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕೋವಿಡ್ 2ನೇ ಅಲೆಗೆ ದೇಶದ ಜನರು ಬಹುದೊಡ್ಡ ಬೆಲೆಯನ್ನು ತೆತ್ತಿದ್ದಾರೆ" ಎಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.
ಸೋಮವಾರ ವರ್ಚುವಲ್ ಆಗಿ ನಡೆದ ಸಿಡಬ್ಲ್ಯುಸಿ ಸಭೆಯನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಿದರು. ಐದು ರಾಜ್ಯಗಳ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಈ ಸಭೆಯನ್ನು ನಡೆಲಾಯಿತು. ಸಭೆಯಲ್ಲಿ ಮಾತನಾಡಿದ ಅವರು, "ದೇಶದ ಆರೋಗ್ಯ ವ್ಯವಸ್ಥೆ ಕುಸಿದು ಹೋಗಿದೆ" ಎಂದು ದೂರಿದರು.
ಸಭೆಯಲ್ಲಿ ಕೋವಿಡ್ ವಿರುದ್ಧದ ಲಸಿಕೆ ಅಭಿಯಾನ ವಿಫಲವಾದ ಕುರಿತು ಚರ್ಚೆಗಳು ನಡೆದವು. ಲಸಿಕೆ ಪಡೆಯಲು ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಿದ್ದರಿಂದ ಗ್ರಾಮೀಣ ಪ್ರದೇಶದ ಜನರು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಚರ್ಚೆ ನಡೆಯಿತು.

ಕೋವಿಡ್ 2ನೇ ಅಲೆಯಲ್ಲಿ ಸೋಂಕು ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿದೆ. ಆದರೆ ಅಲ್ಲಿ ಬೆಡ್, ಆಕ್ಸಿಜನ್, ಆರ್ಟಿಪಿಸಿಆರ್ ಪರೀಕ್ಷೆ ಮಾಡಬೇಕಾದ ವ್ಯವಸ್ಥೆಗಳಿಲ್ಲ. ಇದರಿಂದಾಗಿ ದೇಶದಲ್ಲಿ ಸಾವಿನ ಪ್ರಮಾಣ ಸಹ ಹೆಚ್ಚಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಯಿತು.
ದೇಶದ ಆರೋಗ್ಯ ಸಚಿವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತು. ಅಗತ್ಯ ವಸ್ತುಗಳ ಪೂರೈಕೆಯಲ್ಲಿಯೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಚರ್ಚೆ ನಡೆಸಿತು.
ಕೋವಿಡ್ ಸೋಂಕಿತರ ಸಾವಿನ ಬಗ್ಗೆ ಬರುತ್ತಿರುವ ಅಂಕಿ ಅಂಶಗಳು ಸುಳ್ಳು. ಹಲವು ಸಾವುಗಳು ದಾಖಲೆಗೆ ಸಿಗುತ್ತಿಲ್ಲ. ದೇಶದ ಜನರಿಂದ ಸತ್ಯವನ್ನು ಬಚ್ಚಿಡಲಾಗುತ್ತಿದೆ ಎಂದು ಕಾಂಗ್ರೆಸ್ ಸಭೆಯಲ್ಲಿ ಗಂಭೀರ ಆರೋಪ ಮಾಡಿತು.
ತಜ್ಞರು ನೀಡಿದ ವರದಿ, ಸೋಂಕು ತಡೆಯಲು ಮಾಡಿದ ಪ್ರಯತ್ನಗಳು, ಸಂಸದೀಯ ಉಪ ಸಮಿತಿ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರ ಪರಿಸ್ಥಿತಿ ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಕ್ಷ ಆರೋಪಿಸಿದೆ.












Click it and Unblock the Notifications