ದ್ರೌಪದಿ ಮುರ್ಮು ಪ್ರಮಾಣವಚನಕ್ಕೆ ಕ್ಷಣಗಣನೆ: ತವರಲ್ಲಿ ಸಂಭ್ರಮಾಚರಣೆ
ಭುವನೇಶ್ವರ, ಜುಲೈ 25: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಮೊದಲ ಬಾರಿಗೆ ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸುತ್ತಿದ್ದಾರೆ. ಫಲಿತಾಂಶ ಪ್ರಕಟವಾದ ದಿನದಿಂದ ಇಂದಿನವರೆಗೂ ದ್ರೌಪದಿ ಮುರ್ಮು ಅವರ ಸ್ವಗ್ರಾಮ ಉಪರ್ಬೆರದಲ್ಲಿ ಸಂಭ್ರಮಾಚರಣೆ ಜೋರಾಗಿದೆ.
ವರದಿಗಳ ಪ್ರಕಾರ, 60 ಮಂದಿ ದ್ರೌಪದಿ ಮುರ್ಮು ಅವರ ನಿಕಟ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಸೋಮವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ನವದೆಹಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ದೆಹಲಿಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಅವರ ಗ್ರಾಮ ಉಪರ್ಬೆರದಲ್ಲೇ ಟಿವಿಯಲ್ಲಿ ಗ್ರಾಮಸ್ಥರೆಲ್ಲ ಒಟ್ಟಿಗೆ ಕುಳಿತು ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನಿರ್ಧರಿಸಿದ್ದಾರೆ.
ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಕಾರ್ಯಕ್ರಮ: ಸಿಎಂ ಬೊಮ್ಮಾಯಿ ಭಾಗಿ
ದ್ರೌಪದಿ ಮುರ್ಮು ಪ್ರಮಾಣವಚನ ಸಮಾರಂಭದಲ್ಲಿಒಡಿಶಾ ಸಿಎಂ ಪಟ್ನಾಯಕ್, ರಾಜ್ಯಪಾಲ ಗಣೇಶಿ ಲಾಲ್, ಕೇಂದ್ರ ಸಚಿವರು ಮತ್ತು ರಾಜ್ಯದ ಸಂಸದರು, ಮಯೂರ್ಭಂಜ್ ಜಿಲ್ಲೆಯ ಆರು ಶಾಸಕರು, ಜಾರ್ಖಂಡ್ನ ರಾಜ್ಯಪಾಲ ರಮೇಶ್ ಬೈಸ್ ಮತ್ತು ಬಿಜೆಪಿಯ ರಾಜ್ಯ ಶಾಸಕಾಂಗ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಭಾಗವಹಿಸಲಿದ್ದಾರೆ. ದ್ರೌಪದಿ ಮುರ್ಮು 2015 ರಿಂದ 2021ರವರೆಗೆ ಜಾರ್ಖಂಡ್ನ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಗೈರಾಗುವ ಸಾಧ್ಯತೆ ಇದೆ. ಅವರು ಭಾನುವಾರ ದೆಹಲಿಯಲ್ಲಿ ಮುರ್ಮು ಅವರನ್ನು ಭೇಟಿಯಾಗಿ ರಾಂಚಿಗೆ ಮರಳಿದರು.
ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಾಷ್ಟ್ರದ ಅತ್ಯುನ್ನತ ಪದವಿಗೆ ಆಯ್ಕೆಯಾಗಿದ್ದಾರೆ. ಇಡೀ ದೇಶದ ಬುಡಕಟ್ಟು ಸಮುದಾಯ ಅವರ ಆಯ್ಕೆಗೆ ಸಂಭ್ರಮಾಚರಣೆ ಮಾಡಿದೆ. ಸೋಮವಾರ ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಚಿವರು, ಸಂಸದರು, ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಸಂತಸ ವ್ಯಕ್ತಪಡಿಸಿದ ಒಡಿಶಾ ಸಿಎಂ ಪಟ್ನಾಯಕ್
ಒಡಿಶಾ ಸಿಎಂ ಪಟ್ನಾಯಕ್ ಅವರು ಎಲ್ಲಾ ಬಿಜೆಡಿ ಸಂಸದರೊಂದಿಗೆ ದೆಹಲಿಯ ಅವರ ನಿವಾಸದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. "ನಾನು ನೂತನ ಅಧ್ಯಕ್ಷರನ್ನು ಅಭಿನಂದಿಸಲು ಬಂದಿದ್ದೇನೆ ಮತ್ತು ಅವರಿಗೆ ಶುಭ ಹಾರೈಸಿದೆ. ಒಡಿಶಾದ ಮಗಳು ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ನನಗೆ ಸಂತಸ ಮತ್ತು ಗೌರವ ತಂದಿದೆ" ಎಂದರು.
2000 ರಲ್ಲಿ ಬಿಜೆಡಿ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದಾಗ ಮುರ್ಮು ಪಟ್ನಾಯಕ್ ಅವರ ಮೊದಲ ಕ್ಯಾಬಿನೆಟ್ಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ದ್ರೌಪದಿ ಮುರ್ಮು ಪಟ್ನಾಯಕ್ ಅವರನ್ನು ಆಗಾಗ್ಗೆ ತನ್ನ ಸಹೋದರ ಎಂದು ಕರೆಯುತ್ತಿದ್ದರು. ಮುರ್ಮು 2000 ಮತ್ತು 2004 ರಲ್ಲಿ ಮಯೂರ್ಭಂಜ್ ಜಿಲ್ಲೆಯ ರಾಯರಂಗ್ಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಪರವಾಗಿ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
Breaking: ಜುಲೈ 25ರಂದು ನೂತನ ರಾಷ್ಟ್ರಪತಿ ದ್ರೌಪದಿ ಪ್ರಮಾಣ ವಚನ
ಮಯೂರ್ಭಂಜ್ ಸಂಸದೆಯ ಸಂತಸ
"ನಾನು ಮಯೂರ್ಭಂಜ್ನ ರಾಯರಂಗ್ಪುರ ಉಪವಿಭಾಗಕ್ಕೆ ಸೇರಿದವಳಾಗಿದ್ದೇನೆ ಮತ್ತು ಇದು ಎಲ್ಲಾ ಒಡಿಯಾಗಳಿಗೆ, ವಿಶೇಷವಾಗಿ ಮಯೂರ್ಭಂಜ್ ಜಿಲ್ಲೆಯ ಜನರಿಗೆ ಹೆಮ್ಮೆಯ ಕ್ಷಣವಾಗಿದೆ, ಏಕೆಂದರೆ ಸಣ್ಣ ಹಳ್ಳಿಯ ಮಗಳು ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸುತ್ತಾರೆ" ಎಂದು ಬಿಜೆಡಿ ಸಂಸದೆ ಮಮತಾ ಮೊಹಾಂತ ಹೇಳಿದ್ದಾರೆ.
ದೀದಿಗಾಗಿ ಸಂತಾಲಿ ಸೀರೆ ತಂದ ಸೊಸೆ
ಉಪರ್ಬೇಡ ಗ್ರಾಮದಲ್ಲಿ ಸಂತಸ ಮುಗಿಲುಮುಟ್ಟಿದೆ. ದ್ರೌಪದಿ ಮುರ್ಮು ಅವರ ಸೊಸೆ ಸುಕ್ರಿ ತುಡು ಮತ್ತು ಅವರ ಪತಿ ತಾರಿನಿಸೇನ್ ತುಡು ಪ್ರಮಾಣ ವಚನ ಸ್ವೀಕಾರಕ್ಕಾಗಿ ದೆಹಲಿಗೆ ತೆರಳಿದ್ದಾರೆ. "ನಾನು ದೀದಿಗಾಗಿ ಸಂತಾಲಿ ಸೀರೆ ತಂದಿದ್ದೇನೆ. ನನಗೆ ರಾಷ್ಟ್ರಪತಿ ಭವನದ ಪ್ರೋಟೋಕಾಲ್ ಬಗ್ಗೆ ತಿಳಿದಿಲ್ಲ, ಆದರೆ ಅವರು ಪ್ರಮಾಣವಚನ ಸ್ವೀಕರಿಸುವಾಗ ಅದನ್ನು ಧರಿಸಲು ನಾನು ಮನವಿ ಮಾಡುತ್ತೇನೆ" ಎಂದು ಸುಕ್ರಿ ಹೇಳಿದರು.
ಸಂತಾಲಿ ಸೀರೆಗಳನ್ನು ವಿಶೇಷ ಸಂದರ್ಭಗಳಲ್ಲಿ ಇಲ್ಲಿನ ಮಹಿಳೆಯರು ಧರಿಸುತ್ತಾರೆ. "ನಾನು ದೀದಿಯ ನೆಚ್ಚಿನ ಅರಿಸಾ ಪಿತಾ (ಸಿಹಿ ಪ್ಯಾನ್ಕೇಕ್) ಅನ್ನು ಸಹ ತಂದಿದ್ದೇನೆ. ಅವರಿಗೆ ಅದು ಇಷ್ಟವಾದ ಸಿಹಿ" ಎಂದು ಸುಕ್ರಿ ಹೇಳಿದರು.
ಮುರ್ಮು ಅವರ ಮಗಳು ಇತಿಶ್ರೀ, ಬ್ಯಾಂಕ್ ಅಧಿಕಾರಿ ಮತ್ತು ಅವರ ಪತಿ ಗಣೇಶ್ ಹೆಂಬ್ರಾಮ್ ಈಗಾಗಲೇ ದೆಹಲಿಯಲ್ಲಿದ್ದಾರೆ ಮತ್ತು ದ್ರೌಪದಿ ಮುರ್ಮು ಜೊತೆ ಉಳಿದುಕೊಂಡಿದ್ದಾರೆ.
Recommended Video