"ನೀನೇ ಅಲ್ವಾ ಅಷ್ಟು ಜನರಿಗೆ ಕೊರೊನಾವೈರಸ್ ಅಂಟಿಸಿದ್ದು?"
ಬೆಂಗಳೂರು, ಮಾರ್ಚ್ 18: ಕೊರೊನಾವೈರಸ್ ಸೋಂಕು ಬಂತು. ಕೊರೊನಾವೈರಸ್ ಸೋಂಕು ಹೋಯಿತು. ಹೀಗೆ ಬಂದು ಹೋಗಿರುವುದರ ನಡುವೆ ಸೋಂಕಿತರನ್ನು ಅವಮಾನಕ್ಕೆ ದೂಡುವಂತಾ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗುತ್ತಿದೆ.
"ಹೋ ಅವಳಾ.. ಅಯ್ಯೋ ಅವಳಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿತ್ತಂತೆ ರೀ. ಅವಳಿಂದ ಇಷ್ಟು ಜನರಿಗೆ ಸೋಂಕು ಹರಡಿತಂತೆ. ಆಕೆಯಿಂದ ಆದಷ್ಟು ದೂರವಿರಿ. ನೀನೇ ಅಲ್ವಾ ಇಷ್ಟು ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಸಿದ್ದು". ಇಂಥ ಲೇವಡಿ ಮತ್ತು ಅವಮಾನದ ಮಾತುಗಳೇ ವಿದ್ಯಾರ್ಥಿನಿ ಒಬ್ಬಳಿಗೆ ಮಾನಸಿಕ ವೇದನೆಯನ್ನು ನೀಡಿದ ಘಟನೆ ಬೆಂಗಳೂರಿನಲ್ಲೇ ವರದಿಯಾಗಿದೆ.
ದಿನ ಬೆಳಗಾದರೆ ಸಾಕು. ತಮ್ಮ ಜೊತೆಗೇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರು ನನ್ನ ಬಗ್ಗೆ ಲೇವಡಿ ಮಾಡುತ್ತಿದ್ದರು. ಈಕೆಯಿಂದಲೇ ಅಷ್ಟೊಂದು ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿತು. ಹೀಗೆ ಅವಮಾನಿಸುತ್ತಾ ಪೀಡಿಸುತ್ತಿದ್ದ ಸಹಪಾಠಿಗಳ ವಿರುದ್ಧ ನೊಂದ ಯುವತಿಯೊಬ್ಬಳು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟಕ್ಕೆ ದೂರು ನೀಡಿದ್ದಾರೆ. ಈ ಕುರಿತು ಒಂದು ಮನ ಮಿಡಿಯುವ ಸ್ಟೋರಿ "Oneindia Kannada" ಓದುಗರಿಗಾಗಿ.

ಎನ್ಎಸ್ ಯುಐಗೆ ದೂರು ನೀಡಿದ ಯುವತಿ
ತಮ್ಮ ಜೊತೆಗೆ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಕೀಳು ಮನೋಭಾವದಿಂದ ನನ್ನನ್ನು ನೋಡುತ್ತಿದ್ದಾರೆ. ಸ್ನೇಹಿತರೇ ನೀಡುತ್ತಿರುವ ಮಾನಸಿಕ ಹಿಂಸೆಯಿಂದ ನನ್ನನ್ನು ರಕ್ಷಿಸಿ ಎಂದು ನೊಂದ ಯುವತಿಯು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಸಂಯೋಜಕ ಮೊಹಮ್ಮದ್ ಫಹಾದ್ ಅವರಿಗೆ ಕಳೆದ ಮಾರ್ಚ್ 16ರಂದು ದೂರು ನೀಡಿದ್ದರು. ವಾಟ್ಸಾಪ್ ಗ್ರೂಪ್ ನಲ್ಲಿ ಯುವತಿ ಬಗ್ಗೆ ಅಪಹಾಸ್ಯ ಮಾಡುವ ರೀತಿಯಲ್ಲಿ ಕಳುಹಿಸಿದ ಸಂದೇಶಗಳ ಸ್ಕ್ರೀನ್ ಶಾಟ್ ಅನ್ನು ಸಹ ದೂರಿನ ಜೊತೆಗೆ ಲಗತ್ತಿಸಲಾಗಿದೆ.

"ಸ್ನೇಹಿತರ ಬಳಿ ನೋವು ಹೇಳಿಕೊಂಡಿದ್ದೇ ತಪ್ಪಾಯಿತು?"
"ಕೊರೊನಾವೈರಸ್ ಸೋಂಕು ತಗುಲಿದ ಸಂದರ್ಭದಲ್ಲಿ ನಾನು ಎದುರಿಸಿದ ನೋವು ಮತ್ತು ಯಾತನೆಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡೆನು. ಅದೇ ವಿಷಯವನ್ನು ಇಟ್ಟುಕೊಂಡು ಅವರು ಇಂದು ನನ್ನ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ನನಗೆ ಅಪಹಾಸ್ಯವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ನನಗೆ ಮಾನಸಿಕ ವೇದನೆ ಉಂಟಾಗುತ್ತಿದೆ. ನಾನು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದು, ದೈಹಿಕವಾಗಿ ನನ್ನ ಆರೋಗ್ಯ ಕ್ಷೀಣಿಸುತ್ತಿದೆ" ಎಂದು ನೊಂದ ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವತಿ ವಿರುದ್ಧ ಉದ್ದೇಶಪೂರ್ವಕವಾಗಿ ಸೋಂಕು ಹರಡಿದ ಆರೋಪ
ತನಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಗೊತ್ತಿದ್ದರೂ ಕೂಡಾ ಯುವತಿಯು ಉದ್ದೇಶಪೂರ್ವಕವಾಗಿ ಸೋಂಕು ಹರಡುವ ಉದ್ದೇಶದಿಂದಲೇ ಕಾಲೇಜಿಗೆ ಹೋಗಿದ್ದಳು ಎಂದು ವಾಟ್ಸಾಪ್ ಗ್ರೂಪ್ ಸಂದೇಶಗಳಲ್ಲಿ ದೂಷಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯುವತಿ, ತಮಗೆ ಆಗಾಗ ಮೈಗ್ರೇನ್ ಮತ್ತು ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದೆ. ಇತ್ತೀಚಿಗೆ ಉಸಿರಾಟ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ.

"ಕೊವಿಡ್-19 ಸೋಂಕು ಹರಡಲು ನಾನಲ್ಲ ಕಾರಣ"
"ಸೈನಸ್ ಮತ್ತು ಮೈಗ್ರೇನ್ ಸಮಸ್ಯೆಯಿಂದಾಗಿ ನನಲ್ಲಿ ಜ್ವರ ಕಾಣಿಸಿಕೊಂಡಿತ್ತು. ಅಲ್ಲಿವರೆಗೂ ನನಗೆ ಕೊವಿಡ್-19 ಸೋಂಕು ತಗುಲಿರಬಹುದು ಎಂದು ಊಹಿಸಿರಲಿಲ್ಲ. ನಮ್ಮ ಕ್ಲಾಸಿನ ಸ್ನೇಹಿತೆಯೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಖಾತ್ರಿಯಾದ ಬಳಿಕ ನಾನು ಮತ್ತು ನನ್ನ ಇತರೆ ಸ್ನೇಹಿತೆಯರು ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಗಾದೆವು. ಆಗ ನನಗೂ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತು. ಈ ಸೋಂಕಿನ ವರದಿ ಬರುವವರೆಗೂ ನಾನು ಮನೆಯಲ್ಲೇ ದಿಗ್ಬಂಧನದಲ್ಲಿದ್ದೆ. ವರದಿ ಹೊರ ಬರುತ್ತಿದ್ದಂತೆ ನನ್ನ ಸ್ನೇಹಿತೆಯರು ಮತ್ತು ಶಿಕ್ಷಕರಿಗೂ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಸೋಂಕಿನ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೆನು" ಎಂದು ಯುವತಿ ಹೇಳಿದ್ದಾರೆ.

ಕೊರೊನಾ ಸೋಂಕಿಗೆ ಯುವತಿ ವಿರುದ್ಧ ಸ್ನೇಹಿತರ ಬೊಟ್ಟು
ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಸ್ನೇಹಿತರೆಲ್ಲ ಯುವತಿ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ಸೋಂಕಿನ ಲಕ್ಷಣಗಳಿದ್ದರೂ ಕಾಲೇಜಿಗೆ ಬಂದು ಎಲ್ಲರಿಗೂ ಕೊವಿಡ್-19 ಅಂಟುವಂತೆ ಮಾಡಿದ್ದಾರೆ ಎಂದು ದೂಷಿಸಲಾಗುತ್ತಿದೆ. ಅಲ್ಲದೇ, ನಾವು ಮತ್ತು ನಮ್ಮ ಕುಟುಂಬ ಸದಸ್ಯರು ಕೊರೊನಾವೈರಸ್ ಸೋಂಕಿನ ಅಪಾಯವನ್ನು ಎದುರಿಸುತ್ತಿರುವುದಕ್ಕೆ ಯುವತಿಯೇ ಕಾರಣ ಎಂದು ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ತನ್ನ ಬೆಂಬಲಕ್ಕೆ ನೀಡುವಂತೆ ಯುವತಿಯು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟಕ್ಕೆ ಮೊರೆ ಇಟ್ಟಿದ್ದಾರೆ.

ಯುವತಿಗೆ ಅಪಹಾಸ್ಯ ಮಾಡಿದ ಸ್ನೇಹಿತನ ಅಮಾನತು
ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಕಾಲೇಜು ನಿರ್ದೇಶಕರು ಮತ್ತು ನಿರ್ವಹಣಾ ಅಧಿಕಾರಿಗಳನ್ನು ಭೇಟಿ ಮಾಡಿದರು. ಯುವತಿಗೆ ಅಪಹಾಸ್ಯ ಹಾಗೂ ಚುಡಾಯಿಸಿದ ವ್ಯಕ್ತಿಯನ್ನು ಕಾಲೇಜಿನಿಂದ ಅಮಾನತುಗೊಳಿಸಲು ಎರಡು ದಿನ ಕಾಲಾವಕಾಶ ನೀಡುವಂತೆ ಆಡಳಿತ ಮಂಡಳಿ ಕೋರಿದೆ. ತಿಲಕ್ ನಗರ್ ಪೊಲೀಸರ ಎದುರಿಗೆ ಹಾಜರಾದ ಸಂಘಟನೆ ಸದಸ್ಯರು ದೂರು ಸಲ್ಲಿಸಿದರು. ಯುವತಿ ಬಗ್ಗೆ ಅಶ್ಲೀಲ ಭಾಷೆ ಬಳಸುವುದು ಅಪರಾಧವಾಗುತ್ತದೆ. ಯುವತಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಆಕೆ ಮನೆಯಲ್ಲೇ ಇರಬೇಕಾದ ವಿಷಯ ತಿಳಿದಾಗ ಬೆಂಬಲ ನೀಡಬೇಕಾದವರು ಅವಮಾನಿಸಿದ್ದಾರೆ. ಯುವತಿಗೆ ಕೊವಿಡ್-19 ಸೋಂಕು ತಗುಲಿರುವುದು ಗೊತ್ತಿದ್ದಲೂ ಕಾಲೇಜು ಮುಚ್ಚಿಸದೇ ನಿರ್ಲಕ್ಷ್ಯ ತೋರಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.












Click it and Unblock the Notifications