ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ?
ನವದೆಹಲಿ, ಫೆಬ್ರವರಿ 7: ಚೀನಾದಲ್ಲಿ ಕೊರೊನಾ ವೈರಸ್ ಪೀಡಿತ ಪ್ರದೇಶವಾದ ವುಹಾನ್ನಿಂದ ಭಾರತ ತನ್ನ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಕರೆತಂದ ಘಟನೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಈ ಘಟನೆಯನ್ನು ಪಾಕಿಸ್ತಾನದ ವಿದ್ಯಾರ್ಥಿಗಳು ಹೃದಯಸ್ಪರ್ಶಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.
ಏಕೆಂದರೆ, ಭಾರತ ತನ್ನ ದೇಶದ ವಿದ್ಯಾರ್ಥಿಗಳ ರಕ್ಷಣೆಗೆ ಆದ್ಯತೆ ವಹಿಸಿ ಅವರನ್ನು ಅಲ್ಲಿಂದ ಎರಡು ಬಾರಿ ವಿಮಾನಗಳಲ್ಲಿ ಕರೆತಂದು ಅವರನ್ನು ಸೇನಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದರೆ, ಪಾಕಿಸ್ತಾನ ಸರ್ಕಾರ ಅಲ್ಲಿರುವ ತನ್ನ ವಿದ್ಯಾರ್ಥಿಗಳಿಗೆ, 'ಅಲ್ಲಿಯೇ ಇರಿ, ಇಲ್ಲಿಗೆ ಬರಬೇಡಿ' ಎಂದು ಸೂಚಿಸಿದೆ.
ಇಂತಹ ಹೀನಾಯ ಸ್ಥಿತಿಯಲ್ಲಿ ಭೀತಿಯಿಂದಲೇ ಬದುಕುವಂತಾಗಿರುವ ಪಾಕಿಸ್ತಾನದ ವಿದ್ಯಾರ್ಥಿಗಳು, ಭಾರತದ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನೂ ಭಾರತೀಯ ರಾಯಭಾರ ಕಚೇರಿ ಕಳುಹಿಸಿದ್ದ ಬಸ್ಗಳಲ್ಲಿ ಕರೆದೊಯ್ಯುವ ವಿಡಿಯೋ ಮತ್ತು ಫೋಟೊಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಭಾರತವನ್ನು ಶ್ಲಾಘಿಸಿದ ಪಾಕ್ ವಿದ್ಯಾರ್ಥಿಗಳು
ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವ ಪಾಕಿಸ್ತಾನ ವಿದ್ಯಾರ್ಥಿಗಳು ಭಾರತ ಸರ್ಕಾರವನ್ನು ಶ್ಲಾಘಿಸುತ್ತಾ, ತಮ್ಮ ಸರ್ಕಾರವನ್ನು ತೆಗಳುತ್ತಿದ್ದಾರೆ. ಗುರುವಾರದ ವೇಳೆಗೆ ಚೀನಾದಲ್ಲಿ 28,000 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದರೆ, ಕನಿಷ್ಠ 560 ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೂ ವುಹಾನ್ ಸೇರಿದಂತೆ ವಿವಿಧೆಡೆ ಇರುವ ತನ್ನ ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸುವ ಪ್ರಯತ್ನಕ್ಕೆ ಪಾಕಿಸ್ತಾನ ಸರ್ಕಾರ ಮುಂದಾಗಿಲ್ಲ.
|
ಮನವಿ ಮಾಡಿದರೆ ಪರಿಗಣನೆ
ಇದರ ನಡುವೆಯೇ ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ಅಲ್ಲಿಂದ ಸ್ಥಳಾಂತರ ಮಾಡುವ ಮೂಲಕ ಅವರನ್ನು ರಕ್ಷಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಸರ್ಕಾರಕ್ಕೆ ಮನವಿಗಳ ಮಹಾಪೂರವೇ ಹರಿದುಬರುತ್ತಿದೆ. ಇದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದ್ದು, ಇಮ್ರಾನ್ ಖಾನ್ ಸರ್ಕಾರ ಮನವಿ ಮಾಡಿದರೆ ಅದನ್ನು ಪರಿಗಣಿಸುವುದಾಗಿ ತಿಳಿಸಿದೆ.
ವುವಾಹ್ನಲ್ಲಿ ಸಿಲುಕಿರುವ ಪಾಕಿಸ್ತಾನದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆಯೇ ಎಂಬ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನ ಸರ್ಕಾರ ಇದುವರೆಗೂ ಅಂತಹ ಯಾವುದೇ ಮನವಿ ಮಾಡಿಲ್ಲ ಎಂದು ತಿಳಿಸಿದರು.

ಪರಿಸ್ಥಿತಿ ಎದುರಾದರೆ ನೋಡುತ್ತೇವೆ
'ಆದರೆ ಅಂತಹ ಪರಿಸ್ಥಿತಿ ಎದುರಾದರೆ ನಮ್ಮ ಬಳಿ ಸಾಕಷ್ಟು ಸಂಪನ್ಮೂಲ ಲಭ್ಯವಿದ್ದರೆ ಅದರ ಬಗ್ಗೆ ಖಂಡಿತವಾಗಿಯೂ ಆಲೋಚಿಸುತ್ತೇವೆ' ಎಂದು ಹೇಳಿದರು. ಎರಡು ಏರ್ ಇಂಡಿಯಾ ವಿಮಾನಗಳಲ್ಲಿ ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳು ಸೇರಿದಂತೆ ಎಲ್ಲ 645 ಪ್ರಯಾಣಿಕರನ್ನು ಕರೆತರಲಾಗಿದ್ದು, ಯಾರಲ್ಲಿಯೂ ವೈರಸ್ ಪತ್ತೆಯಾಗಿಲ್ಲ. ಅವರನ್ನು ಸೇನಾ ನೆಲೆ ಮತ್ತು ಐಟಿಬಿಪಿ ಕ್ಯಾಂಪಸ್ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ರವೀಶ್ ಕುಮಾರ್ ತಿಳಿಸಿದರು.
|
ಚೀನಾದ ಮುಲಾಜಿನಲ್ಲಿ ಪಾಕಿಸ್ತಾನ
ಬೀಜಿಂಗ್ನೊಂದಿಗೆ ಬಾಂಧವ್ಯದ ಕಾರಣದಿಂದ ಪಾಕಿಸ್ತಾನದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವುದಿಲ್ಲ ಎಂದು ಇಮ್ರಾನ್ ಖಾನ್ ಸರ್ಕಾರ ಮಂಗಳವಾರ ಹೇಳಿತ್ತು. ವೈರಸ್ ಕಾರಣದಿಂದ ಇತರೆ ದೇಶಗಳು ಚೀನಾ ಪ್ರಯಾಣದ ಮೇಲೆ ನಿಷೇಧ ಹೇರುತ್ತಿದ್ದರೆ, ಚೀನಾದ ಮುಲಾಜಿನಲ್ಲಿರುವ ಪಾಕಿಸ್ತಾನ, ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಒಂದೊಮ್ಮೆ ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಮರಳಿದರೆ ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹೀಗಾಗಿ ನೀವು ಚೀನಾದಲ್ಲೇ ಇರಿ ಎಂದು ಪಾಕಿಸ್ತಾನದ ರಾಯಭಾರಿ ನಗ್ಮಾನ ಹಷ್ಮಿ ಹೇಳಿದ್ದಾರೆ. ಇದು ಚೀನಾದಲ್ಲಿರುವ ಪಾಕ್ ವಿದ್ಯಾರ್ಥಿಗಳನ್ನು ಕಂಗೆಡಿಸಿದೆ.












Click it and Unblock the Notifications